ಬಳ್ಳಾರಿ ಜೈಲಿನಿಂದ ವಿಚಾರಣಾಧೀನ ಕೈದಿಗಳು ಪರಾರಿ
ಒಂದೇ ಕೊಲೆ ಪ್ರಕರಣದಲ್ಲಿ 2012ರಲ್ಲಿ ಬಳ್ಳಾರಿ ಕೇಂದ್ರ ಕಾರಾಗೃಹ ಸೇರಿದ್ದ 22 ವರ್ಷದ ರೇಬಣ್ಣ ಮತ್ತು 23 ವರ್ಷದ ಅಯ್ಯಾಳಪ್ಪ ಬೆಳಗಿನ ಜಾವ 4 ಗಂಟೆಯ ಸುಮಾರಿಗೆ, ಸೆರೆಯ ಸರಳು ಮುರಿದು, 12ರಿಂದ 13 ಅಡಿ ಎತ್ತರದ ಗೋಡೆಯನ್ನು ಲುಂಗಿ ಮತ್ತು ಪಂಚೆ ಬಳಸಿ ಜಿಗಿದು ಪರಾರಿಯಾಗಿದ್ದಾರೆ.
ಸಿಬ್ಬಂದಿಗಳ ಕೊರತೆ ಎದುರಿಸುತ್ತಿರುವ ಬಳ್ಳಾರಿ ಜೈಲಿನ ಲಾಭ ಪಡೆದ ಕೈದಿಗಳು, ಗೋಡೆಗೆ ವಿದ್ಯುತ್ ಹರಿಯುವ ತಂತಿಗಳನ್ನು ಹಾಕಲಾಗಿದ್ದರೂ, ಪ್ಲಾಸ್ಟಿಕ್ ಬಳಸಿ ಉಪಾಯದಿಂದ ಪಾರಾಗಿದ್ದಾರೆ. ಅವರು ಸರಳು ಮುರಿದಿದ್ದು ಹೇಗೆ? ಇದಕ್ಕೆ ಸಹಾಯ ಮಾಡಿದ ಜೈಲಿನ ಸಿಬ್ಬಂದಿ ಯಾರು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.
ಅಚ್ಚರಿಯ ಸಂಗತಿಯೆಂದರೆ, 754 ಕೈದಿಗಳನ್ನು ಹೊಂದಿರುವ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ರಾತ್ರಿ ಪಾಳಿಯಲ್ಲಿ ಇರುವುದು 8 ಪೊಲೀಸ್ ಸಿಬ್ಬಂದಿಗಳು ಮಾತ್ರ. ಆರು ಜನರು ಜೈಲಿನ ಒಳಗಡೆ ಗಸ್ತು ತಿರುಗುತ್ತಿದ್ದರೆ, ಇಬ್ಬರು ಗೇಟಿನ ಬಳಿ ಗಸ್ತು ತಿರುಗುತ್ತಿದ್ದಾರೆ. ಇವರಿಗೆ ಚಳ್ಳೆಹಣ್ಣು ತಿನ್ನಿಸಿರುವ ಕೈದಿಗಳು ಜೈಲಿನ ಬಲಭಾಗದಿಂದ ಪರಾರಿಯಾಗಿದ್ದಾರೆ.
ಕೈದಿಗಳು ಪರಾರಿಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಸಿಂಗ್ ರಾಥೋಡ್ ಅವರು ಜೈಲಿಗೆ ಭೇಟಿ ನೀಡಿ ವಿಚಾರಣೆ ನಡೆಸಿದರು. ಸರಿಯಾಗಿ ಎರಡು ತಿಂಗಳ ಹಿಂದೆ ಸೆಪ್ಟೆಂಬರ್ 1ರಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಸೈಕೋಪಾತ್ ಜೈಶಂಕರ್ ಪರಾರಿಯಾಗಿದ್ದ. ಐದು ದಿನಗಳ ನಂತರ ಜೈಲಿನ ಬಳಿಯೇ ಜೈಶಂಕರ್ ಪೊಲೀಸರಿಗೆ ಸಿಕ್ಕುಬಿದ್ದಿದ್ದ.