ವಾರಣಾಸಿಗೆ ದಂಡೆತ್ತಿ ಹೊರಟ ಅನಂತ್ ಕಾರ್ನಾಡ್ ದಂಡು
ಬೆಂಗಳೂರು, ಏಪ್ರಿಲ್ 14- ಗುಲ್ಬರ್ಗಾ ಸೆಂಟ್ರಲ್ ಯೂನಿವರ್ಸಿಟಿಯ ಕುಲಾಧಿಪತಿ ಡಾ. ಯುಆರ್ ಅನಂತಮೂರ್ತಿ, ಜ್ಞಾನಪೀಠ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಮುಂತಾದ ಹಿರಿಯ ಚಿಂತಕರ ದಂಡು ವಾರಣಾಸಿಗೆ ಹೊರಟು ನಿಂತಿದೆ. ಏನಪ್ಪಾ ಹಿರಿಯರೆಲ್ಲಾ ತೀರ್ಥಯಾತ್ರೆಗೆ ಹೊರಟರಾ ಅಂದರೆ ವಿಷಯ ಅದಲ್ಲ ...
ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ವಾರಣಾಸಿಯಿಂದ ಸ್ಪರ್ಧಿಸುತ್ತಿದ್ದಾರೆ. ಶತಾಯಗತಾಯ ಅಲ್ಲಿಂದ ಮೋದಿ ಗೆದ್ದು ಬರಬಾರದು ಎಂದು ಶಪಥ ತೊಟ್ಟಿರುವ ಅನಂತಮೂರ್ತಿ ದಂಡು ಅಲ್ಲಿ ಮೋದಿ ವಿರುದ್ಧ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಹಾತೊರೆಯುತ್ತಿದೆ. ಅದೇ ರೀತಿ, ವಡೋದರಾಗೂ ಹೋಗಿ ಬರುತ್ತಾರಾ? ಎಂಬುದರ ಬಗ್ಗೆ ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ.
ಮೇ 4ರಂದು ವಾರಣಾಸಿಯಲ್ಲಿ ಬಹಿರಂಗ ಸಭೆ ನಡೆಸಲು ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಮತ್ತಿತರರು ಸಿದ್ಧತೆ ನಡೆಸಿದ್ದಾರೆ. ಮೋದಿ ನೇತೃತ್ವದ ಕೋಮುವಾದಿ ಶಕ್ತಿಗಳನ್ನು ದೂರವಿಟ್ಟು, ಜಾತ್ಯತೀತ ಶಕ್ತಿಗಳನ್ನು ಬಲಿಷ್ಠಗೊಳಿಸುವ ಉದ್ದೇಶದಿಂದ ವಾರಣಾಸಿಯಲ್ಲಿ ಈ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಪ್ರಗತಿಪರ ಬರಹಗಾರರ ಸಂಘ (PWA) ತಿಳಿಸಿದೆ.
ಅನಂತಮೂರ್ತಿ, ಕಾರ್ನಾಡ್ ಜತೆಗೆ ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್, ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಅರುಂಧತಿ ರಾಯ್, ಬಾಲಿವುಡ್ ಕ್ಷೇತ್ರದ ಹಿರಿಯರಾದ ಗುಲ್ಜಾರ್, ಶಬಾನಾ ಅಜ್ಮಿ, ಮಹೇಶ್ ಭಟ್ ಇನ್ನೂ ಮುಂತಾದವರು ಸಭೆಯಲ್ಲಿ ಪಾಲ್ಗೊಳ್ಳುವ ಅಂದಾಜಿದೆ.
ಕಳೆದ ವಾರ ದಿಲ್ಲಿಯಲ್ಲಿ ನಡೆದ ಸಮಾವೇಶದ ಸಮನ್ವಯ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ ಎಂದು ಪ್ರಗತಿಪರ ಬರಹಗಾರರ ಸಂಘದ ಉತ್ತರ ಪ್ರದೇಶ ಘಟಕದ ಪ್ರಧಾನ ಕಾರ್ಯದರ್ಶಿ ಸಂಜಯ್ ಶ್ರೀವಾಸ್ತವ ತಿಳಿಸಿದ್ದಾರೆ.