ಮದುವೆಗೆ ಮುಂಚೆ ಈ ಪರೀಕ್ಷೆ ಬೇಕೋ? ಬೇಡವೋ?
ಬೆಂಗಳೂರು. ಸೆ.15 : ಲೈಂಗಿಕ ಶಿಕ್ಷಣ ಮತ್ತು ಮದುವೆ ಮುನ್ನ ನಪುಂಸಕತೆ ಹಾಗೂ ಲೈಂಗಿಕ ರೋಗದ ಪರೀಕ್ಷೆ ಕುರಿತು ಚರ್ಚೆಗಳು ನಡೆದೇ ಇವೆ.
ಭಾರತಕ್ಕೆ ಹೋಲಿಸಿದರೆ ಮದುವೆ ಎಂಬುದೊಂದು ನಂಬಿಕೆ, ಇಲ್ಲಿ ಈ ಬಗೆಯ ಪರೀಕ್ಷೆಗಳನ್ನು ನಡೆಸುವ ಅಗತ್ಯವಿಲ್ಲ. ಇದೊಂದು ರೀತಿಯ ಸಂಪ್ರದಾಯ ವಿರೋಧಿಯಾಗಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಗಂಡನಿಂದ ಗೃಹ ದೌರ್ಜನ್ಯವಾಗಿದೆ ಎಂದು ಮಹಿಳೆಯೊಬ್ಬರು ದಾಖಲಿಸಿದ್ದ ದೂರು ಮಧುರೈ ಹೈ ಕೋರ್ಟ್ನಲ್ಲಿ ವಿಚಾರಕ್ಕೆ ಬಂದ ವೇಳೆ ನಪುಂಸಕತೆ ವಿಚಾರ ಚರ್ಚೆಗೆ ಬಂದಿದೆ.
ಇಬ್ಬರ ಸಮರ್ಥನೆಗಳನ್ನು ಆಲಿಸಿದ ನ್ಯಾಯಮೂರ್ತಿ ಎನ್.ಕಿರುಬಾಕರನ್ ಮದುವೆಗೆ ಮುಂಚೆ ವರನಿಗೆ ಪುರುಷತ್ವ, ವಧುವಿಗೆ ಕನ್ಯತ್ವ ಪರೀಕ್ಷೆ ನಡೆಸುವುದು ಕಡ್ಡಾಯವಾಗಬೇಕು ಎಂದು ಅಭಿಪ್ರಾಯ ವ್ಯಕ್ತಡಿಸಿಸದ್ದಾರೆ. ನಪುಂಸಕತ್ವ ಹೆಸರಿನಲ್ಲಿ ದಾಖಲಾಗುವ ವಿಚ್ಛೇದನ ಪ್ರಕರಣಗಳು ಕಡಿಮೆಯಾಗಬಹುದು ಎಂದಿದ್ದಾರೆ.
ಆದರೆ ಹಿರಿಯ ವೈದ್ಯರು ಈ ಬಗೆಯ ಪರೀಕ್ಷೆಗಳಿಗೆ ಅರ್ಥವಿಲ್ಲ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಮಹಿಳೆಯರು ಸಲ್ಲದ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಹೇಳಿದ್ದಾರೆ.(ಮದುವೆಯಾಗಬೇಕಾದರೆ ಈ ಪರೀಕ್ಷೆ ಕಡ್ಡಾಯ?)
ಪುರುಷತ್ವ ಪರೀಕ್ಷೆ ಎನ್ನುವುದು ಕಾನೂನಿನ ಒಂದು ಅಂಶ. ಇದು ಮಾನಸಿಕ ಸ್ಥಿತಿಯ ಮೇಲೆ ಅಥವಾ ಆರೋಗ್ಯದ ಮೇಲೆ ಪರಿಣಾಮ ಬೀರುವಂತಿರಬಾರದು. ಅನುಮಾನಗಳ ಬೆನ್ನು ಹತ್ತಿ ಜೀವಿಸುವ ಬದಲು ನಂಬಿಕೆ, ವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಲೈಂಗಿಕ ತಜ್ಞೆ ವಿಜಯಾ ನಾಗಸ್ವಾಮಿ ಹೇಳಿದ್ದಾರೆ.
ಪುರುಷರಿಗಾದರೆ ವೀರ್ಯ ಪರೀಕ್ಷೆ ನಡೆಸಬಹುದು. ಆದರೆ ಮಹಿಳೆಯರ ಫಲವತ್ತತೆ ಗುರುತಿಸಲು ಯಾವುದೇ ಆಧಾರವಿಲ್ಲ. ಸಂಪೂರ್ಣ ಪುರುಷತ್ವ ಪಡೆದವನು ತನ್ನ ಬೆಡ್ ರೂಮ್ ನಲ್ಲಿ ಕೆಲ ಸಮಸ್ಯೆ ಎದುರಿಸಿಯೇ ಇರುತ್ತಾನೆ ಎಂದು ನಾಗಸ್ವಾಮಿ ತಿಳಿಸುತ್ತಾರೆ.
ಪುರುಷನ ನಿಮಿರುವಿಕೆ ಮತ್ತಿತರ ಸಂಗತಿಗಳು ತಾತ್ಕಾಲಿಕ. ಇವಕ್ಕೆ ನಿರ್ದಿಷ್ಟ ಮಾನದಂಡವಿಲ್ಲ. ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ ಎಂದು ಡಾ. ನಾರಾಯಣ ರೆಡ್ಡಿ ಹೇಳುತ್ತಾರೆ.(ಪುರುಷತ್ವ ಪರೀಕ್ಷೆ ಎಂದರೇನು? ಏಕೆ ಮಾಡ್ಬೇಕು?)
ಕೇವಲ ಪುರುಷತ್ವ, ಕನ್ಯತ್ವ ಪರೀಕ್ಷೆ ಎಂದುಕೊಂಡು ಗೊಂದಲ ಸೃಷ್ಟಿಸಿಕೊಳ್ಳುವ ಬದಲು ಸರಿಯಾದ ಲೈಂಗಿಕ ಶಿಕ್ಷಣ ಪಡೆದುಕೊಳ್ಳುವುದು ಉತ್ತಮ ಎಂದು ತಿಳಿಸುತ್ತಾರೆ.
ವಕೀಲರಾದ ವನತಿ ಶ್ರೀನಿವಾಸನ್ ಹೇಳುವಂತೆ, ನಪುಂಸಕತೆಗೆ ವಿಚ್ಛೇದನವೊಂದೆ ಪರಿಹಾರವಲ್ಲ. ಕಾನೂನಿನಲ್ಲಿ ಇನ್ನು ಅನೇಕ ಆಯ್ಕೆಗಳಿವೆ. ತಮ್ಮ ಮದುವೆಯನ್ನು ಮುಂದುವರಿಸಬೇಕೋ, ಬಿಡಬೇಕೋ ಎಂಬುದು ಅವರ ವೈಯಕ್ತಿಕ ವಿಷಯ ಎನ್ನುತ್ತಾರೆ.