ಕರ್ನಾಟಕದಲ್ಲಿ 19 ಲಕ್ಷ ಶೌಚಾಲಯ ನಾಪತ್ತೆ!
ಸಚಿವರಾದ ಬಳಿಕ ಮೊದಲ ಬಾರಿಗೆ ಕೆಪಿಸಿಸಿ ಕಚೇರಿಗೆ ಎಚ್.ಕೆ.ಪಾಟೀಲ್ ಗುರುವಾರ ಆಗಮಿಸಿದ್ದರು. ಕಾರ್ಯಕರ್ತರ ಅಹವಾಲು ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಕಟ್ಟಿಸಿದ್ದ ಶೌಚಾಲಯಗಳು ಮಾಯವಾಗಿವೆ ಎಂದು ಹೇಳಿದರು.
ದಾಖಲೆಗಳ ಪ್ರಕಾರ ಐದು ವರ್ಷಗಳಲ್ಲಿ 44 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಕೇಂದ್ರ ಸರ್ಕಾರದ ನಿರ್ಮಲ ಭಾರತ ಅಭಿಯಾನ ಯೋಜನೆಯಡಿ ಈ ಶೌಚಾಲಯ ನಿರ್ಮಿಸಲಾಗಿತ್ತು. ಆದರೆ, ಈ ಪೈಕಿ 19 ಲಕ್ಷ ಶೌಚಾಲಯಗಳು ಅಸ್ತಿತ್ವದಲ್ಲೇ ಇಲ್ಲ. ಕೇವಲ ದಾಖಲೆಗಳಲ್ಲಷ್ಟೇ ಈ ಶೌಚಾಲಯಗಳಿವೆ ಎಂದು ಪಾಟೀಲ್ ಮಾಹಿತಿ ನೀಡಿದರು.
ಈ ವರ್ಷದ ಡಿಸೆಂಬರ್ ಅಂತ್ಯದ ವೇಳೆಗೆ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ 6 ಲಕ್ಷ ಶೌಚಾಲಯ ನಿರ್ಮಾಣ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಪಾಟೀಲ್ ಹೇಳಿದರು. ನೀರಿನ ಲಭ್ಯತೆ ಕಡಿಮೆ ಇರುವ ಗ್ರಾಮೀಣ ಪ್ರದೇಶಗಳಲ್ಲಿ ಗಾಳಿಯ ಒತ್ತಡದಿಂದ ಕಾರ್ಯನಿರ್ವಹಿಸುವ (ಪ್ರೆಷರ್ ಅಸಿಸ್ಟೆಡ್ ಟಾಯ್ಲೆಟ್) ನಿರ್ಮಿಸಲು ಚಿಂತನೆ ನಡೆದಿದೆ ಎಂದರು.
ಬಿಜೆಪಿ ಆಡಳಿತದ ಅವಧಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ 3,500 ಕೋಟಿ ಅನುದಾನವನ್ನು ಬಳಕೆ ಮಾಡದೇ ಉಳಿಸಲಾಗಿತ್ತು. ಬಳಕೆ ಮಾಡಿದ ಅನುದಾನವನ್ನೂ ಮನಸ್ಸಿಗೆ ಬಂದಂತೆ ಹಂಚಿಕೆ ಮಾಡಲಾಗಿದೆ ಎಂದು ಪಾಟೀಲ್ ದೂರಿದರು.
ಆಸ್ತಿ ನೋಂದಣಿ : ರಾಜ್ಯದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಆಸ್ತಿಗಳ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಲು ಸರ್ಕಾರ ಯೋಜನೆ ರೂಪಿಸಿದೆ. ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳ ನೋಂದಣಿಗೆ ಕಂಪ್ಯೂಟರ್ ಮೂಲಕ ಪಡೆದ ನಮೂನೆ 9 ಮತ್ತು 11ರ ಬಳಕೆ ಕಡ್ಡಾಯಗೊಳಿಸಲಾಗಿದೆ.
ಎಲ್ಲಾ ಪಂಚಾಯಿತಿಗಳಿಗೂ ಶೀಘ್ರವಾಗಿ ಈ ದಾಖಲೆಗಳನ್ನು ವಿತರಿಸಲು ಅಗತ್ಯ ವ್ಯವಸ್ಥೆ ಮಾಡಲಾಗುವುದು. ಈ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಪಾಟೀಲ್ ಹೇಳಿದರು.