ಹಿಂದುಳಿದ ವರ್ಗಕ್ಕೆ ಬ್ರಾಹ್ಮಣ ಸಮುದಾಯ ಸೇರ್ಪಡೆ?
ಬೆಂಗಳೂರು, ಅ 3: ಸರಕಾರೀ ಸೌಲಭ್ಯ, ಅನುದಾನಗಳ ವಿಚಾರದಲ್ಲಿ ಬಹುತೇಕ ಹಿಂದುಳಿದಿರುವ ಬ್ರಾಹ್ಮಣ ಸಮುದಾಯವನ್ನು ಅಧಿಕೃತವಾಗಿ ಹಿಂದುಳಿದ ವರ್ಗಕ್ಕೆ ಸೇರ್ಪಡೆ ಗೊಳಿಸಲು ಸಿದ್ದರಾಮಯ್ಯ ಸರಕಾರ ಚಿಂತನೆ ನಡೆಸುತ್ತಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಬ್ರಾಹ್ಮಣರು ಮತ್ತು ವೈಶ್ಯರಲ್ಲೂ ಕಡು ಬಡವರಿದ್ದಾರೆ. ಹಿಂದುಳಿದ ವರ್ಗಕ್ಕೆ ಈ ಎರಡೂ ಸಮುದಾಯವನ್ನು ಸೇರಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಚಿಂತನೆ ನಡೆಸುತ್ತಿದ್ದಾರೆಂದು ಸಮಾಜ ಕಲ್ಯಾಣ ಸಚಿವ ಎಚ್ ಆಂಜನೇಯ ಹೇಳಿದ್ದಾರೆ.
ವಿದ್ಯಾಸಿರಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಜೊತೆ ವೇದಿಕೆ ಹಂಚಿಕೊಂಡು ಮಾತನಾಡುತ್ತಿದ್ದ ಸಚಿವರು, ಎಲ್ಲಾ ವರ್ಗದಲ್ಲೂ ಕಡು ಬಡವರಿದ್ದಾರೆ.
ಹಿಂದುಳಿದ ವರ್ಗಗಳ ಇಲಾಖೆ ಕೇವಲ ಒಂದೇ ವರ್ಗದವರಿಗೆ ಸೀಮಿತವಾಗಿಲ್ಲ. ಎಲ್ಲಾ ವರ್ಗದ ಬಡವರು ಇಲಾಖೆಯ ಲಾಭವನ್ನು ಪಡೆಯ ಬಹುದಾಗಿದೆ ಎಂದು ಸಚಿವರು ಹೇಳಿದ್ದಾರೆ.
ಬ್ರಾಹ್ಮಣ ಮತ್ತು ವೈಶ್ಯ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರ್ಪಡೆ ಚಿಂತನೆಯ ಬಗ್ಗೆ ಓದುಗರೇ ನಿಮ್ಮ ಅಭಿಪ್ರಾಯವೇನು? ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದು ಮತ್ತು ಸಚಿವರು ಹೇಳಿದ್ದೇನು? ಸ್ಲೈಡಿನಲ್ಲಿ..
ಜಾತಿವಾರು ಸಮೀಕ್ಷೆ
ರಾಜ್ಯದಲ್ಲಿ ಯಾವ ಯಾವ ಸಮುದಾಯದಲ್ಲಿ ಎಷ್ಟು ಜನಸಂಖ್ಯೆಯಿದೆ ಎನ್ನುವುದನ್ನು ಕರಾರುವಕ್ಕಾಗಿ ತಿಳಿಯ ಬೇಕಾಗಿದೆ. 1931ರ ನಂತರ ದೇಶದಲ್ಲಿ ಜಾತೀವಾರು ಸಮೀಕ್ಷೆ ನಡೆದಿಲ್ಲ. ಈ ಬಗ್ಗೆ ನಿಖರವಾಗಿ ಮಾಹಿತಿ ಸಿಕ್ಕಾಗ ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯ - ಸಿಎಂ ಸಿದ್ದರಾಮಯ್ಯ
ಜಾತ್ಯಾತೀತ ಸರಕಾರ
ನಮ್ಮದು ಜಾತ್ಯಾತೀತ ಸರಕಾರ. ವೋಟ್ ಬ್ಯಾಂಕ್ ರಾಜಕಾರಣ ಕಾಂಗ್ರೆಸ್ ಸಂಪ್ರದಾಯವಲ್ಲ. ಬಡತನ ಅನ್ನುವುದು ಎಲ್ಲಾ ವರ್ಗದಲ್ಲೂ, ಎಲ್ಲಾ ಸಮುದಾಯದಲ್ಲೂ ಇರುತ್ತದೆ. ಕರ್ನಾಟಕವನ್ನು ಬಡತನ ಮುಕ್ತ ರಾಜ್ಯವನ್ನು ಮಾಡುವುದೇ ನಮ್ಮ ಸರಕಾರದ ಉದ್ದೇಶ.
117ಕೋಟಿ ವೆಚ್ಚ
ಈ ಹಿಂದೆ ನಾನು ಹಣಕಾಸು ಸಚಿವನಾಗಿದ್ದಾಗ 23 ಕೋಟಿ ಬಿಡುಗಡೆ ಮಾಡಿದ್ದೆ. ಆದರೆ ಕಾರಣಾಂತರಗಳಿಂದ ಸಮೀಕ್ಷೆ ನಡೆಸಲು ಚಾಲನೆ ಸಿಕ್ಕಿರಲಿಲ್ಲ. 117ಕೋಟಿ ರೂಪಾಯಿ ವೆಚ್ಚ ಈ ಸಮೀಕ್ಷೆಗೆ ತಗುಲಲಿದೆ. ಇದಕ್ಕೆ ಮತ್ತೆ ಚಾಲನೆ ಸಿಗಲಿದೆ - ಸಿಎಂ ಸಿದ್ದರಾಮಯ್ಯ
ಬ್ರಾಹ್ಮಣರು ಮತ್ತು ವೈಶ್ಯರು
ನಮ್ಮ ಸರಕಾರದ ಮಹತ್ವಾಕಂಕ್ಷಿ ವಿದ್ಯಾಸಿರಿ ಯೋಜನೆಯನ್ನು ಬಡ ಬ್ರಾಹ್ಮಣ ಕುಟುಂಬದ ವಿದ್ಯಾರ್ಥಿಗಳಿಗೂ ವಿಸ್ತರಿಸಲು ಸರಕಾರ ಗಂಭೀರ ಚಿಂತನೆ ನಡೆಸುತ್ತಿದೆ - ಸಚಿವ ಆಂಜನೇಯ
ವಿದ್ಯಾಸಿರಿ ಯೋಜನೆ
ಸರಕಾರದ ಈ ಯೋಜನೆಯಲ್ಲಿ ಲಿಂಗಾಯಿತರು, ಒಕ್ಕಲಿಗರೂ ಸೇರಿದಂತೆ ಎಲ್ಲಾ ವರ್ಗದ ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ. ಬ್ರಾಹ್ಮಣ ಕುಟುಂಬದ ವಿದ್ಯಾರ್ಥಿಗಳು ಹೊರತಾಗಿದ್ದಾರೆ. ಮುಂದಿನ ದಿನಗಳಲ್ಲಿ ಅವರನ್ನೂ ಈ ಯೋಜನೆಯಡಿಯಲಿ ತರಲಾಗುವುದು - ಸಚಿವ ಆಂಜನೇಯ