ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಹೇಳಿದ್ದೇನು?
ಬೆಂಗಳೂರು, ಏ.8 : ಎಲ್ಲೆಲ್ಲೂ ಕಾಂಗ್ರೆಸ್ ಬಾವುಟಗಳ ಹಾರಾಟ, ಫ್ಲೆಕ್ಸ್, ಬಂಟಿಗ್ಸ್, ಬ್ಯಾನರ್ ದರ್ಶನ, ಯುವರಾಜನ ಮುಖವಾಡ ತೊಟ್ಟು ರಾಹುಲ್ ಗಾಂಧಿಗೆ ಜೈಕಾರ ಹಾಕಿದ ಕಾರ್ಯಕರ್ತರು, ಟ್ರಾಫಿಕ್ ಜಾಮ್ ಇವು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದ ಸುತ್ತ ಸೋಮವಾರ ಸಂಜೆ ಕಂಡುಬಂದ ದೃಶ್ಯ.
ಒಂದು ದಿನದ ಭೇಟಿಗಾಗಿ ಸೋವಾರ ಕರ್ನಾಟಕಕ್ಕೆ ಆಗಮಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಂಜೆ 7 ಗಂಟೆ ಸುಮಾರಿಗೆ ಬೆಂಗಳೂರಿನಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೆಂಗಳೂರಿನ ಅಭ್ಯರ್ಥಿಗಳ ಪರವಾಗಿ ರಾಹುಲ್ ಮತಯಾಚನೆ ಮಾಡಿದರು. [ರಾಯಚೂರಿನಲ್ಲಿ ರಾಹುಲ್ ಹೇಳಿದ್ದೇನು?]
ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್, ಕೇಂದ್ರ ಸಚಿವ ರೆಹಮಾನ್ ಖಾನ್, ಸಚಿವರಾದ ದಿನೇಶ್ ಗುಂಡೂರಾವ್, ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ನಂದನ್ ನಿಲೇಕಣಿ, ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ರಿಜ್ವಾನ್ ಅರ್ಷದ್, ಉತ್ತರ ಕ್ಷೇತ್ರದ ಅಭ್ಯರ್ಥಿ ಸಿ.ನಾರಾಯಣ ಸ್ವಾಮಿ ಮುಂತಾದವರು ರಾಹುಲ್ ಗಾಂಧಿ ಜೊತೆ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕರ್ನಾಟಕದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಬಿಎಸ್ ಯಡಿಯೂರಪ್ಪ ಮತ್ತು ಸಚಿವರ ಸೆರೆವಾಸ, ರೆಡ್ಡಿ ಬ್ರದರ್ಸ್ ಗಣಿ ಹಗರಣ ಮುಂತಾದ ವಿಷಯಗಳನ್ನು ಪ್ರಸ್ತಾಪಿಸಿ ಇಂತಹ ಬಿಜೆಪಿಯವರಿಗೆ ಮತ ನೀಡುತ್ತೀರಾ? ಎಂದು ಪ್ರಶ್ನಿಸಿದರು. ಚಿತ್ರಗಳಲ್ಲಿ ರಾಹುಲ್ ಸಮಾವೇಶ
ಬಿಜೆಪಿ ಸರ್ಕಾರದ ಸಾಧನೆ ಏನು?
ತಮ್ಮ ಭಾಷಣದಲ್ಲಿ ಬಿಜೆಪಿ ಸರ್ಕಾರವನ್ನು ಟೀಕಿಸಿದ ರಾಹುಲ್ ಗಾಂಧಿ, ಭ್ರಷ್ಟಾಚಾರದಲ್ಲಿ ವಿಶ್ವದಾಖಲೆ ನಿರ್ಮಿಸಿರುವುದು, ಮಂತ್ರಿಯೊಬ್ಬರು ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವುದು, ಸಿಎಂ ಆದವರು ಜೈಲು ಸೇರಿದ್ದು, ಐಟಿನಗರಿಯನ್ನು ಗಾರ್ಬೇಜ್ ಸಿಟಿಯಾಗಿ ಮಾಡಿದ್ದು ಹಿಂದಿನ ಬಿಜೆಪಿ ಸರ್ಕಾರದ ಸಾಧನೆ ಎಂದು ವ್ಯಂಗ್ಯವಾಡಿದರು.
ಯಡಿಯೂರಪ್ಪ ವಿರುದ್ಧ ಗುಡುಗು
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಭ್ರಷ್ಟಾವಾರದ ಬಗ್ಗೆ ಮಾತನಾಡುತ್ತಾರೆ. ಆದರೆ, ಕರ್ನಾಟಕಕ್ಕೆ ಬಂದಾಗ ಯಡಿಯೂರಪ್ಪ ಅವರನ್ನು ಪಕ್ಕಕ್ಕೆ ಕೂರಿಸಿಕೊಂಡು ಸಮಾವೇಶ ನಡೆಸುತ್ತಾರೆ. ಆಗ ಅವರಿಗೆ ರಾಜ್ಯದ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ನೆನಪಾಗುವುದಿಲ್ಲವೇ? ಎಂದು ರಾಹುಲ್ ಗಾಂಧಿ ಯಡಿಯೂರಪ್ಪ ವಿರುದ್ಧ ಗುಡುಗಿದರು. [ರಾಹುಲ್ ಗಾಂಧಿ ಸಮಾವೇಶದ ಚಿತ್ರಗಳು]
ಸಚಿವರು ನೀಲಿಚಿತ್ರ ನೋಡಿದರು
ಬಿಜೆಪಿ ನವದೆಹಲಿಯಲ್ಲಿ ಮಹಿಳೆಯರಿಗೆ ಶಕ್ತಿ ತುಂಬುವುದಾಗಿ ದೊಡ್ಡದಾದ ಪೋಸ್ಟರ್ ಹಾಕಿದೆ. ಆದರೆ, ಕರ್ನಾಟಕದ ಮಂತ್ರಿಯೊಬ್ಬರು ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿದ್ದಾರೆ. ಸಚಿವರು ವಿಧಾನಸೌಧದಲ್ಲಿ ಅಶ್ಲೀಲ ಚಿತ್ರ ನೋಡಿದ್ದಾರೆ. ಇಂತಹ ಬಿಜೆಪಿಗೆ ಮತ ನೀಡಬೇಡಿ ಎಂದರು.
ಮಹಿಳೆಯರಿಗೆ ರಕ್ಷಣೆ ಇದೆಯೇ?
ಬಿಜೆಪಿ ಸರ್ಕಾರ ಮಹಿಳೆಯರಿಗೆ ರಕ್ಷಣೆ ನೀಡುವುದಿಲ್ಲ ಎಂದು ಹೇಳಿದ ರಾಹುಲ್ ಗಾಂಧಿ ಮಂಗಳೂರು ಪಬ್ ದಾಳಿಯನ್ನು ಪ್ರಸ್ತಾಪಿಸಿದರು. ಗುಜರಾತ್ ಮುಖ್ಯಮಂತ್ರಿ ಕಚೇರಿಯಲ್ಲಿ ಫೋನ್ ಟ್ಯಾಪಿಂಗ್ ಮಾಡಲಾಗುತ್ತದೆ. ಅಲ್ಲಿನ ಪೊಲೀಸರು ಮಹಿಳೆಯರ ಹಿಂದೆ ಬೀಳುತ್ತಾರೆ. ಇಂತಹವರು ಹೆಣ್ಣು ಮಕ್ಕಳಿಗೆ ಹೇಗೆ ರಕ್ಷಣೆ ನೀಡುತ್ತಾರೆ ಎಂದು ರಾಹುಲ್ ಪ್ರಶ್ನಿಸಿದರು.
ಪ್ರಣಾಳಿಕೆ ಪ್ರಸ್ತಾಪಿಸಿದ ರಾಹುಲ್ ಗಾಂಧಿ
ತಮ್ಮ ಪಕ್ಷದ ಪ್ರಣಾಳಿಕೆ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ. 50 ರಷ್ಟು ಮೀಸಲಾತಿ, ವಿಧಾನಸಭೆ, ಲೋಕಸಭೆಯಲ್ಲೂ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲು ಪಕ್ಷ ಬದ್ಧವಾಗಿದೆ. ಸ್ತ್ರೀಶಕ್ತಿ ಗುಂಪುಗಳಿಗೆ ಹೆಚ್ಚಿನ ಸಹಾಯ ಮಾಡಲಾಗುವುದು. 2 ಸಾವಿರ ಮಹಿಳಾ ಪೊಲೀಸ್ ಠಾಣೆ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಪ್ರಣಾಳಿಕೆ ಅಂಶಗಳನ್ನು ಹೇಳಿದರು. [ಕಾಂಗ್ರೆಸ್ ಪ್ರಣಾಳಿಕೆ ನೋಡಿ]
ಮೇಡ್ ಇನ್ ಕರ್ನಾಟಕವಾಗಬೇಕು
ಐಟಿ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದಿರುವ ಬೆಂಗಳೂರು ಹಾರ್ಡ್ ವೇರ್ ತಂತ್ರಜ್ಞಾನದಲ್ಲೂ ಸಾಧನೆ ಮಾಡಬೇಕು ಎಂದು ಹೇಳಿದ ರಾಹುಲ್ ಗಾಂಧಿ, ಮೇಡ್ ಇನ್ ಚೈನಾ ಬದಲು ಮೇಡ್ ಇನ್ ಬೆಂಗಳೂರು, ಮೇಡ್ ಇನ್ ಕರ್ನಾಟಕ, ಮೇಡ್ ಇನ್ ಇಂಡಿಯಾ ಆಗಬೇಕು ಎಂದರು.
ಭವಿಷ್ಯದ ಯೋಜನೆಗಳು
ಯುಪಿಎ ಸರ್ಕಾರ 10 ವರ್ಷದಲ್ಲಿ 15 ಕೋಟಿ ಮಂದಿಯನ್ನು ಬಡತನ ರೇಖೆಗಿಂತ ಮೇಲಕ್ಕೆ ಎತ್ತಿ ಅವರಿಗೆ ವಿಶೇಷ ಸೌಲಭ್ಯವನ್ನು ಕಲ್ಪಿಸಿದೆ. ಮುಂದಿನ ದಶಕದಲ್ಲಿ 70 ಕೋಟಿ ಮಂದಿಗೆ ಈ ಸೌಕರ್ಯ ಕಲ್ಪಿಸಿ ಮಧ್ಯಮ ವರ್ಗಗಳ ಸಾಲಿಗೆ ಸೇರಿಸಲಾಗುವುದು ಎಂದು ರಾಹುಲ್ ಗಾಂಧಿ ಹೇಳಿದರು.