ಪ್ರತಿಭಟನೆಯಲ್ಲಿ ರಾಹುಲ್: ಗರಿಗೆದರಿದ ಕಾಂಗ್ರೆಸ್ಸಿಗರು
ನವದೆಹಲಿ, ಜು 8: ಸಂಸತ್ ಬಜೆಟ್ ಅಧಿವೇಶನದ ಮೊದಲ ದಿನ ಬೆಲೆ ಏರಿಕೆ ಮತ್ತು ಹಣದುಬ್ಬರದ ವಿರುದ್ದ ಕಾಂಗ್ರೆಸ್ ಸದಸ್ಯರು ಸರಕಾರದ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದಾಗ ರಾಹುಲ್ ಗಾಂಧಿ ತಮ್ಮ ಪಕ್ಷದ ಸದಸ್ಯರ ಪರವಾಗಿ ನಿಂತಿದ್ದು ದಿನದ ಪ್ರಮುಖಾಂಶಗಳಲ್ಲೊಂದು.
ಕಾಂಗ್ರೆಸ್ ಸದಸ್ಯರು 'ಏ ಕ್ಯಾ ಅಚ್ಚಾ ದಿನ್ ಹೇ' ಎಂದು ನರೇಂದ್ರ ಮೋದಿ ಸರಕಾರವನ್ನು ಅಣಕಿಸುತ್ತಾ ಸದನದಲ್ಲಿ ಭಾರೀ ಪ್ರತಿಭಟನೆ ನಡೆಸುತ್ತಿದ್ದರು. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಸದಸ್ಯರು ಬೆಲೆ ಏರಿಕೆಗೆ ಯುಪಿಎ ಸರಕಾರವೇ ಕಾರಣವೆಂದು ಮೂದಲಿಸುತ್ತಿದ್ದರು. (ರೈಲ್ವೆ ಬಜೆಟ್ 2014 ಲೈವ್)
ಆಗ ಮೂರನೇ ಸಾಲಿನಲ್ಲಿ ಕೂತಿದ್ದ ರಾಹುಲ್, ಸರಕಾರದ ವಿರುದ್ದ ಘೋಷಣೆ ಕೂಗುತ್ತಾ ಮೊದಲನೇ ಸಾಲಿನಲ್ಲಿ ಆಸೀನರಾಗಿದ್ದ ಸೋನಿಯಾ ಗಾಂಧಿ ಬಳಿ ಬಂದು ಶೇಮ್ ಶೇಮ್.. ಎಂದು ಸರಕಾರದ ವಿರುದ್ದ ಘೋಷಣೆ ಕೂಗಲಾರಂಭಿಸಿದರು.
ಉಪಾಧ್ಯಕ್ಷ ರಾಹುಲ್ ಗಾಂಧಿ ಸರಕಾರದ ವಿರುದ್ದದ ಪ್ರತಿಭಟನೆಗೆ ತಮ್ಮ ಪಕ್ಷದ ಸಂಸದರೊಂದಿಗೆ ಕೈಜೋಡಿಸಿದ್ದು ಸದಸ್ಯರಿಗೆ ಪುನಶ್ಚೇತನ ನೀಡಿದಂತಿತ್ತು. ಇದರಿಂದ ಮತ್ತಷ್ಟು ಹುಮ್ಮಸ್ಸಿನಿಂದ ಕಾಂಗ್ರೆಸ್ ಸಂಸದರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಸಂಸದರಿಗೆ ಟಿಎಂಸಿ, ಬಿಎಸ್ಪಿ ಮತ್ತು ಎಡಪಕ್ಷಗಲ ಸದಸ್ಯರೂ ಬೆಂಬಲ ಸೂಚಿಸಿದರು.
ಸಾಮಾನ್ಯವಾಗಿ ಸದನದ ಕಲಾಪಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಿಲ್ಲ ಎನ್ನುವ ಅಪವಾದದ ನಡುವೆ ರಾಹುಲ್ ಗಾಂಧಿ, ಸೋಮವಾರದ (ಜು 7) ಕಲಾಪಗಳಲ್ಲಿ ಕಾಂಗ್ರೆಸ್ ಸಂಸದರೊಂದಿಗೆ ಪ್ರತಿಭಟನೆ ನಡೆಸಿದ್ದರಿಂದ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.
ಹಣಕಾಸು ಸಚಿವ ಅರುಣ್ ಜೇಟ್ಲಿ ಉತ್ತರ
ಸೋಮವಾರ (ಜು 7) ಬೆಲೆ ಏರಿಕೆ ಮತ್ತು ಹಣದುಬ್ಬರದ ಮೇಲೆ ನಡೆದ ಚರ್ಚೆ ಮತ್ತು ಪ್ರತಿಭಟನೆಗೆ ಉತ್ತರಿಸುತ್ತಾ ಹಣಕಾಸು ಸಚಿವರು, ಈ ಎಲ್ಲಾ ಸಮಸ್ಯೆಗಳಿಗೆ ಕಳೆದ ಸರಕಾರದ ವೈಫಲ್ಯವೇ ಕಾರಣ. ಇದೊಂದು ಗಂಭೀರ ವಿಚಾರ, ಹಣದುಬ್ಬರ ನಿಯಂತ್ರಣಕ್ಕೆ ಸರಕಾರ ಬದ್ದವಾಗಿದೆ. ಆಲೂಗೆಡ್ದೆ ಮತ್ತು ಈರುಳ್ಳಿ ಪೂರೈಕೆ ಕೊರತೆ ಆಗಿಲ್ಲ ಎಂದು ಸ್ಪಷ್ಟನೆ ನೀಡಿದರು.
ವಿಪಕ್ಷಗಳ ಪ್ರತಿಭಟನೆ
ಹಣಕಾಸು ಸಚಿವರ ಸ್ಪಷ್ಟನೆ ವಿರೋಧ ಪಕ್ಷಗಳಿಗೆ ಸಮಾಧಾನ ತರಲಿಲ್ಲ. ಕಾಂಗ್ರೆಸ್ ಜೊತೆ ಟಿಎಂಸಿ, ಬಿಎಸ್ಪಿ, ಸಿಪಿಎಂ ಸಂಸದರೂ ಪ್ರತಿಭಟನೆಗೆ ಇಳಿದರು. ವಿರೋಧ ಪಕ್ಷಗಳು ಭಾರೀ ಕೋಲಾಹಲ ಎಬ್ಬಿಸಿದ್ದರಿಂದ ಸ್ಪೀಕರ್ ಸದನದ ಕಲಾಪವನ್ನು ಮುಂದೂಡಿದರು.
ರಾಹುಲ್ ಪ್ರತಿಭಟನೆಗೆ ಬಿಜೆಪಿ ಲೇವಡಿ
ರಾಹುಲ್ ಗಾಂಧಿ ಸಂಸತ್ತಿನಲ್ಲಿ ನಡೆಸಿದ ಪ್ರತಿಭಟನೆಗೆ ಪ್ರತಿಕ್ರಿಯಿಸುತ್ತಾ ಬಿಜೆಪಿಯ ರಾಜೀವ್ ಪ್ರತಾಪ್ ರೂಢಿ, ವಿರೋಧ ಪಕ್ಷದ ಸ್ಥಾನದಲ್ಲದಾರೂ ರಾಹುಲ್ ತಮ್ಮ ಕಾರ್ಯಶೈಲಿಯನ್ನು ಬದಲಿಸಿಕೊಳ್ಳುತ್ತಾರೆಂದು ಅಂದುಕೊಂಡಿದ್ದೆ. ಶೇಮ್..ಶೇಮ್.. ಎಂದು ಸದನದಲ್ಲಿ ಪ್ರತಿಭಟಿಸುತ್ತಿದ್ದರು. ಹೊಸ ಸರಕಾರದ ಮೊದಲ ಬಜೆಟ್ ಅಧಿವೇಶನದ ಮೊದಲ ದಿನವಿದು. ಮೊದಲ ದಿನದಲ್ಲಿ ರಾಹುಲ್ ಗಾಂಧಿಯವರ ವರ್ತನೆ ಶೇಮ್.. ಶೇಮ್.. ಎಂದು ರೂಢಿ ತಿರುಗೇಟು ನೀಡಿದರು.
ಕಾಂಗ್ರೆಸ್ ಸಮರ್ಥನೆ
ಸದನದ ಮೊದಲ ದಿನ ರಾಹುಲ್ ಗಾಂಧಿ ನಡೆಸಿದ ಪ್ರತಿಭಟನೆಯನ್ನು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ. ರಾಹುಲ್ ಗಾಂಧಿ ನಮ್ಮ ಪಕ್ಷದ ಉಪಾಧ್ಯಕ್ಷ ಮತ್ತು ವಿರೋಧ ಪಕ್ಷದ ಸಕ್ರಿಯ ಸದಸ್ಯ ಕೂಡಾ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಹೇಳಿದ್ದಾರೆ.
ಹೀನಾಯ ಸೋಲು
ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ನಂತರ ರಾಹುಲ್ ಗಾಂಧಿ ತಲೆದಂಡಕ್ಕೆ ಹಲವು ಹಿರಿಯ ಕಾಂಗ್ರೆಸ್ಸಿಗರೂ ಸೇರಿ ಹಲವಾರು ಮುಖಂಡರು ಒತ್ತಾಯಿಸಿದ್ದರು. ಸೋನಿಯಾ ಗಾಂಧಿ ಅಥವಾ ಪ್ರಿಯಾಂಕ ಅವರಿಗೆ ಪಕ್ಷದ ಜವಾಬ್ದಾರಿಯನ್ನು ನೀಡಬೇಕೆಂದು ಒತ್ತಾಯಿಸಿದ್ದರು.