ಪೀಣ್ಯ ನಿಲ್ದಾಣದ ವಿರುದ್ಧ ಪ್ರಯಾಣಿಕರ ಅಸಮಾಧಾನ?
ಬೆಂಗಳೂರು, ಸೆ. 17 : ಕೆಎಸ್ಆರ್ಟಿಸಿ ಪೀಣ್ಯದಲ್ಲಿ ನೂತನವಾಗಿ ನಿರ್ಮಿಸಿರುವ ಬಸವೇಶ್ವರ ಬಸ್ ನಿಲ್ದಾಣ ಕಾರ್ಯಾರಂಭ ಮಾಡಿ ಒಂದು ವಾರ ಕಳೆದಿದೆ. ಉತ್ತರ ಕರ್ನಾಟಕ ಭಾಗದ 146 ಬಸ್ಸುಗಳು ನಿಲ್ದಾಣದಿಂದ ಕಾರ್ಯನಿರ್ವಹಿಸುತ್ತಿವೆ. ಆದರೆ, ಪ್ರಯಾಣಿಕರು ಮಾತ್ರ ಪೀಣ್ಯ ನಿಲ್ದಾಣದ ಬಗ್ಗೆ ವಿರೋಧದ ಮಾತನ್ನೇ ಆಡುತ್ತಿದ್ದಾರೆ.
ಪೀಣ್ಯ ನಿಲ್ದಾಣ ದೂರವೆನ್ನುವುದು ಪ್ರಯಾಣಿಕರು ಮೊದಲ ಆರೋಪ, ಸಂಚಾರ ದಟ್ಟಣೆಯ ತುಮಕೂರು ರಸ್ತೆಯಲ್ಲಿ ಪೀಣ್ಯಕ್ಕೆ ಸಾಗಲು ಸಾಕಷ್ಟು ಸಮಯ ಬೇಕು ಎಂಬುದು ಪ್ರಯಾಣಿಕರ ಅಭಿಪ್ರಾಯ. ಮೆಜೆಸ್ಟಿಕ್ಗೆ ಬಂದು ಅಲ್ಲಿಂದ 15 ರೂ. ನೀಡಿ ಪುನಃ ಪೀಣ್ಯಕ್ಕೆ ಹೋಗಬೇಕು. ಇದರಿಂದ ಹಣ ಮತ್ತು ಸಮಯ ಎರಡೂ ಹೆಚ್ಚಾಗುತ್ತದೆ ಎನ್ನುತ್ತಾರೆ ಕೆಲವು ಪ್ರಯಾಣಿಕರು. [ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ ಹೇಗಿದೆ ಗೊತ್ತೆ?]
ಕೆಎಸ್ಆರ್ಟಿಸಿಯ ವೇಗದೂತ ಬಸ್ಸುಗಳು ಮಾತ್ರ ಪೀಣ್ಯದಿಂದ ಸಂಚರಿಸುತ್ತಿದ್ದು, ಐರಾವತ, ರಾಜಹಂಸ ಸೇರಿದಂತೆ ಐಷಾರಾಮಿ ಬಸ್ಸುಗಳು ಮೆಜೆಸ್ಟಿಕ್ಗೆ ಆಗಮಿಸುತ್ತಿವೆ. ದಸರಾ ಮತ್ತು ದೀಪಾವಳಿ ನಂತರ ಕೆಎಸ್ಆರ್ಟಿಸಿ ಸಾಮಾನ್ಯ ಬಸ್ಸುಗಳಲ್ಲಿ ಪ್ರಯಾಣಿಸಲು ಪೀಣ್ಯಕ್ಕೆ ಹೋಗುವುದು ಅನಿವಾರ್ಯವಾಗಿದೆ. ಹಬ್ಬದ ನಂತರ ನೆಲಮಂಗಲದಿಂದ ಮುಂದೆ ಸಾಗುವ ಎಲ್ಲಾ ಸಾಮಾನ್ಯ ಬಸ್ಸುಗಳು ಪೀಣ್ಯಕ್ಕೆ ಸ್ಥಳಾಂತರ ಮಾಡಲಾಗುತ್ತದೆ. ಪ್ರಯಾಣಿಕರಿಗೆ ಪೀಣ್ಯ ನಿಲ್ದಾಣದ ಬಗ್ಗೆ ಅಸಮಾಧಾನವೇಕೆ?
ಪೀಣ್ಯಕ್ಕೆ ತೆರಳುವುದು ಸುಲಭವಲ್ಲ
ತುಮಕೂರು ರಸ್ತೆ ಸದಾ ಸಂಚಾರ ದಟ್ಟಣೆಯಿಂದ ಕೂಡಿರುತ್ತದೆ ಇಂತಹ ಸಮಯದಲ್ಲಿ ಮೆಜೆಸ್ಟಿಕ್ನಿಂದ ಪೀಣ್ಯಕ್ಕೆ ಹೋಗಲು ಹೆಚ್ಚಿನ ಸಮಯ ಬೇಕಾಗುತ್ತದೆ ಎಂಬುದು ಶಿವಮೊಗ್ಗಕ್ಕೆ ತೆರಳುವ ಪ್ರಯಾಣಿಕ ರೋಹಿತ್ ಅವರ ಅಭಿಪ್ರಾಯ. ಸಾಮಾನ್ಯ ದಿನಗಳಲ್ಲೇ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಇನ್ನು ಸಾಲು-ಸಾಲು ರಜೆಯ ಸಂದರ್ಭದಲ್ಲಿ ಪೀಣ್ಯ ತಲುಪುವುದು ಕಷ್ಟ ಎಂದು ಅವರು ಹೇಳುತ್ತಾರೆ.
ಪ್ರತಿದಿನ ಸಂಚರಿಸುವ ಜನರಿಗೆ ಕಷ್ಟ
ತುಮಕೂರು ಮತ್ತು ಬೆಂಗಳೂರು ನಡುವೆ ನೂರಾರು ಜನರು ಪ್ರತಿದಿನ ಪ್ರಯಾಣಿಸುತ್ತಾರೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರು, ವಿದ್ಯಾರ್ಥಿಗಳು ಪ್ರಯಾಣಿಸುತ್ತಾರೆ. ತುಮಕೂರು ಬಸ್ಸುಗಳು ಪೀಣ್ಯದಲ್ಲಿ ನಿಲ್ಲುವುದರಿಂದ ಅಲ್ಲಿಂದ ಮೆಜೆಸ್ಟಿಕ್ಗೆ ಆಗಮಿಸಿ ಪುನಃ ಕಚೇರಿಗೆ ಹೋಗಬೇಕು. ಆದ್ದರಿಂದ ಸಮಯ ಹೆಚ್ಚು ಬೇಕಾಗುತ್ತದೆ ಎಂದು ಪ್ರಯಾಣಿಕ ಸಂತೋಷ್ ಹೇಳಿದ್ದಾರೆ. ತುಮಕೂರು ಬಸ್ಸುಗಳು ಮೆಜೆಸ್ಟಿಕ್ನಿಂದಲೇ ಕಾರ್ಯನಿರ್ವಹಿಸುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
15 ರೂ. ಹೆಚ್ಚು ಹಣ ನೀಡಬೇಕಲ್ಲ
ಪೀಣ್ಯ ಬಸ್ ನಿಲ್ದಾಣಕ್ಕೆ ಸಾಗಲು ಮೆಜೆಸ್ಟಿಕ್ನಿಂದ ಸಂಪರ್ಕ ಸಾರಿಗೆಗೆ 15 ರೂ. ನೀಡಬೇಕು ಇದರಿಂದ ಹೆಚ್ಚಿನ ಹೊರೆಯಾಗುತ್ತದೆ. ಕುಟುಂಬದೊಂದಿಗೆ ಮೆಜೆಸ್ಟಿಕ್ಗೆ ಬಂದು ಅಲ್ಲಿಂದ ಮತ್ತೊಂದು ಬಸ್ ಹಿಡಿದು ಪೀಣ್ಯಕ್ಕೆ ಹೋಗಿ ಬಸ್ ಹತ್ತುವುದು ಕಷ್ಟದ ಕೆಲಸ ಎಂದು ಬಳ್ಳಾರಿಗೆ ಪ್ರಯಾಣಿಸುತ್ತಿದ್ದ ನಾಗರಾಜ್ ತಮ್ಮ ಅಭಿಪ್ರಾಯ ಹಂಚಿಕೊಂಡರು.
ರೈಲು ತಪ್ಪಿ ಹೋಗುವ ಭಯವಿದೆ
ನಾವು ಕೆಎಸ್ಆರ್ಟಿಸಿ ಬಸ್ಸಲ್ಲಿ ಬಂದು ಮೆಜೆಸ್ಟಿಕ್ನಿಂದ ರೈಲು ಹಿಡಿದು ಸಾಗುತ್ತಿದ್ದೆವು. ಆದರೆ, ಈಗ ಪೀಣ್ಯದಲ್ಲಿ ಬಸ್ ನಿಲ್ಲುವುದರಿಂದ ಅಲ್ಲಿಂದ ಮೆಜೆಸ್ಟಿಕ್ಗೆ ಬಂದು ರೈಲು ಹಿಡಿಯಬೇಕು. ಇದರಿಂದ ರೈಲು ತಪ್ಪಿ ಹೋಗುವ ಭಯವಿದೆ ಎಂದು ಚಿತ್ರದುರ್ಗದ ಪ್ರಯಾಣಿಕರಾದ ರಮೇಶ್ ಅವರು ಹೇಳಿದ್ದಾರೆ.
ನಮ್ಮ ಏರಿಯಾಕ್ಕೆ ಹೋಗುವುದು ಹೇಗೆ?
ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣದಿಂದ ನಮ್ಮ ಏರಿಯಾಕ್ಕೆ ಹೋಗುವುದು ಹೇಗೆ ಎಂಬುದು ನಮಗೆ ಚಿಂತೆಯಾಗಿದೆ. ಮೆಜೆಸ್ಟಿಕ್ನಿಂದ ನೇರವಾದ ಬಸ್ ಸಂಪರ್ಕವಿತ್ತು. ಪೀಣ್ಯದಿಂದ ಎಲ್ಲಾ ಬಡಾವಣೆಗಳಿಗೂ ಸಂಪರ್ಕ ದೊರೆಯುವುದಿಲ್ಲ. ಆದ್ದರಿಂದ ಮೆಜೆಸ್ಟಿಕ್ಗೆ ಹೋಗಿ ಪುನಃ ಬಸ್ ಬದಲಾವಣೆ ಮಾಡಬೇಕಾಗುತ್ತದೆ ಎಂದು ಶ್ರೀವತ್ಸ ಎಂಬ ಪ್ರಯಾಣಿಕರು ಹೇಳಿದರು.
ನಮ್ಮ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ
ಪೀಣ್ಯ ಬಸ್ ನಿಲ್ದಾಣಕ್ಕೆ ಸಾವಿರಕ್ಕೂ ಅಧಿಕ ಬಸ್ಗಳನ್ನು ಸ್ಥಳಾಂತರ ಮಾಡಲಾಗಿದೆ. ಇದರಿಂದ ನಮ್ಮ ಅಂಗಡಿ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಆದ್ದರಿಂದ ನಾವು ಪೀಣ್ಯ ನಿಲ್ದಾಣಕ್ಕೆ ಅಂಗಡಿ ಸ್ಥಳಾಂತರ ಮಾಡಬೇಕು ಎಂದು ಕೊಂಡಿದ್ದೇವೆ. ಅಲ್ಲಿ ಜಾಗ ಸಿಗುತ್ತದೆಯೇ ಎಂದು ಕಾದು ನೋಡಬೇಕು ಎಂದು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಅಂಗಡಿ ಇಟ್ಟುಕೊಂಡಿರುವ ರಾಮು ಎಂಬುವವರು ಹೇಳಿದರು.