ಮತ್ತೆ ನಕ್ಸಲರ ರಕ್ತಚರಿತ್ರೆ : ಹನ್ನೊಂದು ಮಂದಿ ಹತ್ಯೆ
ರಾಯಪುರ, ಏ 12: ಒಂದು ಗಂಟೆಯ ಅವಧಿಯಲ್ಲಿ ಅಂಬುಲೆನ್ಸ್ ಮತ್ತು ಬಸ್ಸನ್ನು ಸ್ಪೋಟಿಸಿ ಆರು ಮಂದಿ ಚುನಾವಣಾ ಅಧಿಕಾರಿಗಳು ಮತ್ತು ಐವರು ಯೋಧರನ್ನು ನಕ್ಸಲರು ಹತ್ಯೆಗೈದಿದ್ದಾರೆ. ಛತ್ತೀಸಗಢದ ಬಿಜಾಪುರ ಮತ್ತು ಬಸ್ತರ್ ಜಿಲ್ಲೆಗಳಲ್ಲಿ ಈ ಘಟನೆ ವರದಿಯಾಗಿದೆ.
ನಕ್ಸಲ್ ಪೀಡಿತ ಬಸ್ತರ್ ಲೋಕಸಭಾ ಕ್ಷೇತ್ರಕ್ಕೆ ಎಪ್ರಿಲ್ ಹತ್ತರಂದು ಚುನಾವಣೆ ನಡೆದಿತ್ತು. ಚುನಾವಣಾ ಕರ್ತವ್ಯವನ್ನು ಮುಗಿಸಿ ಅಧಿಕಾರಿಗಳು ಬಸ್ಸಿನಲ್ಲಿ ವಾಪಸಾಗುತ್ತಿದ್ದಾಗ ಶನಿವಾರ (ಏ 12) ಬೆಳಗ್ಗೆ ಹನ್ನೊಂದು ಗಂಟೆ ಸುಮಾರಿಗೆ ಈ ಘಟನೆ ನಡಿದಿದೆ. ಇದರಲ್ಲಿ ಆರು ಮಂದಿ ಅಧಿಕಾರಿಗಳು ಸಾವನ್ನಪ್ಪಿದರೆ, ಹತ್ತು ಜನ ತೀವ್ರವಾಗಿ ಗಾಯಗೊಂಡಿದ್ದಾರೆ.
ಇದಾದ ಸುಮಾರು ಗಂಟೆಯಲ್ಲಿ ಬಸ್ತರ್ ನಿಂದ ನೂರು ಕಿಲೋಮೀಟರ್ ದೂರದ ಬಿಜಾಪುರ ಜಿಲ್ಲೆಯ ದರ್ಭಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ CRPF ಯೋಧರನ್ನು ಕರೆತರುತ್ತಿದ್ದ ಅಂಬುಲೆನ್ಸ್ ಅನ್ನು ನಕ್ಸಲರು ಸ್ಪೋಟಿಸಿದ್ದಾರೆ. ಘಟನೆಯಲ್ಲಿ ಐವರು ಯೋಧರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಇತರ ಏಳು ಮಂದಿ ಗಾಯಗೊಂಡಿದ್ದಾರೆ.
ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ನಕ್ಸಲರ ಪತ್ತೆಗೆ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದ್ದು, ಛತ್ತೀಸಗಢದಲ್ಲಿ ಭದ್ರತಾ ಪಡೆಯನ್ನು ಹೆಚ್ಚಿಸಲಾಗಿದೆ.
ನಾಲ್ಕನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಇಂದು ಏಳು ಕ್ಷೇತ್ರಕ್ಕೆ (ಅಸ್ಸಾಂ 3, ಗೋವಾ 2, ಸಿಕ್ಕಿಂ ಮತ್ತು ತ್ರಿಪುರಾ ರಾಜ್ಯದ ಒಂದು ಕ್ಷೇತ್ರ) ಮತ್ತು ಸಿಕ್ಕಿಂ ವಿಧಾನಸಭೆಗೂ ಶನಿವಾರ ಚುನಾವಣೆ ನಡೆಯುತ್ತಿದೆ.