ಮಾರುವೇಷದಲ್ಲಿ ಆಟೋ ಚಾಲಕರ ವಿರುದ್ಧ ಕಾರ್ಯಾಚರಣೆ
ರಹಸ್ಯ ಕಾರ್ಯಾಚರಣೆಯಲ್ಲಿ ಪ್ರಯಾಣಿಕರು ಕರೆದಲ್ಲಿ ಬಾರದ ಹಾಗೂ ಹೆಚ್ಚಿನ ಬಾಡಿಗೆ ಕೇಳುವ ಆರೋಪದ ಮೇರೆಗೆ 4738 ಆಟೋ ಚಾಲಕರ ವಿರುದ್ಧ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪೂರ್ವ ವಿಭಾಘದ ಡಿಸಿಪಿ ಬಾಬು ರಾಜೇಂದ್ರ ಪ್ರಸಾದ್ ಮತ್ತು ಪಶ್ಚಿಮ ವಿಭಾಗದ ಡಿಸಿಪಿ ಎಸ್ ಗಿರೀಶ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿತ್ತು. ನಗರದ ಪ್ರಮುಖ ರಸ್ತೆಗಳಲ್ಲಿ ರೈತರು ,ಖಾಸಗಿ ಕಂಪೆನಿ ಅಧಿಕಾರಿ ಪ್ರವಾಸಿ ಹೀಗೆ ವಿವಿಧ ವೇಷ ಧರಿಸಿ ಸಂಚಾರ ಪೊಲೀಸರು ಆಟೋ ಚಾಲಕರನ್ನು ಬಾಡಿಗೆಗೆ ಕರೆದಿದ್ದಾರೆ. ಈ ವೇಳೆ ಕೆಲ ಆಟೋ ಚಾಲಕರು ಹೆಚ್ಚಿನ ಪ್ರಯಾಣ ದರ ಕೇಳಿದ್ದರೆ, ಕೆಲವರು ಕರೆದ ಕಡೆಗೆ ಬರಲು ನಿರಾಕರಿಸಿದ್ದಾರೆ. ಈ ರೀತಿ ವರ್ತನೆ ತೋರಿದ ಆಟೋ ಚಾಲಕರ ಫೋಟೋಗಳನ್ನು ಗುಪ್ತವಾಗಿ ತೆಗೆದು ರಿಕ್ಷಾಗಳನ್ನು ವಶಪಡಿಸಿಕೊಂಡಿದ್ದಾರೆ. [ರದ್ದಾಗಲಿದೆ 5,918 ಬೆಂಗಳೂರಿಗರ ಲೈಸೆನ್ಸ್ಗಳು]
ಕಾರ್ಯಾಚರಣೆಯಲ್ಲಿ ಪೂರ್ವ ವಿಭಾಗದ ಪೊಲೀಸರು 3559, ಪ್ರಕರಣ ದಾಖಲಿಸಿ, 111 ಆಟೋಗಳನ್ನು ವಶಕ್ಕೆ ಪಡೆದಿದ್ದಾರೆ. ಪಶ್ಚಿಮ ವಿಭಾಗದ ಪೊಲೀಸರು 1179 ಪ್ರಕರಣ ದಾಖಲಿಸಿ 259 ಆಟೋಗಳನ್ನು ಜಪ್ತಿ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ಸಂಚಾರ ಪೊಲೀಸರು ಇದೇ ರೀತಿಯ ಕಾರ್ಯಾಚರಣೆ ನಡೆಸಿ 5 ಸಾವಿರಕ್ಕೂ ಹೆಚ್ಚು ಆಟೋಗಳ ಮೇಲೆ ಪ್ರಕರಣ ದಾಖಲಿಸಿದ್ದರು.