ಹೀರೋ ಮೋಟೊಕಾರ್ಪ್ ಕೈ ತಪ್ಪಲು ನಾವು ಕಾರಣರಲ್ಲ
ಬೆಂಗಳೂರು, ಸೆ. 19 : 'ರಾಜ್ಯದಲ್ಲಿ ಹೀರೋ ಮೋಟೊಕಾರ್ಪ್ ಘಟಕವನ್ನು ಸ್ಥಾಪನೆ ಮಾಡಲು ಸರ್ಕಾರ ಸಕಲ ರೀತಿಯಲ್ಲಿ ಸಹಕಾರ ನೀಡಿತ್ತು. ಆದರೆ, ಆಂಧ್ರಪ್ರದೇಶದಲ್ಲಿ ಉಚಿತವಾಗಿ ಭೂಮಿ ದೊರೆಯುತ್ತದೆ ಎಂಬ ಕಾರಣಕ್ಕಾಗಿ ಘಟಕವನ್ನು ಕಂಪನಿ ಅಲ್ಲಿಗೆ ಸ್ಥಳಾಂತರ ಮಾಡುತ್ತಿದೆ' ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶುಕ್ರವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಘಟಕ ಆಂಧ್ರಪಪ್ರದೇಶಕ್ಕೆ ಸ್ಥಳಾಂತರಗೊಂಡಿದೆ ಎಂಬ ಆರೋಪವನ್ನು ತಳ್ಳಿ ಹಾಕಿದರು. ರಾಜ್ಯದಲ್ಲಿ 1,115 ಕೋಟಿ ಬಂಡವಾಳ ಹೂಡಿಕೆ ಮಾಡಲು ಕಂಪನಿ ಸಿದ್ಧವಾಗಿತ್ತು. ಸರ್ಕಾರ 500 ಎಕರೆ ಜಮೀನನ್ನು ಎಕರೆಗೆ 32 ಲಕ್ಷದ ರೂ.ನಂತೆ ಘಟಕಕ್ಕೆ ನೀಡಲು ತೀರ್ಮಾನ ಕೈಗೊಂಡಿತ್ತು ಎಂದು ಸಿಎಂ ಹೇಳಿದರು.
ತೆರಿಗೆ ನೀತಿ, ಮುದ್ರಣ ಮತ್ತು ನೋಂದಣಿ ಶುಲ್ಕ ಮುಂತಾದವುಗಳಲ್ಲಿ ರಿಯಾಯಿತಿ ನೀಡಲು ನಿರ್ಧರಿಸಿತ್ತು. ಆದರೆ, ಆಂಧ್ರಪ್ರದೇಶದಲ್ಲಿ ಉಚಿತವಾಗಿ ಭೂಮಿ ದೊರೆಯಲಿದೆ ಎಂಬ ಕಾರಣಕ್ಕಾಗಿ ಘಟಕ ಚಿತ್ತೂರಿಗೆ ಸ್ಥಳಾಂತರವಾಗಲಿದೆ. ಉಚಿತವಾಗಿ ಭೂಮಿ ನೀಡುವ ವಿಚಾರದಲ್ಲಿ ರಾಜ್ಯ ಆಂಧ್ರದೊಂದಿಗೆ ಪೈಪೋಟಿ ನೀಡಲು ಸಾಧ್ಯವಾಗಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು. [ಕರ್ನಾಟಕಕ್ಕೆ ಕೈ ಕೊಟ್ಟ ಹೀರೋ]
ಉಚಿತವಾಗಿ ಭೂಮಿ ನೀಡಿದರೆ ಮುಂದೆ ರಾಜ್ಯದಲ್ಲಿ ಬಂಡಾವಳ ಹೂಡುವ ಇತರ ಕಂಪನಿಗಳು ಈ ಬಗ್ಗೆ ಬೇಡಿಕೆ ಇಡುತ್ತವೆ ಅದನ್ನು ಈಡೇರಿಸುವುದು ಸಾಧ್ಯವಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು. ಹೀರೋ ಮೋಟೊಕಾರ್ಪ್ ಕಂಪನಿಯವರು ನನ್ನೊಂದಿಗೆ ನೇರವಾಗಿ ಈ ಕುರಿತು ಮಾತುಕತೆ ನಡೆಸಿಲ್ಲ. ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಜೊತೆ ಚರ್ಚಿಸಿದ್ದರು ಎಂದು ಸಿಎಂ ಹೇಳಿದರು.
ಹೀರೋ ಮೋಟೊಕಾರ್ಪ್ ಯೋಜನೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸಿಲ್ಲ. ಮಾರ್ಚ್ 2014ರಲ್ಲಿಯೇ ಯೋಜನೆಗೆ ಒಪ್ಪಿಗೆ ನೀಡಲಾಗಿತ್ತು. ನಂತರ ಸಂಪುಟ ಉಪ ಸಮಿತಿಯಲ್ಲಿಯೂ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ಆದರೂ ಕಂಪನಿ ಸ್ಥಳಾಂತರಗೊಂಡಿದೆ ಎಂದು ಅವರು ತಿಳಿಸಿದರು.