ಸರಕಾರದ ದುಡ್ಡಿನಲ್ಲಿ ಭಕ್ಷೀಸು ನೀಡಿದ ಖರ್ಗೆ ಸಾಹೇಬ್ರು
ನವದೆಹಲಿ, ಮೇ 30: ಆರ್ಥಿಕ ಸಂಕಷ್ಟದಲ್ಲಿರುವ ರೈಲ್ವೆ ಇಲಾಖೆಯ ಬೊಕ್ಕಸದಿಂದ ಇಲಾಖೆಯ ನೌಕರರಿಗೆ ಲಕ್ಷಾಂತರ ರೂಪಾಯಿ ಭಕ್ಷೀಸು ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ಮಾಜಿ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಸುತ್ತ ಈ ವಿವಾದ ಸುತ್ತಿಕೊಂಡಿದೆ.
ತಾವು ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ಇಲಾಖೆಯ ಖಾಸಗಿ ಸಿಬ್ಬಂದಿಗಳಿಗೆ ಸಿನಿಯಾರಿಟಿ ಆಧಾರದ ಮೇಲೆ ಬಹುಮಾನದ ರೂಪದಲ್ಲಿ ಈ ಹಣವನ್ನು ನೀಡಲಾಗಿದೆ. ಸುಮಾರು 47 ಲಕ್ಷ ರೂಪಾಯಿಗಳನ್ನು ಇದಕ್ಕಾಗಿ ಬಳಸಿಕೊಂಡಿದ್ದು ಈಗ ವಿವಾದಕ್ಕೆ ಗುರಿಯಾಗಿದೆ. (ರೈಲು ಪ್ರಯಾಣ ರದ್ದಾದರೆ ರಿಫಂಡ್ ಇಲ್ಲ)
ಖರ್ಗೆ ಜೊತೆ ಇಲಾಖೆಯ ರಾಜ್ಯ ಸಚಿವರುಗಳಾಗಿದ್ದ ಸೂರ್ಯ ಪ್ರಕಾಶ್ ಯಾದವ್, ಅಧೀರ್ ರಂಜನ್ ಚೌಧುರಿಯವರ ಹೆಸರೂ ಭಕ್ಷೀಸು ಪ್ರಕರಣದಲ್ಲಿ ಕೇಳಿ ಬರುತ್ತಿದೆ. ಸಂಬಳೇತರವಾಗಿ ಇಲಾಖೆಯ 328 ಸಿಬ್ಬಂದಿಗಳಿಗೆ 12 ರಿಂದ 20 ಸಾವಿರ ರೂಪಾಯಿವರೆಗೆ ಖರ್ಗೆ ಇಲಾಖೆಯ ಬೊಕ್ಕಸದಿಂದ ದಯಪಾಲಿಸಿದ್ದಾರೆ.
ಗ್ರೂಪ್ ಎ ನಿಂದ ಗ್ರೂಪ್ ಡಿ ವಿಭಾಗದ ಇಲಾಖೆಯ ತಮ್ಮ ಖಾಸಗಿ ಸಿಬ್ಬಂದಿಗಳ ಸೇವೆಯನ್ನು ಪ್ರಶಂಸಿಸಿ ದೆಹಲಿಯ ರೈಲ್ವೆ ಭವನದಲ್ಲಿ ಈ ಹಣವನ್ನು ನೀಡಲಾಗಿದೆ ಮತ್ತು ಈ ವೆಚ್ಚವನ್ನು ಅಧಿಕೃತವೆಂದು ಪಾಸ್ ಮಾಡಲಾಗಿದೆ.
ಬಹುಮಾನದ ಪಡೆದವರಲ್ಲಿ ಸೆಕ್ರೆಟರಿಗಳಿಂದ ಹಿಡಿದು ಡ್ರೈವರ್ ಮತ್ತು ಮನೆಯ ಅಡುಗೆಯವರೂ ಸೇರಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.