ಬಳ್ಳಾರಿ : ಬ್ಯಾಂಕ್ನಲ್ಲೇ ಮ್ಯಾನೇಜರ್ ಆತ್ಮಹತ್ಯೆ
ಬಳ್ಳಾರಿ, ಡಿ.19 : ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ಬ್ಯಾಂಕಿನ ತಮ್ಮ ಕಚೇರಿಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಬಳ್ಳಾರಿ ನಗರದ ಮೀನಾಕ್ಷಿ ಲಾಡ್ಜ್ ಬಳಿಯ ಕರ್ನಾಟಕ ಬ್ಯಾಂಕ್ನ ಮ್ಯಾನೇಜರ್ ಕೃಷ್ಣಮೂರ್ತಿ (50) ಅವರು ಶುಕ್ರವಾರ ಬೆಳಗ್ಗೆ ಬ್ಯಾಂಕ್ನ ತಮ್ಮ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆ 7.30ಕ್ಕೆ ಕೃಷ್ಣಮೂರ್ತಿ ಅವರು ಬ್ಯಾಂಕಿಗೆ ಆಗಮಿಸಿದ್ದರು. [ಆತ್ಮಹತ್ಯೆ ಯತ್ನ ಅಪರಾಧವಲ್ಲ]
ಮೂರು ವರ್ಷಗಳಿಂದ ಕೃಷ್ಣಮೂರ್ತಿ ಅವರು ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ತಮ್ಮ ಕೊಠಡಿಯಲ್ಲಿ ಕೃಷ್ಣಮೂರ್ತಿ ಅವರು ಡೆತ್ನೋಟ್ ಬರೆದಿಟ್ಟಿದ್ದು, 'ನಿಯಮ ಬಾಹಿರವಾಗಿ ಕೆಲವರಿಗೆ ಲೋನ್ ನೀಡಿದ್ದೆ. ಆದರೆ, ಅವರು ಲೋನ್ ಪಾವತಿ ಮಾಡಿಲ್ಲ. ಆದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ' ಹೇಳಿದ್ದಾರೆ.
ಬೆಳಗ್ಗೆ 9.30ರ ಸುಮಾರಿಗೆ ಬ್ಯಾಂಕ್ನ ಉಳಿದ ಉದ್ಯೋಗಿಗಳು ಕಚೇರಿಗೆ ಆಗಮಿಸಿದಾಗ ಮ್ಯಾನೇಜರ್ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದ್ದು, ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 'ನನ್ನ ಮೃತದೇಹವನ್ನು ಕುಟುಂಬದವರಿಗೆ ನೀಡಿ, ಅವರಿಗೆ ಯಾವುದೇ ರೀತಿಯ ತೊಂದರೆ ಕೊಡಬೇಡಿ' ಎಂದು ಕೃಷ್ಣಮೂರ್ತಿ ಡೆತ್ನೋಟ್ನಲ್ಲಿ ಪೊಲೀಸರಿಗೆ ಮನವಿ ಮಾಡಿದ್ದಾರೆ. ಬ್ರೂಸ್ಪೇಟೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.