ಕೇಜ್ರಿವಾಲ್ ರಾಜಕೀಯಕ್ಕೆ ಧುಮುಕಿದ ಕಾರಣ ’ಬಹಿರಂಗ’
ನವದೆಹಲಿ, ಜು 14: ಅತ್ಯಲ್ಪ ಅವಧಿಯಲ್ಲಿ ರಾಜಕೀಯದ ಉತ್ತುಂಗಕ್ಕೇರಿ ದೆಹಲಿಯ ಮುಖ್ಯಮಂತ್ರಿಯಾಗಿ, ನಂತರ ಅಷ್ಟೇ ವೇಗದಲ್ಲಿ ಪದತ್ಯಾಗ ಮಾಡಿದ ಅರವಿಂದ್ ಕೇಜ್ರಿವಾಲ್ ತಾನು ರಾಜಕೀಯಕ್ಕೆ ಧುಮುಕಿದ ಕಾರಣವನ್ನು ಬಹಿರಂಗ ಪಡಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಹಲವು ತಿಂಗಳ ನಂತರ ಮತ್ತು ಕಳೆದ ಲೋಕಸಭಾ ಚುನಾವಣೆಯಲ್ಲಿನ ಹೀನಾಯ ಸೋಲಿನ ನಂತರ ಆಪ್ ಮುಖ್ಯಸ್ಥ ಕೇಜ್ರಿವಾಲ್, ಧರಣಿ ನಿರತ ಶಿಕ್ಷಕ ವೃಂದದವರ ಜೊತೆ ಮುಕ್ತವಾಗಿ ತಾವು ರಾಜಕೀಯಕ್ಕೆ ಬರಬೇಕಾದ ಅನಿವಾರ್ಯತೆಯನ್ನು ವಿವರಿಸಿದ್ದಾರೆ. (ಟ್ವಿಟರ್ ನಲ್ಲಿ ಬಂದ ಕೇಜ್ರಿವಾಲ್ ಜೋಕ್ಸ್)
ಪ್ರಪಂಚದ ಬಹುದೊಡ್ಡ ಪ್ರಜಾಪ್ರಭುತ್ವ ಭಾರತ ದೇಶದಲ್ಲಿ ಧರಣಿ, ಉಪವಾಸ ಸತ್ಯಾಗ್ರಹ ಮುಂತಾದ ಹೋರಾಟಗಳು ಸಾರ್ವಜನಿಕ ಹೋರಾಟಕ್ಕೆ ಫಲಿತಾಂಶ ನೀಡುವ ದಾರಿ ಎಂದು ನಂಬಿಕೊಂಡು ಬಂದವನು ನಾನು. ಅದು ಉಪಯೋಗಕ್ಕೆ ಬರವುದಿಲ್ಲ ಎಂದು ನನಗೆ ನಂತರದ ದಿನದಲ್ಲಿ ಅರಿವಾಯಿತೆಂದು ಕೇಜ್ರಿವಾಲ್ ಬೇಸರದ ಮಾತನ್ನಾಡಿದ್ದಾರೆ.
ರಾಜಧಾನಿ ದೆಹಲಿಯಲ್ಲಿ ಶಿಕ್ಷಕರು ಮತ್ತು ಶಿಕ್ಷಕಿಯರು ತಮ್ಮ ಬೇಡಿಕೆ ಈಡೇರಿಸಲು ನಡೆಸುತ್ತಿದ್ದ ಆಮರಣಾಂತ ಉಪವಾಸ ಸತ್ಯಾಗ್ರಹ ಹೋರಾಟದಲ್ಲಿ ಭಾಗಿಯಾಗಿದ್ದವರ ಜೊತೆ ಸಮಾಲೋಚನೆ ನಡೆಸಿ ಕೇಜ್ರಿವಾಲ್ ಈ ಮಾತನ್ನಾಡಿದ್ದಾರೆ.
ಉಪವಾಸದಿಂದ ದೇಶದಲ್ಲಿ ಏನೂ ಬದಲಾವಣೆಯಾಗದು
ಆಲ್ ಗೆಸ್ಟ್ ಟೀಚರ್ಸ್ ಅಸೋಶಿಯೇಷನಿನ ಸುಮಾರು 10,200 ಶಿಕ್ಷಕರು ಮೂರು ವಾರದಿಂದ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸೇವಾ ಖಾಯಂ, ವಯಸ್ಸಿನ ಮಿತಿ ಏರಿಕೆ ಹೀಗೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಇವರು ಧರಣಿ ನಿರತರಾಗಿದ್ದಾರೆ. ಕಳೆದ ಎರಡು ದಿನದಿಂದ ಹೋರಾಟವನ್ನು ತೀವ್ರಗೊಳಿಸಿರುವ ಇವರು ಆಮರಣಾಂತ ಉಪವಾಸಕ್ಕೆ ಇಳಿದಿದ್ದಾರೆ.
ಭೇಟಿ ಮಾಡಿ ಸಾಂತ್ವನ ಹೇಳಿದ ಕೇಜ್ರಿವಾಲ್
ಇವರನ್ನು ಭೇಟಿ ಮಾಡಿದ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಆಮರಣಾಂತ ಉಪವಾಸ ಸತ್ಯಾಗ್ರಹ ಕೈಬಿಡಲು ಮನವಿ ಮಾಡಿದ್ದಾರೆ. ನಾನು ಕೂಡಾ ಹಿಂದೆ ಹೋರಾಟದಿಂದ ಸರಕಾರ ಎಚ್ಚೆತ್ತುಕೊಳ್ಳಬಹುದು ಎಂದು ಕೊಂಡಿದ್ದೆ. ಸಾರ್ವಜನಿಕರ ಹೋರಾಟಕ್ಕೆ ಸರಕಾರ ಬೆಲೆ ಕೊಡುವುದಿಲ್ಲ ಎಂದು ನನಗೆ ಮನವರಿಕೆಯಾಗಿದೆ. ಹಾಗಾಗಿ ನಾನು ಸಕ್ರಿಯ ರಾಜಕೀಯಕ್ಕೆ ಇಳಿಯುವಂತಾಯಿತು ಎಂದು ಕೇಜ್ರಿವಾಲ್, ರಾಜಕೀಯಕ್ಕೆ ಧುಮುಕಿದ ಕಾರಣವನ್ನು ಬಹಿರಂಗ ಪಡಿಸಿದ್ದಾರೆ.
ಬಿಜೆಪಿಯವರನ್ನು ಭೇಟಿ ಮಾಡಿ ಪ್ರಯೋಜನವಿಲ್ಲ
ಜಂತರ್ ಮಂತರ್ ನಲ್ಲಿ ಧರಣಿ ನಿರತ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕೇಜ್ರಿವಾಲ್, ಬಿಜೆಪಿ ಮುಖಂಡರನ್ನು ಮತ್ತು ಅವರ ಸರಕಾರವನ್ನು ನಂಬಿ ಏನೂ ಪ್ರಯೋಜನವಿಲ್ಲ. ನೀವು ದೆಹಲಿಯ ಲೆ.ಗವರ್ನರ್ ಅವರನ್ನು ಭೇಟಿ ಮಾಡಿ ನಿಮ್ಮ ಮನವಿ ಸಲ್ಲಿಸಿದ್ದರೆ ನಿಮ್ಮ ಹೋರಾಟಕ್ಕೆ ಸ್ವಲ್ಪವಾದರೂ ಫಲ ಕಾಣಬಹುದಾಗಿತ್ತು ಎಂದಿದ್ದಾರೆ.
ನಾವು ಅಧಿಕಾರಕ್ಕೆ ಬಂದರೆ ನಿಮ್ಮ ಸಮಸ್ಯೆಗೆ ಪರಿಹಾರ
ನಾವು ದೆಹಲಿ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ನಿಮ್ಮ ಸಮಸ್ಯೆಗೆ ಪರಿಹಾರ ಸೂತ್ರ ಕಂಡುಕೊಳ್ಳಲಿದ್ದೇವೆ ಎಂದ ಕೇಜ್ರಿವಾಲ್, ಧರಣಿಯಲ್ಲಿ ಅಸ್ವಸ್ಥರಾಗಿದ್ದ ಇಬ್ಬರನ್ನು ತಾನೇ ಖುದ್ದಾಗಿ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನಿಮ್ಮ ಹೋರಾಟಕ್ಕೆ ಆಪ್ ಬೆಂಬಲ
ಧರಣಿ ನಿರತ ಶಿಕ್ಷಕರೊಬ್ಬರು ನಾವು ಬೃಹತ್ ಜಾಥಾ ನಡೆಸಲು ತೀರ್ಮಾನಿಸಿದ್ದೇವೆ. ಇದಕ್ಕೆ ನೀವು ಸಹಕಾರ ನೀಡುವಿರಾ ಎಂದು ಕೇಳಿದ ಪ್ರಶ್ನೆಗೆ, ಹೌದು ನಿಮ್ಮ ಹೋರಾಟಕ್ಕೆ ನಾವು ಬೆಂಬಲ ನೀಡುತ್ತೇವೆ ಎಂದು ಕೇಜ್ರಿವಾಲ್ ಮಾಧ್ಯಮವದರ ಮುಂದೆ ಶಿಕ್ಷಕರಿಗೆ ಭರವಸೆ ನೀಡಿದ್ದಾರೆ.