ಕೊನೆಯುಸಿರಿರುವವರೆಗೂ ನಾನು ಭಾರತೀಯಳೇ: ಸಾನಿಯಾ
ಹೈದರಾಬಾದ್, ಜು.24: ತೆಲಂಗಾಣ ನೂತನ ಪ್ರಚಾರ ರಾಯಭಾರಿಯಾಗಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ಆಯ್ಕೆ ಮಾಡಿದ್ದಕ್ಕೆ ತೆಲಂಗಾಣ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈಗ ಕಾಂಗ್ರೆಸ್ ನಾಯಕರು ಕೂಡಾ ಇದಕ್ಕೆ ದನಿಗೂಡಿಸಿದ್ದಾರೆ. ತೆಲಂಗಾಣ ಜನರ ಭಾವನೆಗೆ ಧಕ್ಕೆ ತರುವ ಸರ್ಕಾರದ ನಿರ್ಧಾರವನ್ನು ಖಂಡಿಸುತ್ತೇವೆ ಎಂದಿದ್ದಾರೆ.
ಪಾಕಿಸ್ತಾನದ ಸೊಸೆ ಸಾನಿಯಾ ಮಿರ್ಜಾ ಅವರನ್ನು ನೂತನ ರಾಜ್ಯದ ರಾಯಭಾರಿಯನ್ನಾಗಿ ನೇಮಕ ಮಾಡುವ ಮೂಲಕ ತೆಲಂಗಾಣದ ಟಿಆರ್ಎಸ್ ಸರ್ಕಾರ ಶಿಷ್ಟಾಚಾರವನ್ನು ಮುರಿದಿದೆ ಎಂದು ತೆಲಂಗಾಣ ಬಿಜೆಪಿ ಶಾಸಕ ಕೆ.ಲಕ್ಷ್ಮಣ್ ಅವರು ಬುಧವಾರ ಆರೋಪಿಸಿದ್ದಾರೆ. ಅಲ್ಲದೆ ಯಾವ ಮಾನದಂಡವನ್ನು ಆಧರಿಸಿ ಅವರನ್ನು ತೆಲಂಗಾಣದ ರಾಯಭಾರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಇದೊಂದು ಪ್ರಚಾರದ ಗಿಮ್ಮಿಕ್ಕು ಎಂದಿದ್ದರು.
ಒಂದು ವೇಳೆ ತೆಲಂಗಾಣದವರನ್ನೇ ರಾಯಭಾರಿ ಮಾಡಬೇಕು ಎಂದುಕೊಂಡಿದ್ದರೆ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರನ್ನು ಆಯ್ಕೆ ಮಾಡಬಹುದಾಗಿತ್ತು ಎಂದು ಕೆ. ಲಕ್ಷ್ಮಣ್ ಹೇಳಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು, ಸಾನಿಯಾ ಅವರನ್ನು ತೆಲಂಗಾಣದ ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಿದ್ದರು. ಅಲ್ಲದೆ ಯುಎಸ್ ಓಪನ್ ಸೇರಿದಂತೆ ಇತರೆ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಒಂದು ಕೋಟಿ ರುಪಾಯಿ ಚೆಕ್ ಹಸ್ತಾಂತರಿಸಿದ್ದರು. ಈ ವೇಳೆ ಮಾತನಾಡಿದ್ದ ಚಂದ್ರಶೇಖರ್ ರಾವ್, ಖ್ಯಾತ ಟೆನಿಸ್ ತಾರೆ ಹಾಗೂ ಹೈದರಾಬಾದ್ ನಗರದ ಪುತ್ರಿ ಸಾನಿಯಾ ಅವರನ್ನು ತೆಲಂಗಾಣದ ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಿರುವುದಕ್ಕೆ ಹೆಮ್ಮೆ ಪಡುತ್ತೇವೆ ಎಂದು ಹೇಳಿದ್ದರು.
ಕೊನೆಯುಸಿರಿರುವ ತನಕ ನಾನು ಭಾರತೀಯಳೇ
ಶತಮಾನಕ್ಕೂ ಹಿಂದಿನಿಂದ ನಮ್ಮ ಕುಟುಂಬ ಇಲ್ಲಿಯೇ ನೆಲೆಸಿದೆ. ನಾನು ಭಾರತೀಯಳು, ಭಾರತೀಯಳಾಗೇ ಉಳಿಯುತ್ತೇನೆ ಹಾಗೂ ಕೊನೆಯುಸಿರಿರುವವರೆಗೂ ನಾನು ಭಾರತೀಯಳೇ ಎಂದು ಸಾನಿಯಾ ಮಿರ್ಜಾ ತಿಳಿಸಿದ್ದಾರೆ.
ಭಾರತ ದೇಶವನ್ನು ಪ್ರತಿನಿಧಿಸುವ ಸಾನಿಯಾ
ಸಾನಿಯಾ ಮಿರ್ಜಾ ಅವರು ಮುಂಬೈನಲ್ಲಿ ಜನಿಸಿದ್ದು, ಹೈದರಾಬಾದಿನಲ್ಲಿ ವಿದ್ಯೆ ಹಾಗೂ ಟೆನಿಸ್ ಕಲಿತು ಖ್ಯಾತರಾದವರು, ಪಾಕಿಸ್ತಾನದ ಕ್ರಿಕೆಟರ್ ಶೋಯಿಬ್ ಮಲ್ಲಿಕ್ ರನ್ನು ವರಿಸಿ ಪಾಕಿಸ್ತಾನದ ಸೊಸೆಯಾದವರು. ಆದರೆ, ಮದುವೆಯಾದ ಮೇಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೆನಿಸ್ ಆಡುವಾಗ ಭಾರತ ದೇಶವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ.
ಕಾಂಗ್ರೆಸ್ ಸಂಸದ ಹನುಮಂತರಾವ್ ಬೆಂಬಲ
ಗುರುವಾರ ಕೂಡಾ ಈ ಬಗ್ಗೆ ಚರ್ಚೆ ಮುಂದುವರೆದಿದ್ದು ಕಾಂಗ್ರೆಸ್ ಸಂಸದ ಹನುಮಂತರಾವ್ ಅವರು ತೆಲಂಗಾಣ ಬಿಜೆಪಿ ನಾಯಕ ಕೆ ಲಕ್ಷ್ಮಣ್ ಅವರನ್ನು ಬೆಂಬಲಿಸಿ ಮಾತನಾಡಿದ್ದಾರೆ. ಪಾಕಿಸ್ತಾನಿಯನ್ನು ಮದುವೆಯಾದ ಸಾನಿಯಾ ಅವರನ್ನು ರಾಯಭಾರಿಯಾಗಿ ನೇಮಿಸಬಾರದು ಎಂದಿದ್ದಾರೆ. ಆದರೆ, ಸಾನಿಯಾ ಪರವಾಗಿ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ, ಎಡಪಕ್ಷದ ಸೀತಾರಾಮ್ ಯೆಚೂರಿ ಬೆಂಬಲ ವ್ಯಕ್ತಪಡಿಸಿದ್ದಾರೆ.
|
ಮಾತು ಬದಲಾಯಿಸಿದ ಹನುಮಂತರಾವ್
ಮಾತು ಬದಲಾಯಿಸಿದ ಹನುಮಂತರಾವ್ ಮತ್ತೊಮ್ಮೆ ನೀಡಿದ ಹೇಳಿಕೆ ಹೀಗಿದೆ
|
ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಸಮರ್ಥನೆ
ಸಾನಿಯಾ ಮಿರ್ಜಾ ತೆಲಂಗಾಣ ರಾಯಭಾರಿಯಾಗಿರುವುದಕ್ಕೆ ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಬೆಂಬಲ ವ್ಯಕ್ತಪಡಿಸಿದ್ದಾರೆ.
|
ಕಿರಣ್ ಬೇಡಿ ಅವರಿಂದ ಸಮರ್ಥನೆ
ಕಿರಣ್ ಬೇಡಿ ಅವರಿಂದ ಸಮರ್ಥನೆ ನೀಡಿ ಟೆನಿಸ್ ಅಕಾಡೆಮಿ ಆರಂಭಿಸಲು ಸೂಚಿಸಿದ್ದಾರೆ.
|
ಸಾನಿಯಾ ರಾಯಭಾರಿ ಮಾಡಿದ್ದು ಏಕೆ?
ಸಾನಿಯಾ ರಾಯಭಾರಿ ಮಾಡಿದ್ದು ಏಕೆ? ಮೌಂಟ್ ಎವೆರೆಸ್ಟ್ ಹತ್ತಿದ್ದ ಬುಡಕಟ್ಟು ಯುವತಿಯರು ಕಣ್ಣಿಗೆ ಬೀಳಲಿಲ್ಲವೇ?