ಅಕ್ರಮ ಜಾನುವಾರು ಸಾಗಾಟ ವರದಿ ಸಲ್ಲಿಕೆಗೆ ಡೆಡ್ಲೈನ್
ಬೆಂಗಳೂರು, ಸೆ. 30 : ಜಾನುವಾರುಗಳ ಅಕ್ರಮ ಸಾಗಾಟ ತಡೆಗೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂಬ ವರದಿಯನ್ನು ಅಕ್ಟೋಬರ್ 1 ರೊಳಗೆ ಸಲ್ಲಿಸಲು ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್. ಬಿ ಅಡಿ ಬಿಬಿಎಂಪಿ, ಪಶುಸಂಗೋಪನಾ ಇಲಾಖೆ ಮತ್ತು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದಾರೆ.
ಸ್ವಯಂ ಸೇವಾ ಸಂಸ್ಥೆಯ ಜೋಶೈನ್ ಅಂಥೋಣಿ, ನಗರದಲ್ಲಿ ಜಾನುವಾರುಗಳ ಅಕ್ರಮ ಸಾಗಾಟ ಮತ್ತು ಕಸಾಯಿಖಾನೆಗೆ ಬಲಿ ಕೊಡುವ ಕೆಲಸವಾಗುತ್ತಿದೆ. ಇದನ್ನು ತಡೆಯಬೇಕು ಎಂದು ಮನವಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಉಪ ಲೋಕಾಯುಕ್ತರು ಆದೇಶ ನೀಡಿದ್ದಾರೆ.(ಬಲಿಯಾಗಲಿರುವ ಜಾನುವಾರುಗಳ ಜೀವ ಕಾಪಾಡಿ)
ನಗರಕ್ಕೆ ಲಕ್ಷಾಂತರ ಜಾನುವಾರುಗಳನ್ನು ತರಿಸಿಕೊಳ್ಳಲಾಗಿದ್ದು ಅವು ಆಹಾರ ಮತ್ತು ಆಶ್ರಯವಿಲ್ಲದೇ ನರಳುತ್ತಿವೆ, ಬಿಬಿಎಂಪಿ, ಪೊಲೀಸರು ಅಕ್ರಮ ಸಾಗಾಟಕ್ಕೆ ಯಾವುದೆ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿ ಅಂಥೋಣಿ ಮನವಿ ಸಲ್ಲಿಸಿದ್ದರು.
ಪ್ರಾಣಿ ಹಿಂಸೆ ತಡೆಯುವುದು ಪ್ರತಿಯೊಬ್ಬರ ಜವಾಬ್ದಾರಿ. ಅದರಂತೆ ಕಾನೂನು ಅನುಷ್ಠಾನ ಮಾಡುವ ಕೆಲಸವೂ ಮುಖ್ಯ. ಹಾಗಾಗಿ ಬಿಬಿಎಂಪಿ, ಪಶುಸಂಗೋಪನಾ ಇಲಾಖೆ ಮತ್ತು ಪೊಲೀಸ್ ಇಲಾಖೆಗೆ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಅಡಿ ತಿಳಿಸಿದ್ದಾರೆ.
ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುವುದನ್ನು ನಿಷೇಧಿಸಿ 2009 ರಲ್ಲೇ ಹೈಕೋರ್ಟ್ ಸ್ಷಷ್ಟ ಆದೇಶ ನೀಡಿದೆ. ಅದನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅಡಿ ಎಚ್ಚರಿಸಿದ್ದಾರೆ.