ಬೆಂಗಳೂರಲ್ಲಿ ಬಂದಿತು ಭಾರೀ ಮಳೆ, ತಂದಿತು ಸಮಸ್ಯೆಗಳ ಹೊಳೆ
ಬೆಂಗಳೂರು, ಸೆ. 25 : ನಗರದಲ್ಲಿ ಗುರುವಾರ ಸಂಜೆ ಸುರಿದ ಭಾರೀ ಮಳೆಗೆ ಇಡೀ ನಗರದ ಜನಜೀವನ ತತ್ತರಿಸಿದೆ. ಕೆಲವೆಡೆ ಮರಗಳು ಧರೆಗುರುಳಿವೆ, ಚರಂಡಿಗಳು ತುಂಬಿ ಹರಿದಿವೆ, ಹಲವಾರು ಬಡಾವಣೆಗಳು ನೀರಿನಲ್ಲಿ ತೇಲಾಡುತ್ತಿವೆ. ಅನೇಕ ಬಡಾವಣೆಗಳಲ್ಲಿ ಮನೆಗಳಿಗೆ ಕೊಚ್ಚೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ.
ಕಳೆದೆರಡು ದಿನಗಳಿಂದ ಸಂಜೆಯ ವೇಳೆ ಮಳೆ ಬೀಳುತ್ತಿದೆ. ಹವಾಮಾನ ಇಲಾಖೆ ಇನ್ನೂ ಕೆಲದಿನ ಬೆಂಗಳೂರಿನಲ್ಲಿ ಸಂಜೆ ಮಳೆ ಬೀಳಲಿದೆ ಎಂದು ಮುನ್ಸೂಚನೆ ನೀಡಿತ್ತು. ಕೇವಲ ಮೂರು ಗಂಟೆಯಲ್ಲಿ 8.9 ಸೆಂ.ಮೀ.ನಷ್ಟು ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ಸಹಾಯಕ ನಿರ್ದೇಶಕ ಪುಟ್ಟಣ್ಣ ಅವರು ಹೇಳಿದ್ದಾರೆ.
ದೊಮ್ಮಲೂರು, ಜೆಪಿ ನಗರ, ಜಯನಗರ, ಕೆಂಗೇರಿ, ನಾಯಂಡಹಳ್ಳಿ, ಮೆಜೆಸ್ಟಿಕ್, ಸಂಪಂಗಿರಾಮನಗರ, ಸಿಲ್ಕ್ ಬೋರ್ಡ್, ಬನ್ನೇರುಘಟ್ಟ, ಕೋರಮಂಗಲ, ರಿಚ್ಮಂಡ್ ಟೌನ್, ಪ್ಯಾಲೇಸ್ ಗುಟ್ಟಹಳ್ಳಿ... ಯಾವುದೇ ಬಡಾವಣೆಯ ಹೆಸರು ತೆಗೆದುಕೊಂಡರೂ ಅಲ್ಲಿ ಮಳೆಯಿಂದಾಗಿ ಸಮಸ್ಯೆಗಳ ಪ್ರವಾಹವೇ ಹರಿದುಬಂದಿದೆ.
ಅನೇಕ ಕಡೆಗಳಲ್ಲಿ ಎರಡು ಮೂರು ಅಡಿಗಳಷ್ಟು ನೀರು ರಸ್ತೆಯ ಮೇಲೆ ನಿಂತಿದ್ದರಿಂದ ವಾಹನ ಸವಾರರು ಕಕ್ಕಾಬಿಕ್ಕಿಯಾಗಿದ್ದಾರೆ. ಎಲ್ಲೆಡೆ ಭಾರಿ ವಾಹನ ದಟ್ಟಣೆ ಉಂಟಾಗಿದೆ. ಕಿಲೋಮೀಟರುಗಟ್ಟಲೆ ವಾಹನಗಳು ರಸ್ತೆಗಳಲ್ಲಿ ಸಾಲಾಗಿ ನಿಂತಿವೆ.
ಆನಂದರಾವ್ ವೃತ್ತದಲ್ಲಿ ರೈಲ್ವೆ ಅಂಡರ್ ಪಾಸ್ ನಲ್ಲಿ ಚರಂಡಿಗಳು ತುಂಬಿ ಹರಿದಿದ್ದರಿಂದ ಎರಡು ಬಸ್ಸುಗಳು ಮುಕ್ಕಾಲು ಭಾಗ ಮುಳುಗಿವೆ. ಪ್ರಯಾಣಿಕರನ್ನು ಪೊಲೀಸರು ಪಾರು ಮಾಡಿದ್ದಾರೆ. ಶಿವಾನಂದ ಸರ್ಕಲ್ ನಲ್ಲಿ ಹಲವಾರು ಬಡಾವಣೆಗಳು ಕೆರೆಗಳಂತಾಗಿವೆ.
ಎಂದಿನಂತೆ ನಾಯಂಡಹಳ್ಳಿಯಲ್ಲಿ ಮನೆಗಳಿಗೆ ನೀರು ನುಗ್ಗಿದ್ದಲ್ಲದೆ, ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್ ನಲ್ಲಿ ನಾಲ್ಕೂ ದಿಕ್ಕುಗಳಲ್ಲಿ ವಾಹನ ಸಂಚಾರ ಸಂಪೂರ್ಣ ಹದಗೆಟ್ಟಿತ್ತು. ರಸ್ತೆ ಬದಿ ಒಟ್ಟಲಾಗಿದ್ದ ಮಣ್ಣು, ಕಸಕಡ್ಡಿಗಳು ರಸ್ತೆಗೆ ಹರಿದುಬಂದಿದ್ದರಿಂದ ಮತ್ತು ಅದನ್ನು ನೋಡಲು ಮೇಲುಸೇತುವೆ ಮೇಲಿಂದ ಜನರು ವಾಹನ ಇಳಿದು ನೋಡುತ್ತಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಆಡುಗೋಡಿಯ ಕೆಎಸ್ಆರ್ಪಿ ಪೊಲೀಸ್ ಕ್ವಾರ್ಟರ್ಸ್, ಪಾಪರೆಡ್ಡಿಪಾಳ್ಯದಲ್ಲಿರುವ ವಿದ್ಯಾರ್ಥಿನಿಯರ ಹಾಸ್ಟೆಲ್ಲಿಗೆ, ಕೆಂಗೇರಿ ಬಳಿಯ ರಾಮಪ್ಪ ಬಡಾವಣೆಯ ಎಲ್ಲ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಇಡೀ ರಾತ್ರಿ ನಿದ್ದೆಗೆಟ್ಟು ನೀರು ಹೊರಹಾಕುವಂಥ ಪರಿಸ್ಥಿತಿ ತಲೆದೋರಿದೆ. ಇಷ್ಟೆಲ್ಲ ಅನಾಹುತಗಳಾಗಿದ್ದರೂ ಬಿಬಿಎಂಪಿಯ ಯಾವ ಸಿಬ್ಬಂದಿಯೂ ಸ್ಪಂದಿಸುತ್ತಿಲ್ಲ ಎಂದು ಜನರು ದೂರುತ್ತಿದ್ದಾರೆ.