ಕಾಳ್ಗಿಚ್ಚು: ಆತಂಕದಲ್ಲಿ ತಿರುಪತಿ ವೆಂಕಟೇಶ್ವರ ದೇಗುಲ
ತಿರುಪತಿ, ಮಾ 20: ಹಿಂದೂಗಳ ಸುಪ್ರಸಿದ್ದ ಧಾರ್ಮಿಕ ತಾಣ ತಿರುಮಲ ವೆಂಕಟೇಶ್ವರ ದೇವಾಲಯದಿಂದ ಸುಮಾರು ಮೂರು ಕಿಲೋಮೀಟರ್ ದೂರದ ಶೇಷಾಚಲಂ ಅರಣ್ಯದಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡಿದ್ದು ಭಾರೀ ಪ್ರಮಾಣದಲ್ಲಿ ವ್ಯಾಪಿಸಿ ಕೊಳ್ಳಲಾರಂಭಿಸಿದೆ.
ಐವತ್ತು ಮೀಟರ್ ಎತ್ತರದ ಬೆಂಕಿಯ ಜ್ವಾಲೆಗಳು ಮತ್ತು ದಟ್ಟ ಹೊಗೆಯಿಂದಾಗಿ ಬೆಂಕಿ ನಂದಿಸಲು ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. (ತಿಮ್ಮಪ್ಪನ ದರ್ಶನ ಸದ್ಯಕ್ಕೆ ಕಷ್ಟಕರ)
ಶೇಷಾಚಲಂ ಅರಣ್ಯ ಪ್ರದೇಶದ ಪಾಪವಿನಾಶನಂ, ಗೋಗರ್ಭಂ, ಮಮಂದೂರು ಪ್ರದೇಶದಲ್ಲಿರುವ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಈಗಾಗಲೇ ಸಾಕಷ್ಟು ವನ್ಯ ಸಂಪತ್ತು, ಕಾಡು ಪ್ರಾಣಿಪಕ್ಷಿಗಳು ಸಾವನ್ನಪ್ಪಿವೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.
ಕಾಳ್ಗಿಚ್ಚು ದೇವಾಲಯದ ಸುತ್ತಮುತ್ತಲಿನ ಪ್ರದೇಶಕ್ಕೂ ವ್ಯಾಪಿಸಿ ಕೊಂಡಿದ್ದು ತಿರುಮಲ ತಿರುಪತಿ ದೇವಾಲಯ ನೌಕಾಪಡೆಯ ನೆರವನ್ನು ಕೇಳಿದೆ. ಮಂಗಳವಾರ ಕಾಣಿಸಿಕೊಂಡ ಈ ಬೆಂಕಿ ಬುಧವಾರದ ಹೊತ್ತಿಗೆ ಸಾವಿರಾರು ಹೆಕ್ಟೇರ್ ಅರಣ್ಯವನ್ನು ದಹಿಸಿದೆ.
ತಿರುಮಲ ಬೆಟ್ಟದಲ್ಲಿ ಹೊಗೆ ಆವರಿಸಿರುವುದರಿಂದ ಸುತ್ತಮುತ್ತಲಿನ ಅಂಗಡಿಗಳು ಮತ್ತು ಅಲಿಪಿರಿಯಿಂದ ದೇವಸ್ಥಾನಕ್ಕೆ ಬೆಟ್ಟದ ಮೂಲಕ ಹೋಗುವ ಪಾದಚಾರಿ ಮಾರ್ಗವನ್ನು ಮುಂಜಾಗೃತಾ ಕ್ರಮವಾಗಿ ಬಂದ್ ಮಾಡಲಾಗಿದೆ.
ವಿಶಾಖಪಟ್ಟಣದಿಂದ ಬಂದ ವರದಿಗಳ ಪ್ರಕಾರ, ನೌಕಾಪಡೆಯಲ್ಲಿ ಅಗ್ನಿಶಾಮಕ ಕಾರ್ಯಾಚರಣೆಗೆ ನಿಯೋಜನೆ ಮಾಡುವಂಥ ಹೆಲಿಕಾಪ್ಟರುಗಳಿಲ್ಲ. ಈ ಸಂಬಂಧ ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನ) ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ.
ಸುಮಾರು ಐನೂರು ಮಂದಿ ಬೆಂಕಿ ನಂದಿಸುವ ಕೆಲಸಕ್ಕೆ ಅಗ್ನಿಶಾಮಕದಳದ ಸಿಬ್ಬಂದಿಗಳಿಗೆ ನೆರವು ನೀಡುತ್ತಿದ್ದಾರೆ.