ಉಗ್ರ ಹುಸೇನ್ ಬಂಧನಕ್ಕೆ ಕ್ಷಿಪ್ರ ಪ್ರತೀಕಾರ ನಡೆಯಿತೇ?
ಚೆನ್ನೈ, ಮೇ2- ಭದ್ರತೆಯನ್ನೇ ಪ್ರಧಾನವಾಗಿಸಿಕೊಂಡು ಸುಮಾರು ಒಂದೂವರೆ ತಿಂಗಳ ಸುದೀರ್ಘಾವಧಿಗೆ ಚುನಾವಣೆ ನಡೆಸಿ, ಆತಂಕವಾದಕ್ಕೆ ಆಸ್ಪದ ನೀಡದೆ ಚುನಾವಣಾ ಪ್ರಕ್ರಿಯೆ ನಡೆಸುತ್ತಿದ್ದ ಚುನಾವಣಾ ಆಯೋಗದ ಆಶಯಕ್ಕೆ ಕೊನೆಯ ಹಂತದಲ್ಲಿ ಒಂದಷ್ಟು ಪೆಟ್ಟು ಬಿದ್ದಿದೆ.
ಆಯೋಗಕ್ಕೆ ಸಮರ್ಥವಾಗಿ ಸಾಥ್ ನೀಡಿರುವ ಭದ್ರತಾ ಪಡೆಗಳು ಮತ್ತು ಸ್ಥಳೀಯ ಪೊಲೀಸರು ಸ್ತುತ್ಯರ್ಹ ಕೆಲಸ ಮಾಡುತ್ತಾ ಬಂದಿದ್ದಾರೆ. ಅದರಲ್ಲೂ ಮೊನ್ನೆ ಚೆನ್ನೈನಲ್ಲಿ ಐಎಸ್ಐ ಉಗ್ರ ಶ್ರೀಲಂಕಾ ಮೂಲದ ಜಾಹೀರ್ ಹುಸೇನನ್ನು ಬಂಧಿಸಿದಾಗ ಜನ ಶಹಬ್ಬಾಸ್ ಅಂದಿದ್ದರು. [ವಿಧಾನಸೌಧ ಸ್ಫೋಟಕ್ಕೆ ಸಂಚು: ಪಾಕ್ ಉಗ್ರನ ಬಂಧನ]
ಇನ್ನು ನಿನ್ನೆ ವಿಶ್ವ ಕಾರ್ಮಿಕ ದಿನಾಚರಣೆಯ ದಿನ ನತದೃಷ್ಟ ಬೆಂಗಳೂರು-ಗುವಹಾಟಿ ಎಕ್ಸ್ ಪ್ರೆಸ್ ರೈಲು ಒಂದೂವರೆ ಗಂಟೆ ತಡವಾಗಿ ಪ್ರಯಾಣ ಮಾಡಿದೆ. ಸಾಮಾನ್ಯವಾಗಿ ನಮ್ಮ ರೈಲುಗಳು ವಿಳಂಬವಾಗಿ ಸಂಚರಿಸುವುದು ಅಸಾಮಾನ್ಯವೇನೂ ಅಲ್ಲ. ಸಮಯಕ್ಕೆ ಸರಿಯಾಗಿ ಸಂಚರಿಸಿದರೇನೇ ವಿಶೇಷತೆ ಎದ್ದುಕಾಣುತ್ತದೆ.
ಆದರೆ blessing in disguise ಎಂಬಂತೆ ನಿನ್ನೆ ರೈಲು ವಿಳಂಬವಾಗಿ ಸಂಚರಿಸಿದ್ದು ಒಳ್ಳೆಯದೇ ಆಗಿದೆ. ಇಲ್ಲಾಂದ್ರೆ ಪಾಪಿಗಳು ಒನ್ನೂ ದೊಡ್ಡ ಮಟ್ಟದ ಅನಾಹುತಕ್ಕೆ ಕೈಹಾಕುವವರಿದ್ದರು. ಪ್ರಯಾಣ ತಡವಾದಷ್ಟೂ ಭಯೋತ್ಪಾದಕರ ಧೈರ್ಯ ಉಡುಗುತ್ತಾ ಬಂದು ಸಣ್ಣ ಮಟ್ಟದ ಆತಂಕವಾದ ಸೃಷ್ಟಿಸಿದ್ದಾರೆ. ಆದರೂ ಮುಗ್ಧ ಸ್ವಾತಿ ಬಲಿಯಾಗಿದ್ದಾರೆ.
ಈ ಮಧ್ಯೆ, ನಿನ್ನೆಯ ಭಯೋತ್ಪಾದಕ ಕೃತ್ಯ ಇನ್ನಷ್ಟು ಅನುಮಾನ/ ಆತಂಕಗಳಿಗೆ ದಾರಿ ಮಾಡಿಕೊಟ್ಟಿದೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನಿನ್ನೆ ಸೀಮಾಂಧ್ರದಲ್ಲೇ ಹೆಚ್ಚಾಗಿ ಕಾಲ ಕಳೆದಿದ್ದಾರೆ. ಸ್ಫೋಟಗೊಂಡ ಬೆಂಗಳೂರು-ಗುವಹಾಟಿ ಎಕ್ಸ್ ಪ್ರೆಸ್ ರೈಲು ಸೀಮಾಂಧ್ರ ಭಾಗದಲ್ಲಿ ಸಂಚರಿಸುತ್ತಿತ್ತು. ಆ ವೇಳೆ ಬಹಿರಂಗ ಸಭೆಯಲ್ಲಿ ಮೋದಿಯನ್ನು ಉಡಾಯಿಸುವುದಕ್ಕೆ ಉಗ್ರರು ಸಂಚು ರೂಪಿಸಿದ್ದರಾ? ಎಂಬುದರತ್ತಲೂ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ. [ಬಾಂಬ್ ಸ್ಫೋಟ : ಚೆನ್ನೈ ರೈಲು ನಿಲ್ದಾಣದ ಚಿತ್ರಗಳು]
ಮೊನ್ನೆಯಷ್ಟೇ ಪೆರಂಬದೂರಿನಲ್ಲಿ ರಾಜೀವ್ ಗಾಂಧಿಯನ್ನು ಹತ್ಯೆ ಮಾಡಿದಂತೆ ಮೋದಿಯನ್ನು ಸಾಯಿಸಲು ಉಗ್ರರು ಹೊಂಚುಹಾಕುತ್ತಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಎಚ್ಚರಿಕೆ ರವಾನಿಸಿತ್ತು.
ರಾಜೀವ್ ಗಾಂಧಿ ಹತ್ಯೆಯೂ ಹೀಗೆಯೇ ಇನ್ನೇನು ಚುನಾವಣೆ ಮುಗಿಯುತ್ತಾ ಬಂದಿದೆ ಅಂದಾಗ ಅವರನ್ನು ಹತ್ಯೆ ಮಾಡಲಾಗಿತ್ತು. ಆ ಹತ್ಯೆಯೂ ಶ್ರೀಲಂಕಾ ನಂಟನ್ನು ಹೊಂದಿತ್ತು. ಇಲ್ಲೂ ಅಷ್ಟೇ 16ನೇ ಲೋಖಸಭೆಗೆ ಚುನಾವಣೆಗಳು ಬಹುತೇಕ ಮುಗಿಯುತ್ತಾ ಬಂದಿವೆ. ಇನ್ನು, ಇದಕ್ಕೆ ಲಂಕಾ ಲಿಂಕ್ ಸಹ ಇದೆ. ಉಗ್ರ ಹುಸೇನ್ ಬಂಧನಕ್ಕೆ ಕ್ಷಿಪ್ರ ಪ್ರತೀಕಾರ ನಡೆಯಿತೇ?
ಬೆಂಗಳೂರಿನಲ್ಲಿ ವಿಧಾನಸೌಧ ಸ್ಫೋಟಕ್ಕೆ ಸಂಚು ರೂಪಿಸಿದ್ದ ಆರೋಪದ ಮೇಲೆ ಚೆನ್ನೈ ಪೊಲೀಸರು ಪಾಕಿಸ್ತಾನದ ಐಎಸ್ಐ ಅಧಿಕಾರಿಗಳ ಸಂಪರ್ಕ ಹೊಂದಿದ್ದ ಶ್ರೀಲಂಕಾ ಮೂಲದ ಜಾಹೀರ್ ಹುಸೇನನನ್ನು ಮಂಗಳವಾರ ಮಧ್ಯರಾತ್ರಿ ಬಂಧಿಸಿದ್ದರು. [ಚೆನ್ನೈ ಸ್ಫೋಟ : ಪೊಲೀಸರಿಂದ ಮೂವರು ಶಂಕಿತರ ಬಂಧನ]
ಕಳೆದ ಅಕ್ಟೋಬರ್ 27ರಂದು ಸಹ ಪಾಟ್ನಾದಲ್ಲಿ ಮೋದಿ ಭಾಗವಹಿಸಿದ್ದ ಬೃಹತ್ ಸಮಾವೇಶದಲ್ಲಿ ಸರಣಿ ಬಾಂಬ್ ಸ್ಫೋಟಗಳು ನಡೆದಿದ್ದವು. ಕಳೆದ ತಿಂಗಳು ರಾಜಸ್ಥಾನದಲ್ಲಿ ಮೋದಿ ಮೇಲೆ ಆತ್ಮಾಹುತಿ ದಾಳಿಗೆ ಸಂಚು ರೂಪಿಸಿದ್ದ ಆರೋಪದ ಮೇಲೆ ಪೊಲೀಸರು ನಾಲ್ವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಹಾಗಾಗಿ ಮೋದಿಗೆ ಪ್ರಾಣ ಬೆದರಿಕೆ ತೀವ್ರವಾಗಿದೆ ಎಂದು ಆತಂಕವ್ಯಕ್ತಪಡಿಸಿರುವ ಬಿಜೆಪಿ ವಕ್ತಾರೆ ನಿರ್ಮಲಾ ಸೀತಾರಾಮನ್ ಅವರು ಇನ್ನಾದರೂ ಮೋದಿಗೆ ಮತ್ತಷ್ಟು ಹೆಚ್ಚಿನ ಭದ್ರತೆ ಒದಗಿಸಬೇಕು ಎಂದು ಕೇಂದ್ರವನ್ನು ಆಗ್ರಹಿಸಿದ್ದಾರೆ.