ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ನಿಶ್ಚಿಂತೆಯಿಂದ ತೆರಳಿ
ಬೆಂಗಳೂರು, ಆ, 20: ರಾಜಧಾನಿ ಸಂಚಾರ ಸಮಸ್ಯೆ ಪರಿಹರಿಸಲು ಮಹಾನಗರದ ವಿವಿಧ ಭಾಗಗಳಿಂದ ನೇರವಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವಂತೆ 10 ರಿಂದ 15 ಫ್ಲೈ ಓವರ್ ನಿರ್ಮಾಣ ಮಾಡಲಾಗುವುದು ಎಂದು ವಾರ್ತಾ ಮತ್ತು ಮೂಲಸೌಕರ್ಯ ಸಚಿವ ರೋಷನ್ ಬೇಗ್ ತಿಳಿಸಿದ್ದಾರೆ.(ಬಿಬಿಎಂಪಿಯೊಂದಿಗೆ ಸೇರಿ ಗೆಳತಿ ಮನೆ ರಸ್ತೆ ಸ್ವಚ್ಛಮಾಡಿ)
ಬಿಬಿಎಂಪಿ ಮತ್ತು ರಿಯಲ್ ಎಸ್ಟೇಟ್ ಉದ್ದಿಮೆದಾರರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 'ಜಾಗತಿಕ ದೃಷ್ಟಿಕೋನದಿಂದ ಹೂಡಿಕೆ ತಾಣವಾಗಿ ಬೆಂಗಳೂರು' ಕಾರ್ಯಕ್ರಮದ ನಂತರ ಸುದ್ದಿಗಾರೊಂದಿಗೆ ಮಾತನಾಡಿ ವಿಷಯ ತಿಳಿಸಿದರು.
ಉದ್ಯಾನ ನಗರಿ, ಐಟಿ-ಬಿಟಿ ಸಿಟಿ ಎಂದು ಕರೆಸಿಕೊಳ್ಳುವ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನೋಡಿದರೆ ಖೇದವಾಗುತ್ತದೆ. ಟ್ರಾಫಿಕ್ ಜಾಮ್ ತಡೆ ಉದ್ದೇಶದಿಂದ ನಗರದ ವೈಟ್ ಫೀಲ್ಡ್, ಐಟಿ ಪಾರ್ಕ್, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ನಗರದ ವಿವಿಧ ಭಾಗಗಳಿಂದ ನೇರವಾಗಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವಂತೆ ಫ್ಲೈ ಓವರ್ ನಿರ್ಮಿಸಲಾಗುವುದು. ಈ ವಿಚಾರ ಪ್ರಾರಂಭದ ಹಂತದಲ್ಲಿದೆ ಎಂದು ಹೇಳಿದರು.
ಮುಂದಿನ ವರ್ಷ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಲಾಗುವುದು. ಇದಕ್ಕೆ ಪೂರಕವಾಗಿ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ವಿವಿಧ ರಾಷ್ಟ್ರದ ತಜ್ಞರೊಂದಿಗೆ ಈ ಬಗ್ಗೆ ಚರ್ಚಿಸಲಾಗುವುದು ಎಂದು ವಿವರಿಸಿದರು.
ಬಿಬಿಎಂಪಿ ಆಯುಕ್ತ ಲಕ್ಷ್ಮೀನಾರಾಯಣ ಮಾತನಾಡಿ, ಬೆಂಗಳೂರು ವೇಗವಾಗಿ ಬೆಳೆಯುತ್ತಿದ್ದು ಪ್ರತಿದಿನ ಅನೇಕ ಕಂಪನಿಗಳು ತಲೆ ಎತ್ತುತ್ತಿವೆ. ಉದ್ಯೋಗ ಅರಸಿ ಆಗಮಿಸುವ ಜನರಿಗೆ ವಸತಿ ಕೊರತೆ ಎದುರಾಗಬಾರದು. ರಿಯಲ್ ಎಸ್ಟೇಟ್ ಉದ್ಯಮಿಗಳು ಮುಂದೆ ಬಂದು ಬಂಡವಾಳ ಹೂಡಬೇಕು. ಇದರಿಂದ ಬಿಬಿಎಂಪಿಗೂ ಆದಾಯ ಬರಲಿದ್ದೂ ನಾಗರಿಕರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.