ಜಯಲಲಿತಾಗೆ ಜೈಲು, ನಿತ್ಯಾನಂದನ ಕಾಲ್ಗುಣವೇ?
ಮದುರೈ, ಅ.1: ಸುಮಾರು 1500 ವರ್ಷ ಇತಿಹಾಸ ಹೊಂದಿರುವ ಶೈವ ಮಠದ 293ನೇ ಸ್ವಾಮೀಜಿಯಾಗಿ ಪೀಠವೇರಿ ನಂತರ ಕೆಳಗೆ ದೂಡಿಸಿಕೊಂಡಿದ್ದ ಸ್ವಯಂ ಘೋಷಿತ ದೇವ ಮಾನವ ಸ್ವಾಮಿ ನಿತ್ಯಾನಂದ ತಮಿಳುನಾಡಿಗೆ ಕಾಲಿಡುತ್ತಿದ್ದಂತೆ ನಾಡಿನ 'ಅಮ್ಮ' ನಿಗೆ ತೊಂದರೆ ಕಾಣಿಸಿಕೊಂಡಿದೆ. ಅದರೆ, ಮದುರೈ ಪೀಠದ ಅರುಣಗಿರಿನಾಥ ಅವರು ಜಯಾ ಅವರ ಬಿಡುಗಡೆಗಾಗಿ ಉಪವಾಸ ಸತ್ಯಾಗ್ರಹ ಮುಂದುವರೆಸಿದ್ದಾರೆ.
ಸುಮಾರು 18 ವರ್ಷಗಳ ಕಾಲ ಕಾನೂನು ಸಮರ ನಡೆಸಿ ಜೈಲು ಪಾಲಾಗದೆ ಉಳಿದಿದ್ದ ಪುರುಚ್ಚಿ ತಲೈವಿಗೆ ಕೆಟ್ಟ ಕಾಲ ಆರಂಭವಾಗುವುದಕ್ಕೂ ಸ್ವಾಮಿ ನಿತ್ಯಾನಂದ ತನ್ನ ತವರು ನೆಲ ತಿರುವಣ್ಣಾಮಲೈಗೆ ಶಿಫ್ಟ್ ಆಗುವುದಕ್ಕೂ ಸಂಬಂಧವಿದೆ ಎಂದು ತಮಿಳುನಾಡಿನಲ್ಲಿ ಗುಸು ಗುಸು ಪಿಸು ಪಿಸು ಆರಂಭವಾಗಿದೆ. ನಿತ್ಯಾನಂದ ತವರಿಗೆ ಮರಳುತ್ತಿದ್ದಂತೆ ಜಯಲಲಿತಾ ಅವರಿಗೂ ತವರಿನ ದರ್ಶನವಾಗಿದೆ. [ತಿರುವಣ್ಣಾಮಲೈಗೆ ಶಿಫ್ಟ್, ಶೈವರಿಂದ ವಿರೋಧ]
ನಿತ್ಯಾನಂದ ಆಗಮನಕ್ಕೆ ಶೈವ ಮಠಗಳು ವಿರೋಧ ವ್ಯಕ್ತಪಡಿಸಿದ್ದವು. ಅದರೆ, ಇದನ್ನು ಲೆಕ್ಕಿಸದೆ ನಿತ್ಯಾನಂದ ಬಿಡದಿ ಆಶ್ರಮವನ್ನು ತೊರೆದು ತಿರುವಣ್ಣಾಮಲೈ ಸೇರಿಕೊಂಡಿದ್ದಾರೆ. ಬಿಡದಿಯ ಧ್ಯಾನಪೀಠದ ಆಶ್ರಮವನ್ನು ನಿತ್ಯಾನಂದನ ಶಿಷ್ಯರು ನೋಡಿಕೊಳ್ಳುತ್ತಾರೆ ನ್ಯಾಯಾಲಯದ ಕೆಲಸದ ಸಲುವಾಗಿ ಮಾತ್ರ ನಿತ್ಯಾನಂದ ಬೆಂಗಳೂರಿಗೆ ಬರುತ್ತಾರೆ ಎಂದು ಘೋಷಿಸಲಾಗಿದೆ. ಆದರೆ, ಜಯಾ ಅವರು ಜೈಲು ಸೇರಿದ ಬಗ್ಗೆ ನಿತ್ಯಾ ಮಾತ್ರ ಸುಮ್ಮನಿದ್ದಾರೆ ಏಕೆ?
ಇಡೀ ಶೈವ ಪಂಥವೇ ಜಯಾ ಬೆಂಬಲಕ್ಕೆ ನಿಂತಿದೆ
ಮಧುರೈ ಅಧೀನ ಪೀಠ ಸಂರಕ್ಷಣಾ ಸಮಿತಿ, ಧರ್ಮಪುರಂ, ತಿರುಪಾನಂದಲ್ ಅಧೀನಂ ಸೇರಿದಂತೆ 12ಕ್ಕೂ ಅಧಿಕ ಶೈವಪೀಠಗಳು ಸ್ವಾಮಿ ನಿತ್ಯಾನಂದ ಬರುವಿಕೆಯನ್ನು ವಿರೋಧಿಸಿವೆ. ಅದರೆ, ಸ್ವಾಮಿ ನಿತ್ಯಾನಂದನ ಬಗ್ಗೆ ಬಹುದೊಡ್ಡ ಶೈವ ಪಂಥ ಹೊಂದಿರುವ ಕರ್ನಾಟಕದಲ್ಲಿ ಮಾತ್ರ ಹೆಚ್ಚಿನ ಒತ್ತಡ ಕಂಡು ಬಂದಿರಲಿಲ್ಲ. ಇಲ್ಲಿನ ಕೆಲ ವೀರಶೈವ ಮಠಗಳು ನಿತ್ಯಾನಂದ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಆದರೆ, ಶೈವ ಪಂಥದ ಗುರು ಎಂದು ಕರೆಸಿಕೊಳ್ಳುವ ನಿತ್ಯಾನಂದ ಮಾತ್ರ ಜಯಾ ಅವರಿಗೆ ಬೆಂಬಲ ಇದುವರೆವಿಗೂ ಸೂಚಿಸಿಲ್ಲ. ಮದುರೈ ಪೀಠಂ ಜೊತೆ ಮತ್ತೆ ಗುರುತಿಸಿಕೊಳ್ಳುವಂತಿಲ್ಲ
ಅರುಣಗಿರಿನಾಥ ವಿರುದ್ಧವೂ ಕೇಸು ದಾಖಲಾಗಿತ್ತು
ತಮಾಷೆ ಸಂಗತಿ ಎಂದರೆ, ನಿತ್ಯಾನಂದ ಸ್ವಾಮಿಯ ನಡತೆ ಸರಿಯಿಲ್ಲ. ಅಧೀನಂ ಪೀಠದ ಅರುಣಗಿರಿನಾಥರ ಜೊತೆ ಸೇರಿ ಮಠದ ಕೋಟ್ಯಾಂತರ ಆಸ್ತಿ ಲಪಟಾಯಿಸಲು ನಿತ್ಯಾನಂದ ಸಂಚು ನಡೆಸುತ್ತಿದ್ದಾನೆ ಎಂದು ತಮಿಳುನಾಡು ಸರಕಾರದ ಪರ ವಕೀಲ ನವನೀತ್ ಕೃಷ್ಣನ್ ಅವರು ಈ ಹಿಂದೆ ವಿಭಾಗೀಯ ಪೀಠಕ್ಕೆ ಹೇಳಿಕೆ ನೀಡಿದ್ದಾರೆ. ಸರಕಾರಿ ವಕೀಲ ನವನೀತ್ ಕೃಷ್ಣನ್, ನ್ಯಾ.ಭಾನುಮತಿ ಮತ್ತು ನ್ಯಾ.ಸುಬ್ಬಯ್ಯ ಅವರು 2012ರಲ್ಲಿ ಜಯಾ ಅವರ ಅಣತಿ ಮೇರೆಗೆ ಅರುಣಗಿರಿನಾಥ ಅವರ ಮೇಲೂ ಆರೋಪ ಹೊರೆಸಿದ್ದರು. ಅದರೆ, ಇಂದು ಅರುಣಗಿರಿನಾಥ ಅವರು ಜಯಾ ಅವರಿಗಾಗಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.
ನಿತ್ಯಾನಂದನ ಶಾಪ ಅಷ್ಟು ಪವರ್ ಫುಲಾ?
ಡಿವಿ ಸದಾನಂದ ಗೌಡ ಅವರು ಕರ್ನಾಟಕ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಸ್ವಾಮಿ ನಿತ್ಯಾನಂದ ಅವರನ್ನು ಕರ್ನಾಟಕದಿಂದ ಗಡೀಪಾರು ಮಾಡುವಂತೆ ಆದೇಶ ಹೊರಡಿಸಿದ್ದರು. ಮೊಟ್ಟ ಮೊದಲ ಬಾರಿಗೆ ಇಂಥದ್ದೊಂದು ಆದೇಶ ಕೇಳಿ ನಿತ್ಯಾನಂದ ಅವರು ಬೆಚ್ಚಿದ್ದರು. ಕಾರಣ, ನಿತ್ಯಾನಂದನ ಜೊತೆಗೆ ಬಿಡದಿ ಆಶ್ರಮವನ್ನು ಖಾಲಿ ಮಾಡಿ ವಶಕ್ಕೆ ತೆಗೆದುಕೊಳ್ಳುವಂತೆ ಅಂದಿನ ಗೃಹ ಸಚಿವ ಆರ್ ಅಶೋಕ್ ಗೆ ಸೂಚನೆ ನೀಡಿದ್ದರು.
ಅದರೆ, ಈ ಆದೇಶ ಹೊರಬಿದ್ದು ಎರಡು ವರ್ಷ ಕಳೆದರೂ ನಿತ್ಯಾನಂದನ ಕೂದಲು ಕೊಂಕಿಲ್ಲ. ಬಿಜೆಪಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಸರ್ಕಾರ ಬಂದಿದೆ. ಸದಾನಂದ ಗೌಡರು ಈಗ ರೈಲ್ವೆ ಸಚಿವರಾಗಿದ್ದಾರೆ. ಇತ್ತೀಚೆಗೆ ಅವರ ಮಗ ಕಾರ್ತಿಕ್ ಮೇಲೆ ನಟಿ ಮೈತ್ರಿಯಾಗೆ ಕೈಕೊಟ್ಟ ಆರೋಪ ಕೇಳಿ ಬಂದಿತ್ತು. ಇದಕ್ಕೂ ನಿತ್ಯಾನ ಶಾಪ ಕಾರಣ ಎಂದು ಗುಲ್ಲೆಬ್ಬಿತ್ತು.
ಪ್ರತಿಭಟನೆಗಳು ಮುಂದುವರೆದಿದೆ
ಜಯಲಲಿತಾ ಅವರ ಪರ ಮದುರೈ ಅಷ್ಟೇ ಅಲ್ಲದೆ, ಈರೋಡ್, ಟುಟಿಕೋರನ್, ರಾಮೇಶ್ವರಂ, ಕಡಲೂರು, ವಿಲ್ಲುಪುರಂ, ಕನ್ಯಾಕುಮಾರಿ ಸೇರಿದಂತೆ ಹಲವೆಡೆ ವಿವಿಧ ರೀತಿಯಲ್ಲಿ ಪ್ರತಿಭಟನೆಗಳು ನಡೆದಿವೆ. ಸಾವಿರಕ್ಕೂ ಅಧಿಕ ಎಐಎಡಿಎಂಕೆ ಕಾರ್ಯಕರ್ತರು ನೇತೃತ್ವವನ್ನು ಪನ್ನೀರ್ ಸೆಲ್ವಂ ಅವರ ಸೋದರ ಓಪಿಎಸ್ ರಾಜ ವಹಿಸಿಕೊಂಡಿದ್ದಾರೆ.
ಮಠ ಮಾನ್ಯಗಳು ಕೂಡಾ ಈ ನಿಟ್ಟಿನಲ್ಲಿ ಕೈಜೋಡಿಸಿವೆ. ಆದರೆ, ಶೈವ ಮಠಕ್ಕೆ ಬೆಂಬಲ ಸೂಚಿಸದೆ ಸುಮ್ಮನಿರುವ ಸ್ವಾಮಿ ನಿತ್ಯಾನಂದನಿಗೆ ಮುಂದೊಂದು ದಿನ ಜಯಾ ಹಾಗೂ ಅವರ ಅಭಿಮಾನಿಗಳಿಂದ ಕಾಟ ಶುರುವಾಗುವುದನ್ನು ನಿರೀಕ್ಷಿಸಬಹುದು.