ಡಾಲರ್ಸ್ ಕಾಲೋನಿಯಲ್ಲಿ ಸಿಕ್ಕಾಪಟ್ಟೆ ಸೊಳ್ಳೆ ಕಾಟವಂತೆ
ಬೆಂಗಳೂರು, ಜು.24: ಡಾಲರ್ಸ್ ಕಾಲೋನಿಯ ರಾಜ ಕಾಲುವೆಯನ್ನು ಆಧುನಿಕ ತಂತ್ರಜ್ಞಾನದಡಿ ಮುಚ್ಚಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನ ಪರಿಷತ್ತಿನಲ್ಲಿಂದು ಬಿ.ಜೆ. ಪುಟ್ಟಸ್ವಾಮಿ ಅವರು ಡಾಲರ್ಸ್ ಕಾಲೋನಿಯ ತೆರೆದ ರಾಜ ಕಾಲುವೆಯಿಂದ ಸೊಳ್ಳೆಗಳು ಹೆಚ್ಚಾಗಿದ್ದು, ಅದರಿಂದ ಸ್ಥಳೀಯ ಜನರಿಗೆ ಡೆಂಗ್ಯೂ ಕಾಯಿಲೆ ಬರುತ್ತಿದ್ದು ರಾಜ ಕಾಲುವೆಯನ್ನು ಮುಚ್ಚಿಸುವಂತೆ ಮುಖ್ಯಮಂತ್ರಿ ಅವರ ಜತೆ ವಿನಂತಿಸಿದರು.
ಈ ಬಗ್ಗೆ ಬಹುಪಾಲು ಸದಸ್ಯರೂ ಒಮ್ಮತದ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆಧುನಿಕ ತಂತ್ರಜ್ಞಾನದಡಿ ಮುಚ್ಚಲು ಕ್ರಮ ಕೈಗೊಳ್ಳಲಾಗುವುದೆಂದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.[ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಆಗಲಿದೆಯೇ?]
ರಾಜ ಕಾಲುವೆಯನ್ನು ಮುಚ್ಚಲು ಸಾಧ್ಯವಿಲ್ಲ. ಮುಚ್ಚಿದರೆ ಹೂಳನ್ನು ಯಂತ್ರಗಳಿಂದ ಎತ್ತಲು ಸಾಧ್ಯವಾಗುವುದಿಲ್ಲ. ಅಲ್ಲದೆ ಮುಚ್ಚುವುದರಿಂದ ಯಂತ್ರದ ಬದಲಾಗಿ ಕಾರ್ಮಿಕರಿಂದ ಹೂಳನ್ನು ತೆಗೆಸಬೇಕಾಗುತ್ತದೆ. ಇದು ಕಾರ್ಮಿಕರ ಪ್ರಾಣಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ವಾಸಸ್ಥಾನವಿರುವ ಕಡೆಗಳಲ್ಲಿ ಮಾತ್ರ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿ ರಾಜ ಕಾಲುವೆಯನ್ನು ಮುಚ್ಚಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದೆಂದು ಸದಸ್ಯರಿಗೆ ಭರವಸೆ ನೀಡಿದರು.