ಅಮ್ಮಾ ಭೇಟಿಗಾಗಿ ಕಾದು ಕುಳಿತಿರುವ ಪನ್ನೀರ್ ಸೆಲ್ವಂ
ಬೆಂಗಳೂರು, ಸೆ. 30 : ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಅವರನ್ನು ಭೇಟಿ ಮಾಡಲು ತಮಿಳುನಾಡು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಸೋಮವಾರ ಸಂಜೆ ಮಾಡಿದ ಪ್ರಯತ್ನಗಳು ವಿಫಲವಾಗಿವೆ. ಆದ್ದರಿಂದ ಅವರು ಬೆಂಗಳೂರಿನಲ್ಲಿಯೇ ವಾಸ್ತವ್ಯ ಹೂಡಿದ್ದು, ಇಂದು ಪರಪ್ಪನ ಅಗ್ರಹಾರಕ್ಕೆ ತೆರಳಲಿದ್ದಾರೆ.
ಸೋಮವಾರ ಮಧ್ಯಾಹ್ನ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಪನ್ನೀರ್ ಸೆಲ್ವಂ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ತಮ್ಮ ನಾಯಕಿ ಜಯಲಲಿತಾ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲು ರಾತ್ರಿ ವಿಮಾನದ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. [ಪನ್ನೀರ್ ಸೆಲ್ವಂ ಸಂಕ್ಷಿಪ್ತ ಪರಿಚಯ ಇಲ್ಲಿದೆ]
ಆದರೆ, ಸೆಲ್ವಂ ಬೆಂಗಳೂರಿಗೆ ಆಗಮಿಸುವಾಗಲೇ ಸಮಯ 7.30 ಆಗಿತ್ತು. ಸಂಜೆ ಆರು ಗಂಟೆ ಬಳಿಕ ಜೈಲಿನ ಕೈದಿಗಳನ್ನು ಭೇಟಿ ಮಾಡಲು ಕಾನೂನಿನ್ವಯ ಅವಕಾಶ ಇಲ್ಲ. ಆದ್ದರಿಂದ ಜಯಲಲಿತಾ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಈ ವೇಳೆ ವಿಶೇಷ ಪಾಸ್ ಪಡೆದು ಜಯಲಲಿತಾ ಭೇಟಿ ಮಾಡುವ ಸೆಲ್ವಂ ಪ್ರಯತ್ನವೂ ವಿಫಲವಾಗಿದ್ದು, ಅವರು ನಗರದಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. [ಜಯಾ, ಶಶಿಕಲಾ, ಸುಧಾಕರ್ ಎಲ್ರೂ ಪೇಷಂಟ್ಸ್]
ಸೆಲ್ವಂ ಮತ್ತು ಅವರ ಸಂಪುಟದ ಹಲವು ಸದಸ್ಯರು ಅಮ್ಮಾ ಭೇಟಿಗಾಗಿ ಕಾದು ಕುಳಿತಿದ್ದು, ನಗರದ ಖಾಸಗಿ ಹೊಟೇಲ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಮಂಗಳವಾರ ಬೆಳಗ್ಗೆ ಜಯಲಲಿತಾ ಅವರನ್ನು ಭೇಟಿ ಮಾಡಲು ಸೆಲ್ವಂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ತೆರಳಲಿದ್ದಾರೆ. [ಜಾಮೀನಿಗಾಗಿ ಕೋರ್ಟ್ ಮೊರೆ ಹೋದ ಜಯಲಲಿತಾ]
ಇಂದು ಜಾಮೀನು ಅರ್ಜಿ ವಿಚಾರಣೆ : ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ನೀಡಬೇಕು ಮತ್ತು ತಮಮಗೆ ಜಾಮೀನು ನೀಡಬೇಕು ಎಂದು ಜಯಲಲಿತಾ ಪರ ವಕೀಲರು ಕರ್ನಾಟಕ ಹೈಕೋರ್ಟ್ಗೆ ಸಲ್ಲಿಸಿರುವ 52 ಪುಟಗಳ ಮೇಲ್ಮನವಿಯ ವಿಚಾರಣೆ ಮಂಗಳವಾರ ನಡೆಯುವ ಸಾಧ್ಯತೆ ಇದೆ. ಹಿರಿಯ ವಕೀಲ ರಾಮ್ ಜೇಠ್ಮಲಾನಿ ಜಯಲಲಿತಾ ಪರವಾಗಿ ವಾದ ಮಂಡಿಸುವ ಸಾಧ್ಯತೆ ಇದೆ.