ಬೆಂಗಳೂರಲ್ಲಿ ಗೋಡೆ ಕುಸಿದು 3 ಕಾರ್ಮಿಕರ ದುರ್ಮರಣ
ಬೆಂಗಳೂರು, ಸೆ. 20: ಬೊಮ್ಮಸಂದ್ರದ ಡೆಕ್ಕನ್ ಇಂಡಸ್ಟ್ರೀಸ್ನ ನಿರ್ಮಾಣ ಹಂತದ ಗೋಡೆ ಕುಸಿದು ಮೂವರು ಕಾರ್ಮಿಕರು ಶನಿವಾರ ಮೃತಪಟ್ಟಿದ್ದಾರೆ.
ನಿರ್ಮಾಣ ಹಂತದಲ್ಲಿದ್ದ ಕಾಂಪೌಂಡ್ ಗೋಡೆ ಏಕಾಏಕಿ ಕುಸಿದ ಪರಿಣಾಮ ಸಮೀರ್ ಎಂಬ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದು, ತೀವ್ರ ಗಾಯಗೊಂಡಿದ್ದ ಪಾಂಚು ಮತ್ತು ಶಂಕರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.(ಬೆಂಗಳೂರು : ಮೂವರ ಜೀವ ತಗೆದ 6 ಅಂತಸ್ತಿನ ಕಟ್ಟಡ)
ಸ್ಥಳಕ್ಕೆ ಅಗ್ನಿಶಾಮಕ ದಳದ ಅಧಿಕಾರಿಗಳು ಭೇಟಿ ನೀಡಿದ್ದು ರಕ್ಷಣಾ ಕಾರ್ಯ ಮುಂದುವರಿಸಿದ್ದಾರೆ. ಅವಘಡ ಸಂಭವಿಸಲು ಕಳಪೆ ಕಾಮಗಾರಿಯೇ ಕಾರಣ. ನಿಗದಿತ ಪ್ರಮಾಣದಲ್ಲಿ ಸಿಮೆಂಟ್ ಮತ್ತು ಕಬ್ಬಿಣ ಬಳಸದಿರುವುದರಿಂದ ಗೋಡೆ ಕುಸಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೇ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದವರು ಎನ್ಒಸಿ ಪಡೆದಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿದ್ದು ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.(ರಾಮನಗರದಲ್ಲಿ ಜೀತ ಕಾರ್ಮಿಕರಿಗೆ ಸ್ವಾತಂತ್ರ್ಯ ಸಿಕ್ಕಿತು)
ಈ ಬಗ್ಗೆ ಪ್ರತಿಕ್ರಿಯಿಸಿದ ಡೆಕ್ಕನ್ ಇಂಡಸ್ಟ್ರೀಸ್ನ ಪ್ರತಿನಿಧಿ, ಇಲ್ಲಿ ಯಾವುದೇ ಕಳಪೆ ಕಾಮಗಾರಿಯಾಗಿಲ್ಲ. ದಾಖಲೆಗಳೆಲ್ಲ ಸರಿಯಾಗಿದೆ. ಆಕಸ್ಮಿಕವಾಗಿ ಅವಘಡ ಸಂಭವಿಸಿದೆ ಎಂದು ಹೇಳಿದ್ದಾರೆ. ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.