ನನ್ನ ಗಂಡನ ಸಾವಿಗೆ ಸಿದ್ದರಾಮಯ್ಯ ನೇರ ಹೊಣೆ
ಬೆಳಗಾವಿ, ಏ 4: ನನ್ನ ಗಂಡನ ಸಾವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನೇರ ಹೊಣೆ ಎಂದು ಬೆಳಗಾವಿಯಲ್ಲಿ ಆತ್ಮಹತ್ಯೆಗೆ ಶರಣಾದ ರೈತ ವಿಠಲ ಅರಭಾವಿ ಅವರ ಪತ್ನಿ ಸಿದ್ದವ್ವ ಆರೋಪಿಸಿದ್ದಾರೆ.
ನನ್ನ ಗಂಡನ ಸಾವಿನ ಬಗ್ಗೆ ಮುಖ್ಯಮಂತ್ರಿಗಳು ಹಗುರವಾದ ಮಾತನ್ನಾಡಿದ್ದಾರೆ, ಸಿಎಂ ಕುರ್ಚಿಗೆ ಇದು ಶೋಭೆ ತರುವುದಿಲ್ಲ. ನಮ್ಮ ಊರಿನ ರೈತರೆಲ್ಲರೂ ತಮ್ಮ ಜಮೀನನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿಗೆ ಬರೆದು ಕೊಡಲು ತಯಾರಿದ್ದಾರೆ. ತಾಕತ್ತಿದ್ದರೆ ಮುಖ್ಯಮಂತ್ರಿಗಳು ಆತ್ಮಹತ್ಯೆ ಮಾಡಿಕೊಳ್ಳಲಿ ಎಂದು ಸಿದ್ದವ್ವ ಬೇಸರದ ಮಾತನ್ನಾಡಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಕಬ್ಬಿಗೆ ಸೂಕ್ತ ಬೆಂಬಲ ನಿಗದಿ ಪಡಿಸುವಂತೆ ಮೂರು ದಿನ ಅಹೋರಾತ್ರಿ ಉಪವಾಸ ನಡೆಸಿದರೂ ಸರಕಾರ ಮೊಂಡುತನ ಪ್ರದರ್ಶಿಸಿತು. ಇವರ ನಿರ್ಲಕ್ಷ್ಯದಿಂದ ನನ್ನ ಗಂಡ ಬೇಸರದಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು ಎಂದು ಸಿದ್ದವ್ವ ಹೇಳಿದ್ದಾರೆ.
ನನ್ನ ಗಂಡ ಒಬ್ಬ ಮದ್ಯವ್ಯಸನಿ ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ನಾವು ಯಾವುದೇ ಆರ್ಥಿಕ ಸಂಕಷ್ಟದಲ್ಲಿರಲಿಲ್ಲ. ಕುಟುಂಬ ಸಮಸ್ಯೆ ಏನಾದರೂ ಇದ್ದಿದ್ದರೆ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು.
ರೈತರ ಸಮಸ್ಯೆಗೆ ಸರಕಾರ ಸ್ಪಂದಿಸದೇ ಇದ್ದಾಗ, ರೈತರಿಗಾಗಿ ನನ್ನ ಗಂಡ ಆತ್ಮಹತ್ಯೆ ಮಾಡಿಕೊಂಡರು. ನನ್ನ ಗಂಡನ ಸಾವಿಗೆ ಸಿದ್ದರಾಮಯ್ಯನವರ ಹಠಮಾರಿತನವೇ ಕಾರಣವೆಂದು ಮೃತ ರೈತನ ಪತ್ನಿ ಸಿದ್ದವ್ವ ಆರೋಪಿಸಿದ್ದಾರೆ.
ಬುಧವಾರ (ಏ 2) ಮಡಿಕೇರಿಯ ನಾಪೋಕ್ಲುವಿನಲ್ಲಿ 'ಬೆಳಗಾವಿಯಲ್ಲಿ ಅಧಿವೇಶನದ ವೇಳೆ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಆತ್ಮಹತ್ಯೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ, ಆ ರೈತ ಚೆನ್ನಾಗಿ ಕುಡಿದಿದ್ರು, ಆದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ' ಎಂದು ಸಿದ್ದರಾಮಯ್ಯ ಹೇಳಿದ್ದರು.