ಹೈದರಾಬಾದ್ : ಕಿರಣ್ ರೆಡ್ಡಿಯಿಂದ ಹೊಸ ಪಕ್ಷ ಉದಯ
ಹೈದರಾಬಾದ್, ಮಾ.10: ಅಖಂಡ ಆಂಧ್ರ ಪ್ರದೇಶ ವಿಭಜನೆ ವಿರೋಧಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕಿರಣ್ ಕುಮಾರ್ ರೆಡ್ಡಿ ಅವರು ನಿರೀಕ್ಷೆಯಂತೆ ಹೊಸ ಪಕ್ಷ ಕಟ್ಟಿದ್ದಾರೆ. ಸೋಮವಾರ ಪಕ್ಷದ ಹೆಸರನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಹೈದರಾಬಾದಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಕಿರಣ್ ಕುಮಾರ್ ರೆಡ್ಡಿ ಅವರು ತಮ್ಮ ಹೊಸ ಪಕ್ಷದ ಹೆಸರು 'ಜೈ ಸಮೈಕ್ಯಾಂಧ್ರಾ' ಪಕ್ಷ ಎಂದು ಅಧಿಕೃತವಾಗಿ ಘೋಷಿಸಿದರು. ರೈತರು, ಮಹಿಳೆಯರು ಮತ್ತು ವಿದ್ಯಾರ್ಥಿಗಳ ಹಿತ 'ಜೈ ಸಮೈಕ್ಯಾಂಧ್ರಾ' ಪಕ್ಷದ ಧ್ಯೇಯವಾಗಿದೆ ಎಂದು ಕಿರಣ್ ಕುಮಾರ್ ರೆಡ್ಡಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ 'ಪೆಪ್ಪರ್ ಸ್ಪ್ರೇ' ಖ್ಯಾತಿಯ ಲಗಡಪತಿ ರಾಜಗೋಪಾಲ್ ಹಾಗೂ ಸಂಸದ ಸಬ್ಬಂ ಹರಿ ಅವರು ಹಾಜರಿದ್ದರು.
ಆಂಧ್ರ ವಿಭಜನೆಯಾಗಲು ತೆಲುಗುದೇಶಂ ಪಾರ್ಟಿಯ ಚಂದ್ರಬಾಬು ನಾಯ್ಡು ಮೂಲ ಕಾರಣ ಎಂದು ಕಿರಣ್ ಕುಮಾರ್ ರೆಡ್ಡಿ ಆರೋಪಿಸಿದರು. ತೆಲಂಗಾಣ ರಾಜ್ಯ ರಚನೆಯ ವಿರುದ್ಧ ಕೇಂದ್ರ ಸರ್ಕಾರದ ವಿರುದ್ಧ ಆರಂಭದಿಂದಲೂ ಸಂಘರ್ಷ ಮಾಡುತ್ತಲೇ ಬಂದ ರೆಡ್ಡಿ ಇತ್ತೀಚೆಗೆ ಇದೇ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಮುಖ್ಯಮಂತ್ರಿ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು.
ಕಿರಣ್ ರೆಡ್ಡಿ ಅವರ ತಂದೆ ದಿವಂಗತ ಅಮರನಾಥರೆಡ್ಡಿ ಅವರು ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರಿಗೆ ರಾಜಕೀಯ ಗುರುವಾಗಬೇಕು. ಈಗ ಹೊಸ ಪಕ್ಷ ಸ್ಥಾಪಿಸುವ ಮೂಲಕ ಟಿಡಿಪಿ ವಿರುದ್ಧ ಪಕ್ಷದ ಸಮರ ಸಾರಲು ಮುಂದಾಗಿರುವ ಸುಳಿವನ್ನು ಮೊದಲ ಸುದ್ದಿಗೋಷ್ಠಿಯಲ್ಲೇ ಕಿರಣ್ ನೀಡಿದ್ದಾರೆ.[ಚಿರಂಜೀವಿ 'ಸಿಎಂ' ಆಗೋದು ಪರಿಹಾರ?]
ತೆಲಂಗಾಣ ವಿಧೇಯಕಕ್ಕೆ ಯುಪಿಎ ಅಂಗೀಕಾರ ಮುದ್ರೆ ಬೀಳುತ್ತಿದ್ದಂತೆ ಆಂಧ್ರಪ್ರದೇಶ ವಿಭಜನೆ ಖಂಡಿಸಿ ಕಿರಣ್ ಕುಮಾರ್ ಅವರು ರಾಜೀನಾಮೆ ನೀಡಿದ್ದರು. 'ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯಿಂದ ರಾಜ್ಯ ವಿಭಜನೆಯಷ್ಟೇ ಅಲ್ಲ ಜನರ ಐಕ್ಯತೆಯನ್ನು ಒಡೆದು ಹೋಗಿದೆ. ಕೇಂದ್ರದ ಒಡೆದು ಆಳುವ ನೀತಿಯನ್ನು ಖಂಡಿಸುತ್ತೇನೆ. ತೆಲಂಗಾಣ ಮಸೂದೆಯನ್ನು ಕಳ್ಳತನದಿಂದ ಮಂಡಿಸಿ ಅಂಗೀಕಾರ ಪಡೆಯಲಾಗಿದೆ ಎಂದು ರಾಜೀನಾಮೆ ನೀಡಿದ ಸಂದರ್ಭದಲ್ಲಿ ಹೇಳಿದ್ದರು.