ಗಣೇಶನ ವಿಗ್ರಹಕ್ಕೆ ವಿದ್ಯುತ್ ಪ್ರವಹಿಸಿ ನಾಲ್ವರ ಸಾವು
ಗಣೇಶನ ಮೆರವಣಿಗೆ ವೇಳೆ ವಿಗ್ರಹಕ್ಕೆ ಹೈಟೆನ್ಶನ್ ವಿದ್ಯುತ್ ವೈರ್ ತಗುಲಿ ಇಬ್ಬರು ಮಕ್ಕಳು, ಒಬ್ಬ ಮಹಿಳೆ ಸ್ಥಳದಲ್ಲೇ ಮೃತಪಟ್ಟು, ಮತ್ತೂಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ಬುಧವಾರ ರಾತ್ರಿ ನಡೆದಿದೆ. ಗಣಪತಿ ವಿಸರ್ಜನೆ ಉತ್ಸವದ ವೇಳೆ ಮಳೆ ಸುರಿಯುತ್ತಿದ್ದುದೂ ವಿದ್ಯುತ್ ಪ್ರವಾಹವನ್ನು ಹೆಚ್ಚಿಸಿದೆ ಎನ್ನಲಾಗಿದೆ.
ಇಲ್ಲಿನ ಸದಾಶಿವ ನಗರದ ಮುಖ್ಯ ರಸ್ತೆಯಲ್ಲಿರುವ ಲಕ್ಷ್ಮೀ ಕಾಂಪ್ಲೆಕ್ಸ್ ಎದುರಿನ ಎಪಿಎಂಸಿ ರಸ್ತೆಯಲ್ಲಿ 28 ಅಡಿ ಎತ್ತರದ ಕಾಗದದ ಗಣಪತಿಯನ್ನು ಸುರಿಯುತ್ತಿರುವ ಮಳೆಯಲ್ಲಿ ಟ್ರಾಕ್ಟರಿನಲ್ಲಿ ಕೊಂಡೊಯ್ಯುತ್ತಿರುವಾಗ ಗಣೇಶನ ಕಿರೀಟಕ್ಕೆ ವೈರ್ ತಗುಲಿ ವಿದ್ಯುತ್ ಎಲ್ಲಡೆ ಹರಿದು ವಾಹನದಲ್ಲಿದ್ದವರಿಗೆ ಶಾಕ್ ತಗುಲಿದೆ.
ಗಂಗಪ್ಪ ಮೊದಲಿ (52), ಗೀತಾ ಗಜಾನನ ಸಪ್ನೆ (42) ಮತ್ತು ಈಕೆಯ ಪುತ್ರ ಸುಜನ್ ಗಜಾನನ ಸಪ್ನೆ (10) ಸ್ಥಳದಲ್ಲಿಯೇ ಮೃತಪಟ್ಟರು. ಪ್ರಜ್ವಲ್ ಅನಿಲ ಮಾಳಿ (16) ಸಿವಿಲ್ ಆಸ್ಪತ್ರೆಯಲ್ಲಿ ಮೃತಪಟ್ಟ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಆರು ಜನರನ್ನು ಕೆಎಲ್ ಇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ದುರಂತ ಸಂಭವಿಸುತ್ತಿದ್ದಂತೆ ಮೆರವಣಿಗೆಯನ್ನು ಸ್ಥಗಿತಗೊಳಿಸಿ ಜನರನ್ನು ಚದುರಿಸಿ ಗಣೇಶ ವಿಗ್ರಹವನ್ನು ಮರಳಿ ಮಂಟಪಕ್ಕೆ ಕಳುಹಿಸಲಾಯಿತು. ಮಳೆ ಸುರಿಯುತ್ತಿರುವುದರಿಂದ ಏನು ನಡೆಯುತ್ತಿದೆ ಎಂಬುದು ತಿಳಿಯದೆ ಜನ ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಸಚಿವ ಪ್ರಕಾಶ್ ಹುಕ್ಕೇರಿ ದುರಂತ ತಿಳಿದು ಕಂಬನಿ ಮಿಡಿದಿದ್ದಾರೆ.