ನಿತ್ಯಾನಂದ ಪುರುಷತ್ವ ಪರೀಕ್ಷೆಗೆ ಮುಹೂರ್ತ ಫಿಕ್ಸ್
ಬೆಂಗಳೂರು, ಜು.27: ಹೈಕೋರ್ಟ್ ಆದೇಶದಂತೆ ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ಸ್ವಾಮೀಜಿ ಅವರ ಪುರುಷತ್ವ ಪರೀಕ್ಷೆ ನಡೆಸಲು ಪೊಲೀಸರು ಸಜ್ಜಾಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿತ್ಯಾನಂದ ಅವರ ಪುರುಷತ್ವ ಪರೀಕ್ಷೆಗೆ ಮುಹೂರ್ತ ನಿಗದಿ ಮಾಡಲಾಗಿದೆ.
ನಿತ್ಯಾನಂದ ಅವರನ್ನು ಆಗಸ್ಟ್ 6 ರಂದು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ಪುರುಷತ್ವ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಕೋರ್ಟ್ ಆದೇಶದಂತೆ ನಿಗದಿತ ದಿನದಂದು ತಪ್ಪದೇ ಹಾಜರಾಗುವಂತೆ ಈಗಾಗಲೇ ನಿತ್ಯಾನಂದ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ನಿತ್ಯಾನಂದ ಸ್ವಾಮೀಜಿ ಅವರ ಪುರುಷತ್ವ ಪರೀಕ್ಷೆಗೆ ಇದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ಬುಧವಾರ(ಜು.16) ತೆರವುಗೊಳಿಸಿತ್ತು. ಈ ಮೂಲಕ ನಿತ್ಯಾನಂದ ಅವರು ಕ್ರಿಮಿನಲ್ ಕೇಸಿಗೆ ಸಂಬಂಧಿಸಿದಂತೆ ಸಿಐಡಿಯಿಂದ ವಿಚಾರಣೆ, ವೈದ್ಯಕೀಯ ಪರೀಕ್ಷೆಗೆ ಒಳಪಡಲು ಇದ್ದ ಅಡ್ಡಿ ದೂರಾಗಿತ್ತು.
ನಿತ್ಯಾನಂದ ಆಶ್ರಮವಾಸಿಯಾಗಿದ್ದ ಆರತಿ ಹಾಗೂ ಇನ್ನಿತರು ನೀಡಿದ್ದ ದೂರನ್ನು ಆಧಾರವಾಗಿಟ್ಟುಕೊಂಡು ಸಿಐಡಿ ಪೊಲೀಸರು ಸಿಆರ್ ಪಿಸಿ 53(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ. ಹೈಕೋರ್ಟ್ ನ್ಯಾ. ವಿ ಜಗನ್ನಾಥನ್ ಅವರಿರುವ ನ್ಯಾಯಪೀಠ ನೀಡಿರುವ ಆದೇಶದ ಪ್ರಕಾರ ಸಿಐಡಿ ಪೊಲೀಸರು ಈ ಕೂಡಲೇ ನಿತ್ಯಾನಂದ ಸ್ವಾಮೀಜಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬಹುದಾಗಿದೆ.
ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿಯನ್ನು ಪುರುಷತ್ವ ಪರೀಕ್ಷೆ, ಧ್ವನಿ ಪರೀಕ್ಷೆ ಸೇರಿದಂತೆ ಇತರರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ರಾಮನಗರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ಜು.28ರಿಂದ ಸಾಕ್ಷಿ ವಿಚಾರಣೆ ನಡೆಸಬಹುದಾಗಿತ್ತು. ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲು ಅನುಮತಿ ನೀಡಲಾಗಿತ್ತು. ಆದರೆ, ಪೊಲೀಸರು ನಿತ್ಯಾನಂದ ಅವರನ್ನು ವಶಕ್ಕೆ ಪಡೆಯದೇ ನೇರವಾಗಿ ಪುರುಷತ್ವ ಪರೀಕ್ಷೆಗೆ ಹಾಜರುಪಡಿಸಲು ನಿರ್ಧರಿಸಿದ್ದಾರೆ.
ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರ ಆರೋಪಗಳ ಹಿನ್ನೆಲೆಯಲ್ಲಿ ಪುರುಷತ್ವ ಪರೀಕ್ಷೆ ನಡೆಸುವಂತೆ ಆದೇಶಿಸಿದ ರಾಮನಗರ ಕೋರ್ಟ್ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಬಿಡದಿಯ ನಿತ್ಯಾನಂದ ಸ್ವಾಮೀಜಿ ಸೋಮವಾರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. [ನಿತ್ಯಾನಂದ ಪುರುಷತ್ವ ಪರೀಕ್ಷೆಗೆ ಕೋರ್ಟ್ ಅಸ್ತು]