ಬೆನ್ನಿಹಿನ್ ಭೇಟಿ : ಆತ್ಮಹತ್ಯೆಗೆ ಯತ್ನಿಸಿದ ಸ್ವಾಮೀಜಿ
ಸ್ವಯಂ ಘೋಷಿತ ದೇವ ಮಾನವ ಬೆನ್ನಿಹಿನ್ ಬೆಂಗಳೂರಿನ ಕಾರ್ಯಕ್ರಮ ವಿರೋಧಿಸಿ ಪ್ರಣವಾನಂದ ಸ್ವಾಮೀಜಿ, ಹುಬ್ಬಳ್ಳಿಯ ತಹಸೀಲ್ದಾರ್ ಕಚೇರಿ ಎದುರು ಶನಿವಾರ ಧರಣಿ ನಡೆಸುತ್ತಿದ್ದರು. ಈ ಸಮಯದಲ್ಲಿ ಸ್ವಾಮೀಜಿ ಸೀಮೆಎಣ್ಣೆ ಸುರಿದುಕೊಂಡಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದರು. ತಕ್ಷಣ ಸ್ಥಳದಲ್ಲಿದ್ದ ಪೊಲೀಸರು ಸ್ವಾಮೀಜಿಯನ್ನು ವಶಕ್ಕೆ ಪಡೆದರು.
ಸ್ವಾಮೀಜಿಯವರನ್ನು ಪೊಲೀಸರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರು. ಸೀಮೆಎಣ್ಣೆ ಸುರಿದುಕೊಂಡಿದ್ದು ಬಿಟ್ಟರೆ ಸ್ವಾಮೀಜಿ ಆರೋಗ್ಯಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಪೊಲೀಸರು ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. [ಬೆನ್ನಿಹಿನ್ ಭೇಟಿಗೆ ಅವಕಾಶ ನೀಡಿದ ಹೈಕೋರ್ಟ್]
ಕೆಲವು ದಿನಗಳ ಹಿಂದೆ ಪತ್ರಿಕಾಗೋಷ್ಠಿ ನಡೆಸಿದ್ದ ಪ್ರವಣಾನಂದ ಸ್ವಾಮೀಜಿ ಬೆನ್ನಿಹಿನ್ ಸಾಮೂಹಿಕ ಪ್ರಾರ್ಥನೆಗೆ ಸರ್ಕಾರ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದರು. ಸರ್ಕಾರ ಕಾರ್ಯಕ್ರಮಕ್ಕೆ ಅವಕಾಶ ಕೊಟ್ಟರೆ, ತಾವು ಸೇರಿದಂತೆ 15 ಸ್ವಾಮೀಜಿಗಳು ದೇಹ ತ್ಯಾಗ ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದರು.
ಶನಿವಾರ ಬೆನ್ನಿಹಿನ್ ಭೇಟಿ ವಿರೋಧಿಸಿ ಭಾರತ ಕ್ರಾಂತಿ ಸೇನಾ ಕಾರ್ಯಕರ್ತರು ತಹಸೀಲ್ದಾರ್ ಕಚೇರಿ ಎದುರು ಧರಣಿ ನಡೆಸುತ್ತಿದ್ದರು. ಸಂಜೆ ಇದ್ದಕ್ಕಿದ್ದ ಹಾಗೆ ಸ್ವಾಮೀಜಿ ಧರಣಿ ನಿರತ ಸ್ಥಳದಲ್ಲಿದ್ದ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ವಿವಿಧ ಮಠಾಧೀಶರು ಸ್ವಾಮೀಜಿ ಆತ್ಮಹತ್ಯೆ ಪ್ರಯತ್ನವನ್ನು ಖಂಡಿಸಿದ್ದು, ಇಂತಹ ಸಾಹಸಗಳಿಗೆ ಕೈ ಹಾಕಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. [ಬೆನ್ನಿಹಿನ್ ಭೇಟಿಗೆ ಬಿಜೆಪಿ ವಿರೋಧ]
ಬೆನ್ನಿಹಿನ್ ಭೇಟಿಗೆ ಕೋರ್ಟ್ ಅಸ್ತು : ಪವಾಡ ಪುರುಷ, ಕ್ರೈಸ್ತ ಪಾದ್ರಿ ಬೆನ್ನಿಹಿನ್ ಆಯೋಜಿಸಿರುವ ಸಾಮೂಹಿಕ ಚಿಕಿತ್ಸಾ ಪ್ರಾರ್ಥನೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಶ್ರೀರಾಮ ಸೇವೆ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಭೇಟಿಗೆ ಅವಕಾಶ ನೀಡಿದೆ. ಇದರಿಂದ ಬೆನ್ನಿಹಿನ್ ಕಾರ್ಯಕ್ರಮಕ್ಕೆ ಕಾನೂನಿನ ಒಪ್ಪಿಗೆ ದೊರಕಿದ್ದು, ಜ.15ರಿಂದ ಬೆನ್ನಿಹಿನ್ ಬೆಂಗಳೂರಿನಲ್ಲಿ ಪ್ರಾರ್ಥನಾ ಸಭೆ ನಡೆಸಲಿದ್ದಾನೆ.
ಯಾವಾಗ ಬರ್ತಾನೆ ಬೆನ್ನಿಹಿನ್ : ಜನವರಿ 15ರಿಂದ ಜ.19ರವರೆಗೆ ಇಸ್ರೇಲ್ ಮೂಲದ ಬೈಬಲ್ ಶಿಕ್ಷಕ ಬೆನ್ನಿ ಹಿನ್ ಬೆಂಗಳೂರಿನ ಯಲಹಂಕದಲ್ಲಿರುವ ಸೂಪರ್ ನೋವಾ ಅರೀನಾ ಪ್ರದೇಶದಲ್ಲಿ ಕ್ರಿಶ್ಚಿಯನ್ ಪ್ರಾರ್ಥನಾ ಸಮ್ಮೇಳವನ್ನು ಹಮ್ಮಿಕೊಂಡಿದ್ದಾನೆ. ಪ್ರತಿದಿನ ಸಂಜೆ 4ರಿಂದ 9 ಗಂಟೆಯವರೆಗೆ ಪ್ರಾರ್ಥನಾ ಕಾರ್ಯಕ್ರಮ ನಡೆಯಲಿದೆ.