ರಜನಿಕಾಂತ್ ಭೇಟಿ ಮಾಡಿದ ನರೇಂದ್ರ ಮೋದಿ
ಚೆನ್ನೈ, ಏ.13: ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಪೂರ್ವ ನಿಗದಿಯಂತೆ ಭಾನುವಾರ ಸಂಜೆ ಭೇಟಿ ಮಾಡಿದ್ದಾರೆ. ಈ ಬಗ್ಗೆ ಮೋದಿ ಅವರು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.
ಮೋದಿ ಭೇಟಿಗೂ ಮುನ್ನ ಬಿಜೆಪಿಯಲ್ಲಿ ಮನವಿ ಮಾಡಿಕೊಂಡಿದ್ದ ರಜನಿಕಾಂತ್ ಅವರು ಯಾವುದೇ ಕಾರಣಕ್ಕೂ ನಮ್ಮಿಬ್ಬರ ಭೇಟಿಗೆ ರಾಜಕೀಯ ಬಣ್ಣ ಬರಬಾರದು ಹಾಗೂ ಪ್ರಚಾರಕ್ಕಾಗಿ ಇದನ್ನು ಬಳಸಬಾರದು ಎಂದು ಷರತ್ತು ವಿಧಿಸಿದ್ದರು. ಅದರಂತೆ, ನಡೆದುಕೊಳ್ಳುವುದಾಗಿ ತಮಿಳುನಾಡಿನ ಬಿಜೆಪಿ ಘಟಕದ ಮುಖ್ಯಸ್ಥ ಪ್ರಧಾನ ಕಾರ್ಯದರ್ಶಿ ಮುರಳಿಧರ್ ರಾವ್ ಭರವಸೆ ನೀಡಿದ್ದರು.
ಕರ್ನಾಟಕದಲ್ಲಿ ಭಾರತ್ ವಿಜಯ್ ಯಾತ್ರೆ ಸಮಾವೇಶ ಮುಗಿಸಿದ ನಂತರ ಮೋದಿ ಅವರು ಚೆನ್ನೈನಲ್ಲಿರುವ ರಜನಿಕಾಂತ್ ಅವರ ನಿವಾಸಕ್ಕೆ ತೆರಳಿ ರಜನಿ ಹಾಗೂ ಅವರ ಕುಟುಂಬಕ್ಕೆ 'ತಮಿಳರ ಹೊಸವರ್ಷದ' ಶುಭ ಹಾರೈಕೆ ಸಲ್ಲಿಸಿದರು. ರಜನಿ ಅವರ ಜತೆಗೆ ಪೊನ್ನ್ ರಾಧಕೃಷ್ಣನ್ ಮುಂತಾದ ಸ್ಥಳೀಯ ಮುಖಂಡರು ಇದ್ದರು ಎಂದು ತಿಳಿದು ಬಂದಿದೆ.
ಮನೆಗೆ ಬಂದ ಅತಿಥಿಯನ್ನು ಆತ್ಮೀಯವಾಗಿ ಸ್ವಾಗತಿಸಿದ ಶಿವಾಜಿರಾವ್ ಗಾಯಕ್ವಾಡ್ ಅಲಿಯಾಸ್ ರಜನಿಕಾಂತ್ ಅವರು ಮೋದಿ ಅವರಿಗೆ ಶಾಲು ಹೊದೆಸಿ ಸನ್ಮಾನಿಸಿದ್ದಾರೆ. ಇದೇ ಚಿತ್ರವನ್ನು ಮೋದಿ ಅವರು ಟ್ವೀಟ್ ಮಾಡಿದ್ದಾರೆ.
ರಜನಿಕಾಂತ್ ಅವರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದೇ ಆದಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ಹಾಗೂ ಎಐಎಡಿಎಂಕೆಗೆ ಭಯ ಶುರುವಾಗುವುದು ಗ್ಯಾರಂಟಿ, ನೆಲೆ ಇಲ್ಲದ ಬಿಜೆಪಿ ಹೆಮ್ಮೆರದಂತೆ ತಲೆ ಎತ್ತುವ ಸಾಧ್ಯತೆಯಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಬಿಜೆಪಿಗೆ ಮತ ಹಾಕಿ ಎಂದಿದ್ದ ರಜನಿ ವಿರುದ್ಧ ಪಿಎಂಕೆ ಪಕ್ಷ ಕಿಡಿಕಾರಿತ್ತು. ರಜನಿ ಅವರ ಆಗ ಬಾಬಾ ಚಿತ್ರ ಪ್ರದರ್ಶನಕ್ಕೂ ಅಡ್ಡಿ ಉಂಟಾಗಿತ್ತು. ರಜನಿ ಅವರ ಗೆಳೆಯರಾದ ಅಂಬರೀಷ್, ಶತ್ರುಘ್ನ ಸಿನ್ಹಾ, ಮೋಹನ್ ಬಾಬು ಸೇರಿದಂತೆ ಅನೇಕ ಆಪ್ತರು ರಾಜಕೀಯದಲ್ಲಿದ್ದರೂ ರಜನಿ ಮಾತ್ರ ಆದಷ್ಟು ರಾಜಕೀಯ ಪಕ್ಷಗಳಿಂದ ರಜನಿ ದೂರವೇ ಉಳಿದಿದ್ದಾರೆ.
With
Rajinikanth
ji
pic.twitter.com/ErTqvfr8Lx
—
Narendra
Modi
(@narendramodi)
April
13,
2014