ಹುಬ್ಬಳ್ಳಿ ಸಮೀಪ ನೇಣಿಗೆ ಶರಣಾದ ಶಿರಸಿ ಪ್ರೇಮಿಗಳು
ಶಿರಸಿ, ಡಿ.4: ಪಿಯುಸಿ ವಿದ್ಯಾರ್ಥಿನಿ ಮತ್ತು ಗಾರೆ ಕೆಲಸಗಾರನ ಪ್ರೇಮಕತೆ ದುರಂತ ಅಂತ್ಯ ಕಂಡಿದೆ. ನಿಷ್ಕಲ್ಮಶ ಪ್ರೀತಿಗೆ ಮನೆಯವರ ವಿರೋಧ ವ್ಯಕ್ತವಾಗಿದ್ದಕ್ಕೆ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶಿರಸಿ ಮೂಲದ ಪ್ರೇಮಿಗಳು ಹುಬ್ಬಳ್ಳಿ ಸಮೀಪದ ಕುಸಗಲ್ ರಸ್ತೆಯ ಬಳಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಾರೆ ಕೆಲಸ ಮಾಡಿಕೊಂಡಿದ್ದ ಶಿರಸಿ ರಾಮನಬೈಲ್ ನಿವಾಸಿ ರಾಘು ಹನುಮಂತಪ್ಪ ಬೋವಿ (18) ಹಾಗೂ ಪ್ರಥಮ ಪಿಯುಸಿ ಓದುತ್ತಿದ್ದ ಮಮತಾ ಕಲಭಾಗ್ (18) ಬುಧವಾರ ಸಂಜೆ ನೇಣಿಗೆ ಶರಣಾದ ದುರ್ದೈವಿಗಳು.[ಅಯ್ಯೋ : ಗಂಡ ಹೆಂಡತಿ ಜಗಳ, ಇಬ್ಬರೂ ಆತ್ಮಹತ್ಯೆ]
ಶಿರಸಿ ಹೊರವಲಯದ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಮಮತಾ ಮತ್ತು ಗಾರೆ ಕೆಲಸಗಾರ ರಾಘು ನಡುವೆ ಪ್ರೇಮಾಂಕುರವಾಗಿತ್ತು. ಈ ವಿಷಯ ಇಬ್ಬರ ಮನೆಯವರಿಗೂ ತಿಳಿದಿದ್ದು ಪಾಲಕರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಕಳೆದ ಎರಡು ದಿನಗಳಿಂದ ಪ್ರೇಮಿಗಳು ನಾಪತ್ತೆಯಾಗಿದ್ದರು.
ಮನೆಯವರ ಕಿರುಕುಳದಿಂದ ಬೇಸತ್ತ ಪ್ರೇಮಿಗಳು ಹುಬ್ಬಳ್ಳಿಗೆ ಓಡಿ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.