ಶಸ್ತ್ರಚಿಕಿತ್ಸೆ ಮಾಡಿ ಹೊಟ್ಟೆಯಲ್ಲಿ ಟವಲ್ ಬಿಟ್ಟ ವೈದ್ಯರು
ಭಿಲಾಯಿ (ಜಾರ್ಖಂಡ), ಏ 5: ಆಪರೇಷನ್ ಮಾಡಿದಾಗ ಸಿಸರ್, ಗ್ಲೌಸ್ ಮರೆತ ಘಟನೆಯನ್ನು ಓದಿದ್ದೇವೆ, ಕೇಳಿದ್ದೇವೆ. ಇಲ್ಲಿನ ಸೆಕ್ಟರ್ 9 ಬಳಿಯ ಜವಾಹರ್ ಲಾಲ್ ನೆಹರೂ ಆಸ್ಪತ್ರೆಯ ವೈದ್ಯ ಮಹಾಶಯರು ಇನ್ನೂ ಕೊಂಚ ಮುಂದುವರಿದು ಹೊಟ್ಟೆಯಲ್ಲಿ ಟವಲ್ ಮರೆತು ದಂಡ ಕಟ್ಟಿಸಿಕೊಂಡ ಘಟನೆಯೊಂದು ವರದಿಯಾಗಿದೆ.
ಮಾರ್ಚ್ ತಿಂಗಳ ಮೊದಲ ವಾರದಲ್ಲಿ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ನಿಶಾಂತ್ ಕುಮಾರ್ ಸಿಂಗ್ ಎನ್ನುವ 24 ವರ್ಷದ ವ್ಯಕ್ತಿ ನೆಹರೂ ಆಸ್ಪತ್ರೆಗೆ ದಾಖಲಾಗುತ್ತಾನೆ.
ವೈದ್ಯೋ ನಾರಾಯಣಃ ಎನ್ನುವ ಮಾತಿದೆ. ಆದರೆ, ಡಾ.ಜಿತೇಂದ್ರ ಮತ್ತು ಡಾ. ಸಿಂಗ್ ಎನ್ನುವ ವೈದ್ಯರು ನಿಶಾಂತ್ ಅವರ ಆಮೂಲಾಗ್ರ ತಪಾಸಣೆ ನಡೆಸಿ ಶಸ್ತ್ರಚಿಕಿತ್ಸೆ ನಡೆಸಬೇಕೆಂದು ರಿಪೋರ್ಟ್ ನೀಡುತ್ತಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಮೊದಲೇ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ರೋಗಿ ನಿಶಾಂತ್, ವೈದ್ಯರ ಸೂಚನೆಯಂತೆ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾನೆ. ಶಸ್ತ್ರಚಿಕಿತ್ಸೆ ನಡೆಸಿದ 24 ಗಂಟೆಯಲ್ಲೇ ರೋಗಿ ಹೊಟ್ಟೆನೋವಿನ ಯಮಯಾತನೆ ಅನುಭವಿಸಲಾರಂಭಿಸುತ್ತಾನೆ.
ರೋಗಿಯ ನೋವಿಗೆ ಸರಿಯಾಗಿ ಸ್ಪಂದಿಸದ ವೈದ್ಯರು, ಸುಮಾರು ಒಂದು ವಾರದ ಕಾಲ ಬೇರೇನೋ ಔಷದಿಗಳನ್ನು ನೀಡಿ ಕಾಲಹರಣ ಮಾಡುತ್ತಿರುತ್ತಾರೆ.
ಯಾವಾಗ ರೋಗಿಯ ಹೊಟ್ಟೆ ನೋವು ವಿಷಮವಾಗುತ್ತಿದೆಯೆಂದರಿತ ವೈದ್ಯರು ಇದಕ್ಕೆ ಹೆಚ್ಚಿನ ಚಿಕಿತ್ಸೆ ಅಗತ್ಯ. ನಮ್ಮ ಆಸ್ಪತ್ರೆಯಲ್ಲಿ ಆ ಸೌಲಭ್ಯವಿಲ್ಲ ಎಂದು ಬೇರೆ ಆಸ್ಪತ್ರೆ ನೋಡಿಕೊಳ್ಳುವಂತೆ ರೋಗಿಯನ್ನು ಸಾಗಹಾಕುತ್ತಾರೆ.
ಇನ್ನೊಂದು ಖಾಸಗಿ ಆಸ್ಪತ್ರೆಗೆ ದಾಖಲಾದ ರೋಗಿಯನ್ನು ಆ ಆಸ್ಪತ್ರೆಯ ವೈದ್ಯರು ತಪಾಸಣೆ ನಡೆಸಿದಾಗ ನೆಹರೂ ಆಸ್ಪತ್ರೆಯ ವೈದ್ಯರು, ಶಸ್ತ್ರಚಿಕಿತ್ಸೆಯ ನಂತರ ಹೊಟ್ಟೆಯಲ್ಲಿ ಟವಲ್, ನ್ಯಾಪ್ ಕಿನ್ ಮತ್ತು ಹತ್ತಿಯನ್ನು ಬಿಟ್ಟ ವಿಚಾರ ಸ್ಕ್ಯಾನಿಂಗ್ ಮೂಲಕ ಬಹಿರಂಗವಾಗುತ್ತದೆ.
ವಿಧಿಯಿಲ್ಲದೇ, ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಖಾಸಗಿ ಆಸ್ಪತ್ರೆಯಿಂದ ಬಿಡುಗಡೆಯಾದ ರೋಗಿ ನಿಶಾಂತ್, ಮನೆಗೆ ವಿಶ್ರಾಂತಿ ತೆಗೆದುಕೊಳ್ಳಲು ಹೋಗುವ ಮುನ್ನವೇ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸುತ್ತಾನೆ.
ಈ ಸಂಬಂಧ ವಿಚಾರಣೆ ನಡೆಸಿದ ನ್ಯಾ. ನಿಮೋನ್ಕರ್ ಅವರ ನ್ಯಾಯಪೀಠ, ನೆಹರೂ ಆಸ್ಪತ್ರೆಯ ವೈದ್ಯರನ್ನು ಕರೆಸಿ ಮುಖಕ್ಕೆ ಮಂಗಳಾರತಿ ಮಾಡಿ ರೋಗಿ ನಿಶಾಂತಿಗೆ ಹನ್ನೊಂದು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶ ನೀಡುತ್ತಾರೆ. ಜೊತೆಗೆ, ವೈದ್ಯರಲ್ಲಿ ರೋಗಿಗಳು ದೇವರನ್ನು ಕಾಣುತ್ತಾರೆ, ಸಮಾಜ ನಿಮ್ಮ ಮೇಲಿಟ್ಟಿರುವ ನಂಬಿಕೆಗೆ ಚ್ಯುತಿ ಬರುವ ಕೆಲಸ ಮಾಡದೇ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಿ ಎಂದು ಕಿವಿಹಿಂಡಿ ಕಳುಹಿಸುತ್ತಾರೆ.