ಜೀವಜಲ ಉಳಿಸುತ್ತೇನೆಂದು ಇಂದೇ ಪ್ರತಿಜ್ಞೆ ಮಾಡಿ
ಬೆಂಗಳೂರು, ಮಾ. 22 : ಮುಂದಿನ ದಿನಗಳಲ್ಲಿ ಜೀವಜಲ ಹೇಗೆ ಪೂರೈಕೆಯಾಗಬೇಕು ಎಂಬುದರ ಪರಿಕಲ್ಪನೆಯೇ ಇಲ್ಲದೆ ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಗಗನಚುಂಬಿ ವಸತಿ ಸಂಕೀರ್ಣಗಳು, ಬೇಸಿಗೆ ಬರುವ ಮೊದಲೇ ಬತ್ತುತ್ತಿರುವ ಕೆರೆಗಳು, ಕುಸಿಯುತ್ತಿರುವ ಅಂತರ್ಜಲಮಟ್ಟ ಬೆಂಗಳೂರಿನ ಭೀಕರ ಭವಿಷ್ಯಕ್ಕೆ ಕನ್ನಡಿ ಹಿಡಿಯುತ್ತಿವೆ.
ಮಾರ್ಚ್ 22 ಮಾತ್ರವಲ್ಲ ಪ್ರತಿದಿನವೂ ಬೆಂಗಳೂರಿನಂಥ ನಗರಗಳಲ್ಲಿ 'ವಿಶ್ವ ನೀರು ದಿನ' ಆಚರಿಸಬೇಕಾಗಿದೆ. ಕೆಲ ಬಡಾವಣೆಗಳಲ್ಲಿ ಕೈತೊಳೆಯಲು ಕೂಡ ನೀರು ಇಲ್ಲದಿರುವಾಗ, ಕೆಲ ಅಪಾರ್ಟ್ಮೆಂಟುಗಳಲ್ಲಿ ಜನರು ಈಜುಗೊಳದಲ್ಲಿ ಈಜಾಡುತ್ತಿರುತ್ತಾರೆ. ಕೆಲವೆಡೆ ಕುಡಿಯಲು ನೀರಿಗೆ ಹಾಹಾಕಾರವಿರುವಾಗ, ಕೆಲವೆಡೆ ಪೈಪ್ ಬಿಟ್ಟು ಮನೆಮುಂದಿನ ರಸ್ತೆಯನ್ನೂ ತೊಳೆಯುತ್ತ ನೀರನ್ನು ಪೋಲು ಮಾಡುತ್ತಿರುತ್ತಾರೆ.
ಭವಿಷ್ಯದ ಬಗ್ಗೆ ಚಿಂತಿಸಿದರೆ ನಿಜಕ್ಕೂ ದಿಗಿಲಾಗುತ್ತದೆ. ನೀರನ್ನು ಹೇಗೆ ಉಳಿಸಿ, ಸದ್ಬಳಕೆ ಮಾಡಬೇಕು, ಕೆರೆಗಳನ್ನು ಯಾವ ರೀತಿ ಉಳಿಸಿಕೊಳ್ಳಬೇಕೆಂದು ನಾವು ಚಿಂತಿಸುತ್ತಿಲ್ಲ. ಇದೆಲ್ಲದರ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಬೆಂಗಳೂರಿನ ಯುನೈಟೆಡ್ ವೇ ಆಫ್ ಬೆಂಗಳೂರು ಸಂಸ್ಥೆ ಸುರಾನಾ ಕಾಲೇಜು ಮತ್ತು ಐಎಫ್ಐಎಂ ಬಿಸಿನೆಸ್ ಸ್ಕೂಲ್ ಸಹಕಾರದೊಂದಿಗೆ ಮಾ.22ರಂದು ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಬೆಂಗಳೂರಿಗಾಗಿ ಕೆರೆಗಳನ್ನು ಪುನರುಜ್ಜೀವನಗೊಳಿಸಿ
'ವೇಕ್ ದಿ ಲೇಕ್' (ಕೆರೆಗಳನ್ನು ಪುನರುಜ್ಜೀವನಗೊಳಿಸಿ) ಎಂಬ ಸಂದೇಶವಿರುವ ಖಾಲಿ ಮಣ್ಣಿನ ಮಡಿಕೆಗಳನ್ನು ಸುರಾನಾ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಕಾರ್ಯಕರ್ತರು ನಗರದ ಜನರಿಗೆ ಹಂಚಿ ಕೆರೆಗಳನ್ನು ಉಳಿಸುವಿಕೆಯ ಬಗ್ಗೆ ಮತ್ತು ನೀರಿನ ಸದ್ಬಳಕೆಯ ಬಗ್ಗೆ, ಮಳೆನೀರು ಕೊಯ್ಲುವಿನ ಅಗತ್ಯದ ಬಗ್ಗೆ ಮನವರಿಕೆ ಮಾಡಿಕೊಡಲು ಯತ್ನಿಸಿದರು.
ನಾಗರಿಕರಿಗೆ ಯುವಕರ ಎಚ್ಚರಿಕೆಯ ಸಂದೇಶ
ಇದಕ್ಕಾಗಿ ನಗರದ 6 ಭಾಗಗಳನ್ನು ಯುನೈಟೆಡ್ ವೇ ಆಫ್ ಬೆಂಗಳೂರು ಗುರುತಿಸಿತ್ತು. ಅಲ್ಲೆಲ್ಲ ಈ ಖಾಲಿ ಮಡಿಕೆಗಳನ್ನು ಹಂಚಿ, ನೀರಿನ ದುಂದುವೆಚ್ಚ ಮಾಡುತ್ತಿರುವ ನಾಗರಿಕರಿಗೆ ಯುವಕರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಅರಿತುಕೊಳ್ಳುವವರು ಅರಿತುಕೊಳ್ಳುತ್ತಾರೆ, ಇಲ್ಲದವರು ಮುಂದೆ ಅನುಭವಿಸುತ್ತಾರೆ.
ಐಷಾರಾಮಿ ಜೀವನಕ್ಕೆ ತೆತ್ತುತ್ತುರುವ ಬೆಲೆಯೇನು?
ಆಕಾಶದೆತ್ತರ ಕಟ್ಟಡಗಳು, ಐಟಿ ಪಾರ್ಕ್ ಗಳು, ಬೃಹತ್ ಮಾಲ್ ಮಲ್ಟಿಪ್ಲೆಕ್ಸ್ ಗಳು, ನಮ್ಮ ಮೆಟ್ರೋ, ಸಬ್ ವೇಗಳು, ಫ್ಪೈಓವರುಗಳು ಬೆಂಗಳೂರಿನ ಅಭಿವೃದ್ಧಿಯ ಸಂಕೇತವೇನೋ ಸರಿ. ಆದರೆ, ಈ ಐಷಾರಾಮಿ ಜೀವನಶೈಲಿಗಾಗಿ ನಾವು ತೆತ್ತುತ್ತಿರುವ ಬೆಲೆ ಏನೆಂದು ನಮಗೆ ತಿಳಿದಿದೆಯೆ? ಕೆಲವೇ ವರ್ಷಗಳಲ್ಲಿ ತಿಳಿಯಲಿದೆ.
ನೀರಿನ ಉಳಿಕೆ ಬಗ್ಗೆ ನಾಗರಿಕರು ಚಿಂತಿಸಲಿ
ಇಂಥ ಜಾಗೃತಿ ಮೂಡಿಸುವುದು ಮಾತ್ರವಲ್ಲ, ಯುನೈಟೆಡ್ ವೇ ಆಫ್ ಬೆಂಗಳೂರು ಸಂಸ್ಥೆ ಯಲಹಂಕ ಕೆರೆ, ಕೈಕೊಂಡನಹಳ್ಳಿ ಕೆರೆ, ಚಿನ್ನಪ್ಪನಹಳ್ಳಿ ಕೆರೆಗಳ ಪುನಶ್ಚೇತನಗೊಳಿಸುವ ಕಾರ್ಯದಲ್ಲಿಯೂ ತೊಡಗಿದೆ. ಇಂಥ ಕಾರ್ಯಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇಡೀ ಬೆಂಗಳೂರಿನಲ್ಲಿ ಕೈಗೊಳ್ಳಬೇಕಾಗಿದೆ. ಜೊತೆಗೆ ನಾಗರಿಕರು ಕೂಡ ಚಿಂತಿಸಬೇಕಾಗಿದೆ.