ಯಡಿಯೂರಪ್ಪ, ಶ್ರೀರಾಮುಲು ಕಳಂಕಿತರಲ್ಲ : ಮೋದಿ
ಬೆಂಗಳೂರು, ಏ. 16 : "ಶ್ರೀರಾಮುಲು ವಿರುದ್ಧ ಒಂದಾದರೂ ಆರೋಪ ಸಾಬೀತಾಗಿದೆಯಾ ಹೇಳಿ? ದಾಖಲೆ ನೋಡಿರಿ. ಯಡಿಯೂರಪ್ಪಜಿ ವಿರುದ್ಧ ದಾಖಲಿಸಲಾದ ಎಲ್ಲ ಎಫ್ಐಆರ್ಗಳನ್ನು ರದ್ದು ಮಾಡಲಾಗಿದೆ. ಇದರರ್ಥ ನಾನು ಯಾರಿಗೂ ಸರ್ಟಿಫಿಕೇಟ್ ಇಲ್ಲಿ ಕೊಡುತ್ತಿಲ್ಲ. ಆದರೆ ಇದು ಸತ್ಯ!"
ಹೀಗೆಂದು ಪ್ರತಿಕ್ರಿಯಿಸಿದವರು ಮತ್ತಾರೂ ಅಲ್ಲ, ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು. ಟಿವಿ9 ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ, ಕಳಂಕಿತರ ಪಟ್ಟ ಕಟ್ಟಿಕೊಂಡಿದ್ದರೂ ಬಿಜೆಪಿಗೆ ವಾಪಸ್ ಆಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಶ್ರೀರಾಮುಲು ಅವರ ಸೇರ್ಪಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಕರ್ನಾಟಕದುದ್ದಕ್ಕೂ ಮಾಡಿದ ಪ್ರಚಾರ ಸಭೆಗಳಲ್ಲಿ ಇವರಿಬ್ಬರ ಬಗ್ಗೆ ತುಟಿ ಬಿಚ್ಚದಿದ್ದ ನರೇಂದ್ರ ಮೋದಿ ಅವರು ಏ.15ರಂದು ಸಂಜೆ ಪ್ರಸಾರವಾದ ಸಂದರ್ಶನದಲ್ಲಿ ಇವರಿಬ್ಬರನ್ನು ಬೆಂಬಲಿಸಿ ಮಾತುಗಳನ್ನಾಡಿದ್ದಾರೆ. ಅಚ್ಚರಿಯ ಸಂಗತಿಯೆಂದರೆ, ಯಡಿಯೂರಪ್ಪ ಸ್ಪರ್ಧಿಸುತ್ತಿರುವ ಶಿವಮೊಗ್ಗ ಮತ್ತು ಶ್ರೀರಾಮುಲು ಸ್ಪರ್ಧಿಸುತ್ತಿರುವ ಬಳ್ಳಾರಿಯಲ್ಲಿ ಮೋದಿ ಪ್ರಚಾರ ಸಭೆ ನಡೆಸಿರಲಿಲ್ಲ. [ಯಡಿಯೂರಪ್ಪ ಸಂದರ್ಶನ]
ಮೋದಿ ಹೇಳುವುದೇನೆಂದರೆ, ಆರೋಪಗಳನ್ನು ಎಲ್ಲರೂ ಮಾಡುತ್ತಾರೆ, ನನ್ನ ವಿರುದ್ಧವೂ ಹಲವಾರು ಆರೋಪಗಳಿವೆ. ಅದಕ್ಕಾಗಿ ಕಾನೂನಿದೆ, ಸಂವಿಧಾನವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಜನರೇ ತೀರ್ಪು ನೀಡುತ್ತಾರೆ. ಸಂದರ್ಶನದಲ್ಲಿ ಈ ವಿಷಯದ ಹೊರತಾಗಿ, ಗೋಧ್ರಾ ಹತ್ಯಾಕಾಂಡ, ಮೋದಿ ಅಲೆ, ಪಕ್ಷದ ಹಿರಿಯರ ಅಸ್ತಿತ್ವ ಮುಂತಾದ ವಿಷಯಗಳ ಕುರಿತು ನಿರ್ಭಿಡೆಯಿಂದ ಮತ್ತು ಜಾಣತನದಿಂದ ಉತ್ತರ ನೀಡಿದ್ದಾರೆ. ಅದರ ವಿವರಗಳು ಕೆಳಗಿನಂತಿವೆ.
ಮಾಡಿರುವ ಪಾಪಕ್ಕೆ ಕಾಂಗ್ರೆಸ್ ಮೊದಲು ಕ್ಷಮೆ ಕೇಳಲಿ
ಗೋಧ್ರಾ ಹತ್ಯಾಕಾಂಡಕ್ಕೆ ಪ್ರತಿಯಾಗಿ ಗುಜರಾತ್ ಮುಖ್ಯಮಂತ್ರಿಯಾಗಿ ಕ್ಷಮೆ ಕೇಳುತ್ತೀರಾ ಎಂಬ ಪ್ರಶ್ನೆಗೆ, ಕ್ಷಮೆ ಕೇಳಬೇಕೆಂದು ಯಾವ ಕಾಂಗ್ರೆಸ್ಸಿಗನೂ ನನ್ನ ಬಳಿ ಬಂದಿಲ್ಲ. ಇದರ ಬಗ್ಗೆ ಮಾತನಾಡಿಯೂ ಇಲ್ಲ. ಆದರೆ, ಇಷ್ಟು (ಅರವತ್ತು) ವರ್ಷಗಳ ಕಾಲ ಮಾಡಿರುವ ಪಾಪಗಳಿಗಾಗಿ ಕಾಂಗ್ರೆಸ್ ಪಕ್ಷ ಮೊದಲು ಕ್ಷಮೆ ಕೇಳಲಿ. ನಂತರವೇ ನಾನು ಕ್ಷಮೆ ಕೇಳುವ ಪ್ರಶ್ನೆ ಉದ್ಭವಿಸುತ್ತದೆ.
ಪ್ರಧಾನಿ ಆಗುತ್ತೇನೆಂದು ಒಪ್ಪಿಕೊಂಡಂತೆ ಆಯ್ತಲ್ಲ!
ನರೇಂದ್ರ ಮೋದಿ ಪ್ರಧಾನಿಯಾದರೆ ದೇಶಕ್ಕೆ ಆಪತ್ತು ಎಂದು ಪ್ರಧಾನಿ ಮತ್ತು ಚಿದಂಬರಂ ಹೇಳಿದ್ದಾರೆಂಬ ಪ್ರಶ್ನೆಗೆ, ಈ ರೀತಿ ಡಾ. ಮನಮೋಹನ ಸಿಂಗ್ ಅವರು ಮಾತನಾಡಿದ್ದನ್ನು ಈ ಹತ್ತು ವರ್ಷಗಳ ಕಾಲದಲ್ಲಿ ನಾನು ಯಾವತ್ತೂ ಕೇಳಿಲ್ಲ ಎಂದು ಮಾರುತ್ತರ ನೀಡಿದರು. ಒಂದರ್ಥದಲ್ಲಿ ನಾನು ಪ್ರಧಾನಿಯಾಗುತ್ತೇನೆಂದು ಅವರೇ ಒಪ್ಪಿಕೊಂಡಿದ್ದಾರೆ ಎಂದು ಪಂಚಿಂಗ್ ಡೈಲಾಗ್ ಹೊಡೆದರು!
ನಾನು ಪಕ್ಷದ ಸಿಪಾಯಿ, ಕಾರ್ಯಕರ್ತನಷ್ಟೆ
ದೇಶದಲ್ಲಿ ಮೋದಿ ಅಲೆ ಇದೆ ಎಂಬುದನ್ನು ನಾನು ಕೂಡ ಒಪ್ಪುವುದಿಲ್ಲ. ಇರುವುದೆಲ್ಲವೂ ಬಿಜೆಪಿ ಪರ ಅಲೆಯೆ. ಪಕ್ಷಕ್ಕಿಂತ ಮೋದಿ ದೊಡ್ಡವನೆಂದು ನಾನು ಯಾವತ್ತೂ ತಿಳಿದಿಲ್ಲ. ಬಿಜೆಪಿಯಂಥ ದೊಡ್ಡ ಪಕ್ಷದಲ್ಲಿ ನಾನೊಬ್ಬ ನಾಮಾನ್ಯ ಸಿಪಾಯಿ, ಕಾರ್ಯಕರ್ತನಷ್ಟೇ. ಅವರೆಲ್ಲ ಸೇರಿ ನನ್ನನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಈ ಚುನಾವಣೆ ಮೋದಿಗಾಗಿ ನಡೆಯುತ್ತಿಲ್ಲ, ಭಾರತದ ಭಾಗ್ಯ ನಿರ್ಮಾಣಕ್ಕಾಗಿ ನಡೆಯುತ್ತಿದೆ.
ತಾಯಿಗಿಂದ ಮಗ ದೊಡ್ಡವನಾಗಲು ಸಾಧ್ಯವೆ?
ನರೇಂದ್ರ ಮೋದಿ ಪಕ್ಷಕ್ಕಿಂತ ದೊಡ್ಡವನೆಂದು ನಾನು ಯಾವತ್ತೂ ತಿಳಿದಿಲ್ಲ. ಆ ತರಹ ಚಿಂತನೆ ಮಾಡಲಾದರೂ ಹೇಗೆ ಸಾಧ್ಯ. ಮಗ ಅಮ್ಮನಿಗಿಂತ ದೊಡ್ಡವನಾಗಲು ಯಾವತ್ತಿದ್ದರೂ ಸಾಧ್ಯವೆ? ಹೀಗೆ ಹೇಳುತ್ತಿರುವವರಿಗೆ ತಾವು ಏನು ಹೇಳುತ್ತಿದ್ದಾರೆಂದು ಅಂದಾಜಾದರೂ ಇದೆಯಾ?
ಪ್ರತೀಕಾರಣದ ರಾಜಕಾರಣ ಎಂದೂ ಮಾಡುವುದಿಲ್ಲ
ಮುಂದೆ ಪ್ರಧಾನಿಯಾದರೆ ಸೋನಿಯಾ ಅಳಿಯ ರಾಬರ್ಟ್ ವಧ್ರಾ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೀರಾ ಎಂಬ ಪ್ರಶ್ನೆಗೆ, ಪ್ರತೀಕಾರಣದ ರಾಜಕಾರಣ ಎಂದೂ ಮಾಡುವುದಿಲ್ಲ. ಅದರ ಬದಲಾಗಿ ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಮತ್ತು ಜನರಲ್ಲಿ ನಂಬಿಕೆ ಹುಟ್ಟುವಂಥ ಕೆಲಸ ಮಾಡುತ್ತೇನೆ.
ರಾಮಮಂದಿರ ನಿರ್ಮಾಣದ ಬಗ್ಗೆ ಮೋದಿ
ಮುರಳಿ ಮನೋಹರ ಜೋಶಿಯನ್ನು ನಾನು ಕಡೆಗಣಿಸಿಲ್ಲ. ನಿಜ ಸಂಗತಿಯೆಂದರೆ, ಬಿಜೆಪಿ ಪ್ರಣಾಳಿಕೆ ನಿರ್ಮಿಸುವಲ್ಲಿ ಜೋಶಿ ಯೋಗದಾನ ದೊಡ್ಡದು. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ರಾಮಮಂದಿರದ ನಿರ್ಮಾಣದ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ.
ಯಾವುದೇ ಜಾತಿಯ ಬಗ್ಗೆ ಮಾತನಾಡುವುದಿಲ್ಲ
ದೇಶದ ಮುಸ್ಲಿಂರ ಬಗ್ಗೆ ನನಗೆ ದ್ವೇಷವಿಲ್ಲ. ಅಲ್ಲದೆ, ನಾನು ಯಾವತ್ತೂ ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್ ಎಂದು ಮಾತನಾಡುವುದಿಲ್ಲ. ಬದಲಾಗಿ, ಗುಜರಾತ್ ಬಗ್ಗೆ ಮಾತನಾಡುತ್ತೇನೆ. ಭಾರತದ ಯುವಜನತೆಯನ್ನು ಒಗ್ಗೂಡಿಸುವ ಬಗ್ಗೆ ಮಾತನಾಡುತ್ತೇನೆ.
ನಾನು ಐನೂರು ಹೆಜ್ಜೆ ಮುಂದಿದ್ದೇನೆ
ಗುಜರಾತ್ ನಲ್ಲಿ ಹತ್ತು ಹನ್ನೆರಡು ವರ್ಷಗಳಿಂದ ಕೆಲಸ ಮಾಡಿದ್ದೇನೆ. ರಾಜ್ಯದಲ್ಲಿ ಮಾತ್ರ ಅಭಿವೃದ್ಧಿಯಾಗಿದೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ಬೇರೆ ರಾಜ್ಯಗಳಲ್ಲಿಯೂ ಅಭಿವೃದ್ಧಿಯಾಗಿದೆ. ಆದರೆ, ಉಳಿದವರು ಐವತ್ತು ಹೆಜ್ಜೆ ಮುಂದಿದ್ದರೆ ನಾನು ಐನೂರು ಹೆಜ್ಜೆ ಮುಂದಿದ್ದೇನೆ.
ಅಡ್ವಾಣಿ, ಜೋಶಿ ಪ್ರೇರಣೆ ನನ್ನ ದೊಡ್ಡ ಶಕ್ತಿ
ಹಿರಿಯರಾದ ಲಾಲ್ ಕೃಷ್ಣ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಅವರಿಗೆ ಬೇಕಾದ ಕ್ಷೇತ್ರಗಳು ಕೈತಪ್ಪಿದ್ದರಲ್ಲಿ ನನ್ನ ಕೈವಾಡವೇನೂ ಇಲ್ಲ. ಕ್ಷೇತ್ರಗಳನ್ನು ಅಭ್ಯರ್ಥಿಗಳಿಗೆ ವಿತರಣೆಯನ್ನು ನಾನು ಮಾಡಿಯೂ ಇಲ್ಲ. ಇಂಥ ದೊಡ್ಡವರ ಪರಿಶ್ರಮದಿಂದಲೇ ನಾನು ಬೆಳೆದಿದ್ದೇನೆ. ಅವರ ಪ್ರೇರಣೆ ಮತ್ತು ಮಾರ್ಗದರ್ಶನವೇ ನನ್ನ ದೊಡ್ಡ ಶಕ್ತಿ.