ಮೋದಿ ಪ್ರಚಾರ ಕಾರ್ಯ: ವಾರಣಾಸಿಯಲ್ಲಿ ಅನಂತ್
ವಾರಣಾಸಿ, ಮೇ 9: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಸ್ಪರ್ಧಾಳುವಾಗಿರುವ ಅನಂತಕುಮಾರ್ ಇದೀಗ ವಾರಾಣಸಿಯಲ್ಲಿದ್ದಾರೆ. ಬುಧವಾರ ಗೋರಕ್ ಪುರದಿಂದ ಹೆಲಿಕಾಪ್ಟರ್ ಮೂಲಕ ಬಂದಿಳಿದ ಕೂಡಲೇ ಅಲ್ಲಿನ ಪರಿಸ್ಥಿತಿಯನ್ನು ನಿರ್ವಹಿಸುವ ಕಾರ್ಯದಲ್ಲಿ ಅವರು ತೊಡಗಿದ್ದಾರೆ.
ಮೋದಿಯವರ ಪೂರ್ವಯೋಜಿತ ರ್ಯಾಲಿಗೆ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಸರ್ಕಾರದ ನೀತಿ ಹಾಗೂ ಇದನ್ನು ನೋಡಿಯೂ ಕಣ್ಮುಚ್ಚಿ ಕುಳಿತಿರುವ ಚುನಾವಣಾ ಆಯೋಗದ ನಿಷ್ಕ್ರಿಯತೆ ವಿರುದ್ಧ ಬಿಜೆಪಿ ಗುರುವಾರ ಹಮ್ಮಿಕೊಂಡಿದ್ದ ತೀವ್ರ ಪ್ರತಿಭಟನೆಗೆ ಪೂರಕ ಸಿದ್ಧತೆ, ವಿವಿಧ ಹಂತಗಳ ಸಮನ್ವಯತೆ, ಮಾಧ್ಯಮಗಳಿಗೆ ಮಾಹಿತಿ ನೀಡುವ ಜವಾಬ್ದಾರಿಯ ಜೊತೆಗೆ ಪ್ರತಿಭಟನೆಯ ಸಂದರ್ಭದಲ್ಲಿ ಪ್ರತಿಯೊಂದು ವಿದ್ಯಮಾನಗಳನ್ನೂ ಗಮನಿಸಿ ಅಗತ್ಯ ಕ್ರಮ ಕೈಗೊಳ್ಳುವ ಹೊಣೆಗಾರಿಕೆಯಲ್ಲೂ ಅವರು ತೊಡಗಿದ್ದಾರೆ.
ಕಾರ್ಯಕರ್ತರ ಮೀಟಿಂಗ್, ರ್ಯಾಲಿಗಳನ್ನು ನಿರ್ವಹಿಸುವುದು, ಮನೆ-ಮನೆ ಭೇಟಿ, ಪತ್ರಿಕಾಗೋಷ್ಠಿಗಳ ನಿರ್ವಹಣೆ, ಮೀಡಿಯಾದೊಂದಿಗೆ ಮಾತುಕತೆ ಮುಂತಾದ ಕಾರ್ಯಗಳ ಉಸ್ತುವಾರಿಯನ್ನು ಅನಂತಕುಮಾರ್ ವಹಿಸಲಿದ್ದಾರೆ. ಅಸ್ಖಲಿತ ಹಿಂದಿ ಭಾಷಣ, ಸಂಭಾಷಣೆ, ಚರ್ಚೆಯಲ್ಲಿ ನಿಸ್ಸೀಮರೆನಿಸಿರುವ ಅನಂತಕುಮಾರ್ ಸ್ವತಃ ಹಿಂದಿ ವಲಯದಲ್ಲಿ ಈಗಾಗಲೇ ಗಮನಸೆಳೆದಿರುವುದು ಗಮನೀಯ ಸಂಗತಿಯಾಗಿದೆ.
ಏಪ್ರಿಲ್ 17 ರಂದು ಕರ್ನಾಟಕದಲ್ಲಿ ಮತದಾನದ ನಂತರ ಬಿಹಾರ, ಪಶ್ಚಿಮ ಬಂಗಾಳ, ಉತ್ತರಾಖಂಡ್, ಮಧ್ಯಪ್ರದೇಶದಲ್ಲಿನ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮುಗಿಸಿ ಕಳೆದ ಒಂದು ವಾರದಿಂದ ಉತ್ತರ ಪ್ರದೇಶದ ಬಲಿಯಾ, ಘೋಶಿ, ದೇವರಿಯಾ, ಖುಷಿನಗರ್, ಖುಷಿನಗರ್, ಸಲೇಪುರ್, ಗೋರಖ್ಪುರ್, ಚೌರಿಚೌರಾ ಮುಂತಾದ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡ ನಂತರ ಬುಧವಾರ ನರೇಂದ್ರ ಮೋದಿಯವರು ಸ್ಪರ್ಧಿಸಿರುವ ವಾರಣಾಸಿಯನ್ನು ತಲುಪಿದ್ದಾರೆ.