ಆಂಧ್ರ, ಒರಿಸ್ಸಾದಲ್ಲಿ 'ಹುಡ್ಹುಡ್' ಎದುರಿಸಲು ಸಿದ್ಧತೆ
ಹೈದರಾಬಾದ್, ಅ. 11 : ಹುಡ್ಹುಡ್ ಚಂಡಮಾರುತವನ್ನು ಎದುರಿಸಲು ಆಂಧ್ರ ಪ್ರದೇಶದಲ್ಲಿ ಸಕಲ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಚಂಡಮಾರುತ ಭಾನುವಾರ ಸಂಜೆಯ ವೇಳೆಗೆ ವಿಶಾಖಪಟ್ಟಣ ಸಮೀಪ ಅಪ್ಪಳಿಸಲಿದೆ ಎಂದು ಚಂಡಮಾರುತ ಮುನ್ನೆಚ್ಚರಿಕೆ ಕೇಂದ್ರ ಮಾಹಿತಿ ನೀಡಿದೆ.
ಈಗಾಗಲೇ ರಭಸದಿಂದ ಬೀಸುತ್ತಿರುವ ಹುಡ್ಹುಡ್ ಚಂಡಮಾರುತ ಮುಂದಿನ 12 ತಾಸು ಅವಧಿಯಲ್ಲಿ ಇನ್ನಷ್ಟು ರಭಸ ಪಡೆದುಕೊಳ್ಳಲಿದ್ದು, ಭಾನುವಾರ ವಿಶಾಖಪಟ್ಟಣಕ್ಕೆ ಅಪ್ಪಳಿಸಲಿದೆ. ಶನಿವಾರ ಸಂಜೆಯಿಂದಲೇ ಆಂಧ್ರಪ್ರದೇಶದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. [ಏನಿದು 'ಹುಡ್ ಹುಡ್' ಇದರ ತಾಕತ್ತೆಷ್ಟು?]
ಹುಡ್ಹುಡ್ ಚಂಡಮಾರುತ ಆಂಧ್ರಪ್ರದೇಶ, ತೆಲಂಗಾಣ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಹಾದು ಹೋಗಲಿದ್ದು, ಎಲ್ಲಾ ರಾಜ್ಯಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಅಗತ್ಯ ಸಹಕಾರ ನೀಡಲಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಆಂಧ್ರಪ್ರದೇಶದಲ್ಲಿ ಸಿದ್ಧತೆ : ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 11 ತಂಡಗಳು ಸಿದ್ಧವಾಗಿವೆ. ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ನೆರವಾಗುವುದಕ್ಕಾಗಿ ವಿಶಾಖಪಟ್ಟಣದಲ್ಲಿ ಸೇನೆಯ 250 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮುಖ್ಯ ಕಾರ್ಯದರ್ಶಿಯವರೊಂದಿಗೆ ಮಾತುಕತೆ ನಡೆಸಿದ್ದು, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.
ಕಂಟ್ರೋಲ್
ರೂಂಗಳು
:
ಚಂಡಮಾರುತದಿಂದ
ತೊಂದರೆಗೆ
ಸಿಲುಕುವ
ಜನರ
ಸಹಾಯಕ್ಕಾಗಿ
ಕಂಟ್ರೋಲ್
ರೂಂಗಳನ್ನು
ಆರಂಭಿಸಲಾಗಿದೆ.
ಪೂರ್ವ
ಗೋದಾವರಿ
088-42359173,
ವಿಶಾಖಪಟ್ಟಣಂ
1800-42500002,
ಶ್ರೀಕಾಕುಲಂ
1800-4256625,
ವಿಜಯನಗರಂ
0892-2276888.
ರೈಲು ಸಂಚಾರ ರದ್ದು : ಭುವನೇಶ್ವರ - ಯಶವಂತಪುರ ಮತ್ತು ಭುವನೇಶ್ವರ- ಬೆಂಗಳೂರು ಪ್ರಶಾಂತಿ ಎಕ್ಸ್ಪ್ರೆಸ್ ಸೇರಿ ಹಲವು ರೈಲುಗಳನ್ನು ರದ್ದುಪಡಿಸಲಾಗಿದೆ. ಕೇಂದ್ರ ರೈಲ್ವೆಯ ಸಿಕಂದರಾಬಾದ್-ಕಾಜಿಪೇಟ್-ವಿಜಯವಾಡ-ವಿಶಾಖಪಟ್ಟಣ ಮತ್ತು ತಿರುಪತಿ-ಗುಡೂರ್-ವಿಜಯವಾಡ-ಸಾಮಾಲ್ಕೋಟ್/ಕಾಕಿನಾಡ-ವಿಶಾಖಪಟ್ಟಣ ವಿಭಾಗಗಳ ರೈಲು ಸಂಚಾರ 11ರಿಂದ 13ರವರೆಗೂ ವ್ಯತ್ಯಯವಾಗಲಿದೆ.
ಏನಿದು ಹುಡ್ಹುಡ್ : ಚಂಡಮಾರುತಗಳಿಗೆ ಯಾವಾಗಲೂ ವಿಚಿತ್ರ ಹೆಸರುಗಳನ್ನು ಇಡಲಾಗುತ್ತದೆ. ಆಂಧ್ರ ಹಾಗೂ ಒರಿಸ್ಸಾ ಕರಾವಳಿಗೆ ಅಪ್ಪಳಿಸುವ ಚಂಡಮಾರುತಕ್ಕೆ ಹುಡ್ಹುಡ್ ಎಂದು ಹೆಸರಿಡಲಾಗಿದೆ. ಒಮನ್ ಹಾಗೂ ಇತರ ಕೊಲ್ಲಿ ರಾಷ್ಟ್ರಗಳಲ್ಲಿ ಹೆಚ್ಚಾಗಿ ಕಾಣಿಸುವ ಹುಡ್ಹುಡ್ ಎಂಬುದು ಸುಂದರವಾದ ಪಕ್ಷಿ. ಆಕರ್ಷಕ ಬಣ್ಣದ ಪಕ್ಷಿಯ ಹೆಸರನ್ನು ಚಂಡಮಾರುತಕ್ಕೆ ಇಡಲಾಗಿದೆ.