ಹಿರಿಯ ಪತ್ರಕರ್ತ 'ಮೀಸೆ' ರಂಗಣ್ಣ ವಿಧಿವಶ
ಬೆಂಗಳೂರು, ಜು. 26 : ಕರ್ನಾಟಕ ಪತ್ರಿಕಾರಂಗದಲ್ಲಿ 'ಮೀಸೆ ರಂಗಣ್ಣ' ಎಂದೇ ಜನಪ್ರಿಯತೆ ಗಳಿಸಿದ್ದ ಸಂಯುಕ್ತ ಭಾರತ ಹಾಗೂ ಫೆಡರಲ್ ಇಂಡಿಯಾ ಪತ್ರಿಕೆಗಳ ಸಂಪಾದಕರಾಗಿದ್ದ ಹಿರಿಯ ಪತ್ರಕರ್ತ ಎಚ್.ಎಸ್. ರಂಗನಾಥ್ (72) ಅವರು ಶುಕ್ರವಾರ ಸಂಜೆ, ಭೀಮನ ಅಮವಾಸ್ಯೆಯ ಹಿಂದಿನ ದಿನ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಯಾವಾಗಲೂ ನಗೆ ಚಟಾಕಿ ಹಾರಿಸಿಕೊಂಡು, ನಗುನಗುತ್ತಲೇ ಜಾಲಿಯಾಗಿ ಇರುತ್ತಿದ್ದ ರಂಗಣ್ಣ ತಮ್ಮ ವಿಶಿಷ್ಟವಾದ ಮೀಸೆ ಮತ್ತು ಹಾಸ್ಯಪ್ರಜ್ಞೆಯಿಂದ ರಾಜಕೀಯ, ಪತ್ರಿಕೋದ್ಯಮ ಮತ್ತು ಸಾಂಸ್ಕೃತಿಕ ವಲಯದಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದರು. ಸಹೃದಯಿಯಾಗಿದ್ದ ಅವರು ಬೆಂಗಳೂರು ಪ್ರೆಸ್ ಕ್ಲಬ್ ಗೆ ನಡೆದ ಚುನಾವಣೆಯಲ್ಲಿ ಸದಸ್ಯರಾಗಿ ಕೂಡ ಆಯ್ಕೆಯಾಗಿದ್ದರು.
ಬೆಂಗಳೂರು ಪ್ರೆಸ್ ಕ್ಲಬ್ ನಿಂದ ಬಸವನಗುಡಿ ಹತ್ತಿರದಲ್ಲಿದ್ದ ತಮ್ಮ ಮನೆಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಮಾರ್ಗಮಧ್ಯದಲ್ಲಿಯೇ ಅವರಿಗೆ ತೀವ್ರ ಹೃದಯಾಘಾತವಾಗಿದೆ. ವಾಹನದಿಂದ ಬಿದ್ದ ಅವರನ್ನು ಬೆಂಗಳೂರು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯದಲ್ಲಿಯೇ ಅವರು ಕೊನೆಯುಸಿರೆಳೆದರು. ಸ್ವಾತಂತ್ರ್ಯ ಹೋರಾಟಗಾರ ಮತ್ತು ವಿಧಾನಪರಿಷತ್ ಮಾಜಿ ಸದಸ್ಯ ದಿ. ಶ್ರೀಕಂಠಯ್ಯ ಅವರ ಮಗನಾಗಿದ್ದ ರಂಗನಾಥ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ.
ಸಿದ್ಧರಾಮಯ್ಯ ಸಂತಾಪ : ಮೇನಕ ಚಲನಚಿತ್ರ ನಿಯತಕಾಲಿಕೆಯಿಂದ ಪತ್ರಿಕೋದ್ಯಮವನ್ನು ಪ್ರವೇಶಿಸಿದ್ದ ರಂಗಣ್ಣ ಅವರು ಆತ್ಮೀಯತೆಗೆ ಮತ್ತೊಂದು ಹೆಸರಾಗಿದ್ದರು. ಎಲ್ಲರೊಂದಿಗೆ ಎಲ್ಲೆಡೆ ಎಳೆ ನಗೆ ಬೀರುತ್ತಾ ಗಮನ ಸೆಳೆಯುತ್ತಿದ್ದ ರಂಗಣ್ಣ ಅವರು ತಮ್ಮ ವಿನಯತೆ ಮತ್ತು ವಿನಮ್ರತೆಯಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು ಸಿದ್ದರಾಮಯ್ಯ ಅವರು ರಂಗಣ್ಣನನ್ನು ಬಣ್ಣಿಸಿದ್ದಾರೆ.
ಅತ್ಯಂತ ಉತ್ಸಾಹಿಗಳೂ ಹಾಗೂ ಕ್ರಿಯಾಶೀಲರೂ ಆಗಿದ್ದ ರಂಗಣ್ಣ ಅವರ ಹಠಾತ್ ನಿಧನದಿಂದ ಆತ್ಮೀಯ ಮಿತ್ರನೋರ್ವನನ್ನು ಕಳೆದುಕೊಂಡಂತಾಗಿದೆ ಎಂದು ಮುಖ್ಯಮಂತ್ರಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ರಂಗಣ್ಣ ಅವರ ನಿಧನದ ಸುದ್ದಿ ತಿಳಿಯುತ್ತಿದಂತೆಯೇ, ನಗರದ ಜೆ ಪಿ ನಗರದಲ್ಲಿರುವ ಅವರ ಸೋದರಿಯ ಮನೆಗೆ ತೆರಳಿ ರಂಗಣ್ಣ ಅವರ ಪಾರ್ಥಿವ ಶರೀರರಕ್ಕೆ ಪುಷ್ಪ ನಮನ ಸಲ್ಲಿಸಿ ಸಿದ್ದರಾಮಯ್ಯ ಅವರು ಗೌರವ ಅರ್ಪಿಸಿದರು.
ಪ್ರೆಸ್ ಕ್ಲಬ್ ನಲ್ಲಿ ಶ್ರದ್ಧಾಂಜಲಿ : ರಂಗಣ್ಣ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಬೆಂಗಳೂರು ವರದಿಗಾರರ ಕೂಟ ಸೋಮವಾರ, ಜು.28ರಂದು ಪ್ರೆಸ್ ಕ್ಲಬ್ ನಲ್ಲಿ ಜಂಟಿ ಶ್ರದ್ಧಾಂಜಲಿ ಸಭೆಯನ್ನು ಏರ್ಪಡಿಸಿದೆ.
ಕಂಬನಿ ಮಿಡಿದ ಪರಿಷತ್ : ಮೀಸೆ ರಂಗಣ್ಣ ಅವರಿಗೆ ವಿಧಾನ ಪರಿಷತ್ ನಲ್ಲಿಯೂ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸದನ ಆರಂಭವಾಗುವುದಕ್ಕೆ ಮುನ್ನ ಉಪಸಭಾಪತಿ ಅವರು ಸಂತಾಪ ಸೂಚನೆ ಮಂಡಿಸಿದರು. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಾಯಕರು ರಂಗಣ್ಣ ಅವರ ಸರಳತೆಯನ್ನು ಶ್ಲಾಘಿಸಿ, 1 ನಿಮಿಷದ ಮೌನಾಚರಿಸಿ ಗೌರವ ಸೂಚಿಸಿದರು.