ಜನವರಿ 10ರಿಂದ 12ರವರೆಗೆ ಹಂಪಿ ಉತ್ಸವ
ಬಳ್ಳಾರಿ. ನ. 2 : ಹಂಪಿ ಉತ್ಸವವನ್ನು ಜನವರಿ 10ರಿಂದ 12ರವರೆಗೆ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಕಾರ್ಮಿಕ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಉತ್ಸವದಲ್ಲಿ ಕಲೆ, ಸಾಹಿತ್ಯ, ಕ್ರೀಡೆ ಸಾಂಸ್ಕೃತಿಕ ಪರಂಪರೆಯನ್ನು ಅನಾವರಣ ಮಾಡಲಾಗುವುದು ಎಂದರು.
ಆಗಸದಲ್ಲಿ ಹಂಪಿ (ಹಂಪಿ ಬೈ ನೈಟ್ - (ಇದು ವಿವಾದಕ್ಕೀಡಾಗಿದೆ)), ಪಾರಂಪರಿಕ ಗ್ರಾಮ (ಇ ಗ್ರಾಮ), ಕಾಲ್ನಡಿಗೆಯಲ್ಲಿ ಹಂಪಿ ವಿಹಂಗಮ ನೋಟ, ಆಹಾರ ಮೇಳ (ಹಂಪಿ ಬೈ ಪುಡ್), ಶೋಭಾ ಯಾತ್ರೆ, ಹಂಪಿ ಕ್ರೀಡೆಗಳು, ಸಾಹಸ ಕ್ರೀಡೆಗಳು, ಎಕ್ಸ್ಟ್ರೀಮ್ ಹಂಪಿ, ವಿನೋದ ಹಂಪಿ (ಫನ್ ಹಂಪಿ), ಹಂಪಿ ಪುಸ್ತಕ ಪ್ರದರ್ಶನ, ಹಂಪಿ ವಿಹಂಗಮ ನೋಟ (ಹಂಪಿ ಛಾಯಾಚಿತ್ರ ಪ್ರದರ್ಶನ), ವರ್ಣ ಚಿತ್ರ ರಚನಾ ಸ್ಪರ್ಧೆ, ಶಿಲ್ಪಕಲಾ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಉತ್ಸವಕ್ಕೆ ರಾಷ್ಟ್ರಮಟ್ಟ, ರಾಜ್ಯ ಮಟ್ಟ ಹಾಗು ಸ್ಥಳೀಯ ಕಲಾವಿದರನ್ನು ಆಹ್ವಾನಿಸಲಾಗುವುದು. ಉತ್ಸವವನ್ನು ಎರಡು ವೇದಿಕೆಗಳಲ್ಲಿ ಏರ್ಪಡಿಸಲಾಗುವುದು. ಜಾನಪದ ಜಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಜನವರಿ 10ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಚಿತ್ರ ನಟಿ ಹಾಗು ಸಂಸದೆ ಕು. ರಮ್ಯಾ, 11ರಂದು ವಿರೋಧ ಪಕ್ಷದ ನಾಯಕರು, 12ರಂದು ವಸತಿ ಸಚಿವರು ಹಾಗು ಚಿತ್ರ ನಟ ಅಂಬರೀಶ್, ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಪ್ರವಾಸೋದ್ಯಮ ಸಚಿವರನ್ನು ಆಹ್ವಾನಿಸಲಾಗುವುದು, ಉತ್ಸವವನ್ನು ಯಶಸ್ವಿಯಾಗಿ ಆಚರಿಸಲು ಅನುಕೂಲವಾಗುವಂತೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ಅವರು ವಿವರಿಸಿದರು.
ರಾಜ್ಯ ಮಟ್ಟದ ಸಮಿತಿಯಲ್ಲಿ ಪ್ರವಾಸೋದ್ಯಮ ಸಚಿವರು ಜಿಲ್ಲಾ ಕಾರ್ಯಕಾರಿ ಸಮಿತಿಯಲ್ಲಿ ಸಂಗೀತ ಜಿಂದಾಲ್ ಅವರನ್ನು ಸದಸ್ಯರನ್ನಾಗಿ ನೇಮಿಸಲು ಒಪ್ಪಿಗೆ ನೀಡಿದ್ದಾರೆ. ಎಲ್ಲಾ ಸಮಿತಿಗಳ ಸದಸ್ಯರಿಗೆ ಕರ್ತವ್ಯಗಳನ್ನು ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಮಾತನಾಡಿ, ಉತ್ಸವಕ್ಕೆ 6 ಕೋಟಿ ರೂ. ಅನುದಾನದ ಅಗತ್ಯವಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 1.5 ಕೋಟಿ ರೂ, ಪ್ರವಾಸೋದ್ಯಮ ಇಲಾಖೆಯಿಂದ 1 ಕೋಟಿ ರೂ. ಅನ್ನು ಬಿಡುಗಡೆ ಮಾಡಲು ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದರು.
ಸರ್ಕಾರಿ, ಅರೆ ಸರ್ಕಾರಿ, ಸರ್ಕಾರೇತರ, ಖಾಸಗಿ ಸಂಸ್ಥೆಗಳಿಂದ ದೇಣಿಗೆಯನ್ನು ಪಡೆದು ಉತ್ಸವ ಸಮಿತಿ ಬ್ಯಾಂಕ್ ಖಾತೆಗೆ ಜಮೆ ಮಾಡಿ ಉತ್ಸವದ ಖರ್ಚು ವೆಚ್ಚಕ್ಕೆ ಬಳಕೆ ಮಾಡಿಕೊಳ್ಳಲಾಗುವುದು. ವೇದಿಕೆಯನ್ನು ಸಿದ್ದಪಡಿಸಲು ಕೇಂದ್ರ ಪುರಾತತ್ವ ಇಲಾಖೆಯಿಂದ ಅನುಮತಿ ನೀಡಲಾಗುವುದು ಎಂದು ವಿವರಣೆ ನೀಡಿದರು.
ಅಂತಾರಾಷ್ಟ್ರೀಯ ಮಟ್ಟದ ಕಲಾವಿದರನ್ನು ಆಹ್ವಾನಿಸಲು ಈಗಾಗಲೇ ಸಂಪರ್ಕಿಸಲಾಗಿದೆ. ಅವರ ಲಭ್ಯತೆ ಮತ್ತು ಒಪ್ಪಿಗೆ ಪಡೆದ ನಂತರ ಅಂತಿಮ ಕಲಾವಿದರ ಪಟ್ಟಿಯನ್ನು ಸಿದ್ದಪಡಿಸಿ, ಕಾರ್ಯಕ್ರಮಗಳನ್ನು ನಿಗದಿತ ಅವಧಿ ಮತ್ತು ಸುಲಲಿತವಾಗಿ ಏರ್ಪಡಿಸಲು ಅನುಕೂಲವಾಗುವಂತೆ ಈವೆಂಟ್ ಮ್ಯಾನೇಜರ್ ಅನ್ನು ನಿಯೋಜಿಸಲಾಗುವುದು.
ತುರ್ತು ಅಗತ್ಯ ಕೆಲಸ ನಿರ್ವಹಿಸಲು ಪಾರದರ್ಶಕ ಅಧಿನಿಯಮ 2000ದಿಂದ ವಿನಾಯಿತಿ ನೀಡಲು ಕೋರಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು. ಗಣ್ಯರಿಗೆ, ಪ್ರಾಯೋಜಕತ್ವ ನೀಡಿದವರಿಗೆ ವೇದಿಕೆಯ ಮುಂಭಾಗದಲ್ಲಿ ಪ್ರತ್ಯೇಕ ಆಸನದ ವ್ಯವಸ್ಥೆ, ಗೋಲ್ಡನ್ ಕಾರ್ಡು, ಸ್ವಿಲ್ವರ್ ಕಾರ್ಡು ವ್ಯವಸ್ಥೆಯನ್ನು ಮಾಡಲಾಗುವುದು. ಸ್ವಾಗತ ಮತ್ತು ಶಿಷ್ಠಾಚಾರ ಸಮಿತಿ, ಸಾರಿಗೆ ಸಮಿತಿ, ವಸತಿ ಮತ್ತು ಆಹಾರ ಸಮಿತಿ, ಪ್ರಚಾರ ಮತ್ತು ಮಾಧ್ಯಮ ಸಮಿತಿ, ಆಮಂತ್ರಣ ಪ್ರಮಾಣ ಪತ್ರ ಪತ್ರಿಕೆ ಸಮಿತಿ, ಮೂಲಭೂತ ಸೌಲಭ್ಯ ಹಾಗು ಕುಡಿಯುವ ನೀರಿನ ವ್ಯವಸ್ಥೆ ಸಮಿತಿ, ಆರೋಗ್ಯ ಮತ್ತು ನೈರ್ಮಲ್ಯೀಕರಣ ಸಮಿತಿ, ಕಾನೂನು ಸುವ್ಯವಸ್ಥೆ ಸಮಿತಿ, ಪ್ರದರ್ಶನ ಸಮಿತಿ, ಸ್ತಬ್ಧ ಚಿತ್ರಗಳ ಹಾಗು ವೇದಿಕೆ ಸಮಿತಿ, ಕುಸ್ತಿ ಪಂದ್ಯಾವಳಿ, ಸಾಹಸ ಕ್ರೀಡೆಗಳು ಗ್ರಾಮೀಣ ಕ್ರೀಡಾಕೂಟ ಸಮಿತಿ, ಮೆರವಣಿಗೆ ಪೂಜಾ ಸಮಿತಿಗಳನ್ನು ರಚಿಸಿ ಸಮಿತಿಗಳಿಗೆ ಅಧ್ಯಕ್ಷರು, ಸದಸ್ಯರನ್ನಾಗಿ ಅಧಿಕಾರಿಗಳನ್ನು ನೇಮಿಸಲಾಗಿದೆ. ಉತ್ಸವಕ್ಕೆ ವಿವಿಧ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರವನ್ನು ನೀಡಲಾಗುವುದು ಎಂದು ತಿಳಿಸಿದರು.