ವಾರಣಾಸಿ: ಮೋದಿ ವಿರುದ್ದ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ
ನವದೆಹಲಿ, ಏ 8: ದೇಶದ ಪವಿತ್ರ ಯಾತ್ರಾಸ್ಥಳ ಉತ್ತರಪ್ರದೇಶದ ವಾರಣಾಸಿಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ದ ಕಾಂಗ್ರೆಸ್ ತನ್ನ ಅಭ್ಯರ್ಥಿಯ ಹೆಸರನ್ನು ಪ್ರಕಟಿಸುವ ಮೂಲಕ ದೇಶಾದ್ಯಂತ ಹುಟ್ಟಿದ್ದ ಭಾರೀ ಕುತೂಹಲಕ್ಕೆ ತೆರೆ ಎಳಿದಿದೆ.
ಉತ್ತರಪ್ರದೇಶದ ಪಿಂಡ್ರಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಮತ್ತು ಸ್ಥಳೀಯವಾಗಿ ಪ್ರಭಾವಿ ಮುಖಂಡರಾಗಿರುವ ಅಜಯ್ ರೈ ಅವರಿಗೆ ಟಿಕೆಟ್ ನೀಡುವ ಮೂಲಕ ಮೋದಿ ವಿರುದ್ದ ಯಾರಿಗೆ ಟಿಕೆಟ್ ನೀಡಬೇಕು ಎನ್ನುವ ಸಂದಿಗ್ಥತೆಯಿಂದ ಕಾಂಗ್ರೆಸ್ ಹೊರಬಂದಿದೆ.
ಅಜಯ್ ರೈಗೆ ಟಿಕೆಟ್ ನೀಡಿರುವ ಕ್ರಮವನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್, ಅಜಯ್ ರೈ ವಾರಣಾಸಿ ಜನತೆಗೆ ಸ್ಥಳೀಯರು. ಇಲ್ಲಿನ ಸಮಸ್ಯೆಯ ಬಗ್ಗೆ ಅವರಿಗೆ ಅರಿವಿದೆ. ಅದಲ್ಲದೇ, ಅಜಯ್ ಕಾಂಗ್ರೆಸ್ಸಿನ ಬೇರು ಮಟ್ಟದ ಕಾರ್ಯಕರ್ತರು ಎಂದಿದೆ.
ಇಬ್ಬರು ರಾಜಕೀಯ ಮುಖಂಡರ ನಡುವಿನ ಹೋರಾಟವಿದು. ನಾವು ಈ ಕ್ಷೇತ್ರದಲ್ಲಿ ಜಯಗಳಿಸುತ್ತೇವೆ ಎನ್ನುವ ವಿಶ್ವಾಸದಲ್ಲಿದ್ದೇವೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಬಳಿ ಚರ್ಚಿಸಿದ ನಂತರ ಅಭ್ಯರ್ಥಿಯ ಹೆಸರನ್ನು ಪ್ರಕಟಿಸುತ್ತಿದ್ದೇವೆಂದು ಕಾಂಗ್ರೆಸ್ ವಕ್ತಾರ ರಣದೀಪ್ ಸೂರಜ್ವಾಲ ಹೇಳಿದ್ದಾರೆ.
ಆದರೆ, ಕುತೂಹಲಕಾರಿ ಸಂಗತಿ ಏನಂದರೆ ಅಜಯ್ ರೈ ಮಾಜಿ ಬಿಜೆಪಿ ಸದಸ್ಯರಾಗಿದ್ದು 2009ರಲ್ಲಿ ಮುರಳಿ ಮನೋಹರ್ ಜೋಷಿ ಅವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಭಿನ್ನಾಭಿಪ್ರಾಯ ತಲೆದೋರಿ ಪಕ್ಷ ತೊರೆದಿದ್ದರು.
ಉತ್ತರಪ್ರದೇಶದ ಪ್ರಭಾವಿ ಸಮುದಾಯಗಳಲ್ಲೊಂದಾದ ಭೂಮಿಯಾರ್ ಪಂಗಡಕ್ಕೆ ಸೇರಿದವರಾದ ಅಜಯ್ ರೈ, ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು ಕ್ಷೇತ್ರದ ಮತದಾರರಿಗೆ ಚಿರಪರಿಚಿತರು.
ಮುಲಾಯಂ ಸಿಂಗ್ ಅವರ ಸಮಾಜವಾದಿ ಪಕ್ಷ ಇಲ್ಲಿಂದ ಕೈಲಾಶ್ ಚೌರಾಶಿಯಾ ಅವರನ್ನು ತನ್ನ ಅಭ್ಯರ್ಥಿಯೆಂದು ಮತ್ತು ಬಿಎಸ್ಪಿಯು ಜೈಸ್ವಾಲ್ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಈಗಾಗಲೇ ಘೋಷಿಸಿದೆ.
ಆಮ್ ಆದ್ಮಿ ಪಕ್ಷದ ಮುಖಂಡ ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಾರಣಾಸಿ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ರಂಗೇರಿರುವ ವಾರಣಾಸಿ ಕ್ಷೇತ್ರದಲ್ಲಿ ಬಹುಕೋನ ಬಹುಕೋನ ಸ್ಪರ್ಧೆ ಏರ್ಪಡಲಿದೆ.