ಅಮೆಜಾನ್ ತೆರಿಗೆ ಹೇರಿಕೆಗೆ ದಿಗ್ವಿಜಯ್ ಡಿಚ್ಚಿǃ
ಬೆಂಗಳೂರು:ಸೆ. 18: ಮೂರನೇ ಹಂತದ ಕಂಪನಿಗಳು ದಾಸ್ತಾನು ಮಾಡಿ ಜನರಿಗೆ ನೀಡುವ ಎಲೆಕ್ಟ್ರಾನಿಕ್ ವಸ್ತುಗಳಿಗೆ ತೆರಿಗೆ ನೀಡಬೇಕು ಎಂದಿರುವ ರಾಜ್ಯ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ಹಿರಿಯ ನಾಯಕರೇ ಖಂಡಿಸಿದ್ದಾರೆ.
ಅಮೆರಿಕ ಮೂಲದ ಅಮೆಜಾನ್ ಇ ಕಾಮರ್ಸ್ ಘಟಕ ದಾಸ್ತಾನು ಮಾಡುವ ಎಲೆಕ್ಡ್ರಾನಿಕ್ ವಸ್ತುಗಳ ಮೇಲೆ ತೆರಗೆ ಹಾಕಿರುವ ರಾಜ್ಯ ಸರ್ಕಾರದ ಕ್ರಮವನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಿಳಿಸಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಮತ್ತು ರಾಜ್ಯ ಸರ್ಕಾರ ವಿಶೇಷ ಆಸಕ್ತಿ ವಹಿಸಬೇಕು ಎಂದು ಹೇಳಿದ್ದಾರೆ.(ದಾಸ್ತಾನು ಎಲೆಕ್ಟ್ರಾನಿಕ್ ವಸ್ತುಗಳ ಮೇಲೂ ತೆರಿಗೆ ಭೂತ)
ಯಾವುದೇ ನಿಯಮಗಳನ್ನು ರೂಪಿಸುವಾಗ ಗ್ರಾಹಕರ ಹಿತಾಸಕ್ತಿ ಗಮನದಲ್ಲಿರಿಸಿಕೊಳ್ಳಬೇಕಾಗುತ್ತದೆ. ಅಲ್ಲದೇ ನಿಯಮಗಳು ವೈಜ್ಞಾನಿಕವಾಬೇಕಾಗುತ್ತದೆ. ಈಗಾಗಲೇ ಗ್ರಾಹಕರಿಂದ ಮೌಲ್ಯ ವರ್ಧಿತ ತೆರಿಗೆ ಪಡೆದುಕೊಳ್ಳಲಾಗುತ್ತಿದೆ. ಆನ್ ಲೈನ್ ವ್ಯಾಪಾರಕ್ಕೆ ಈ ರೀತಿಯ ತೆರಿಗೆ ಹೊರೆ ತರಬಾರದು ಎಂದು ಗುರುವಾರ ತಿಳಿಸಿದ್ದಾರೆ. ಒಟ್ಟಿನಲ್ಲಿ ಉದ್ಯಮ ಕ್ಷೇತ್ರದ ಪರವಾಗಿ ಕಾಂಗ್ರೆಸ್ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಮಾತನಾಡಿದ್ದಾರೆ.
ದಿಗ್ವಿಜಯ್ ಸಿಂಗ್ ಅನುಭವದ ಮಾತು
ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಅನುಭವವಿರುವ ದಿಗ್ವಿಜಯ್ ಸಿಂಗ್, ಕರ್ನಾಟಕ ಸರ್ಕಾರ ಮತ್ತು ಕಾಂಗ್ರೆಸ್ ಘಟಕದ ಮೇಲೆ ರಾಜಕೀಯ ಕಾರಣಕ್ಕೆ ಚಾಟಿ ಬೀಸುತ್ತಿದ್ದರು. ಈಗ ಆಡಳಿತ ವೈಖರಿ ಬಗೆಗೂ ಅಸಾಮಾಧಾನ ಹೊರಹಾಕಿದ್ದಾರೆ.
ಉದ್ಯಮ ಸ್ನೇಹಿ ವಾತಾವರಣ ನಿರ್ಮಾಣ ಅಗತ್ಯ
ರಾಜ್ಯ ಸರ್ಕಾರ ಉದ್ಯಮ ಸ್ನೇಹಿ ವಾತಾವರಣ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳಬೇಕು. ಅದು ಭಾರತದ್ದೇ ಆಗಿರಲಿ ಇಲ್ಲಾ ವಿದೇಶಗಳದ್ದಾಗಿರಲಿ ಯಾವ ತಾರತಮ್ಯ ತರಬಾರದು ಎಂದು ಎಂದು ಸೂಚಿಸಿದ್ದಾರೆ.
ದೆಹಲಿ ತರಹ ಯೋಜನೆ ತನ್ನಿ
ದೆಹಲಿಯಲ್ಲಿ ಉದ್ಯಮ ಮತ್ತು ಗ್ರಾಹಕ ಸ್ನೇಹಿ ವಾತಾವರಣವಿದೆ. ಗ್ರಾಹಕ ಯಾವುದೇ ವಸ್ತುವನ್ನು ಕೊಳ್ಳುವಾಗ ಹಿಂಜರಿಕೆ ಅನುಭವಿಸುವುದಿಲ್ಲ. ಈ ರೀತಿಯ ಬೆಳವಣಿಗೆ ಕರ್ನಾಟಕದಲ್ಲೂ ಆಗಬೇಕು ಎಂದಿದ್ದಾರೆ.
ಆರ್ಥಿಕ ಹೊಡೆತಕ್ಕೆ ಕಾರಣ
ಈ ರೀತಿಯ ಬೆಳವಣಿಗೆಗಳು ರಾಜ್ಯದ ಉದ್ಯಮ ಮತ್ತು ಆರ್ಥಿಕ ಕ್ಷೇತ್ರಕ್ಕೆ ಹೊಡೆತ ನೀಡಲಿದೆ. ಕೈಗಾರಿಕೆಗಳು ಭೇರೆ ರಾಜ್ಯಕ್ಕೆ ತೆರಳುವ ಅನಿವಾರ್ಯ ಎದುರಾಗುವ ಸಂಭವವಿರುತ್ತದೆ. ಬೆಂಗಳೂರಿಗೆ ಬರಬೇಕಿದ್ದ ಬಹುತೇಕ ಕೈಗಾರಿಕೆಗಳು ಹೈದ್ರಾಬಾದ್ ಗೆ ಹೋಗಿವೆ ಎಂದಿದ್ದಾರೆ.
ಸಿಎಂ ಭರವಸೆ ನೀಡಿದ್ದಾರೆ
ರಾಜ್ಯ ಸರ್ಕಾರದ ಕ್ರಮದಿಂದ ಅಮೆಜಾನ್ಗೆ ಈಗಾಗಲೇ ಹೊಡೆತ ಬಿದ್ದಿದೆ. ಆಗುತ್ತಿರುವ ಸಮಸ್ಯೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವಿವರಿಸಿದ್ದೇನೆ. ಇ ಕಾಮರ್ಸ್ ಘಟಕದ ಮೇಲೆ ಹಾಕಿರುವ ಮತ್ತು ಹಾಕಲು ಹೊರಟಿರುವ ತೆರಿಗೆಗಳನ್ನು ಹಿಂದಕ್ಕೆ ಪಡೆಯುತ್ತೇನೆ ಎಂದು ಸಿಎಂ ಭರವಸೆ ನೀಡಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ.
ಮೋಯ್ಲಿ ಪತ್ರದಲ್ಲೇನಿದೆ?
ಕೇಂದ್ರದ ಮಾಜಿ ಸಚಿವ, ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೋಯ್ಲಿ ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಅಮೆಜಾನ್ನ ದಾಸ್ತಾನು ಘಟಕ ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲೇ ಇದ್ದು ಘಟಕ ಬಾಗಿಲು ಹಾಕಿದರೆ ಅನೇಕ ಜನ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಹಬ್ಬದ ಸೀಸನ್ ಹತ್ತಿರ
ಹಬ್ಬದ ಸೀಸನ್ ಹತ್ತಿರವಿದ್ದುನ ಜನ ಆನ್ ಲೈನ್ ಶಾಪಿಂಗ್ ಗೆ ಮುಗಿ ಬೀಳುತ್ತಾರೆ. ಇಂಥ ಸಂದರ್ಭ ಫ್ಲಿಪ್ ಕಾರ್ಟ್ ಮತ್ತು ಸ್ನಾಪ್ ಡೀಲ್ ಜತೆ ಸ್ಪರ್ಧೆ ಎದುರಿಸುತ್ತಿರುವ ಅಮೆಜಾನ್ ಸಹ ಖಾಲಿ ದಾಸ್ತಾನು ಮಳಿಗೆ ಇಟ್ಟುಕೊಳ್ಳಲು ಸಿದ್ಧವಿಲ್ಲ.