ಚಂದಾ ತರಲು ಹೋದ ಬಾಲಕರು ಸೇಲಂನಲ್ಲಿ ಪತ್ತೆ
ಬೆಂಗಳೂರು, ಆ. 26 : ಗಣೇಶ ಹಬ್ಬದ ಚಂದಾ ವಸೂಲಿಗೆ ತೆರಳಿ ನಾಪತ್ತೆಯಾಗಿದ್ದ ನಾಲ್ವರು ಬಾಲಕರು ತಮಿಳುನಾಡಿನ ಸೇಲಂನಲ್ಲಿ ಪತ್ತೆಯಾಗಿದ್ದಾರೆ.
ಕೆ.ಆರ್.ಪುರ ಬಸ್ ನಿಲ್ದಾಣದಿಂದ ಭಾನುವಾರ ನಾಪತ್ತೆಯಾಗಿದ್ದ ಪ್ರವೀಣ್(11), ವಿನಯ್(10), ರೆಫಲ್ ರಾಯ್(10) ಮತ್ತು ಡಾಮಿನಿಕ್ ಬೆನಿಡಿಕ್ಟ್ (12) ಅವರನ್ನು ಪತ್ತೆ ಹಚ್ಚಿ ಕರೆತರುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.(ಮಕ್ಕಳಿಗೆ ಅಶ್ಲೀಲ ಚಿತ್ರ ತೋರಿಸಿದ ಸೆಕ್ಯೂರಿಟಿ ಗಾರ್ಡ್)
ಚಂದಾ ವಸೂಲಿಗೆ ತೆರಳಿದ್ದಾಗ ಬಾಲಕರು ಪರಿಚಯದವರೊಬ್ಬರನ್ನು ಕಂಡಿದ್ದರು. ಅವರು ಮನೆಯಲ್ಲಿ ಚಂದಾ ವಸೂಲಿ ಮಾಡುತ್ತಿರುವುದುನ್ನು ಹೇಳುತ್ತಾರೆ. ಪಾಲಕರಿಂದ ಬೈಸಿಕೊಳ್ಳಬೇಕಾಗುತ್ತದೆ ಎಂದು ಹೆದರಿ ಕೆ.ಆರ್.ಪುರ ರೈಲು ನಿಲ್ದಾಣದಿಂದ ರೈಲು ಏರಿ ಸೇಲಂಗೆ ತೆರಳಿದ್ದಾರೆ. ಮಕ್ಕಳು ಹಿಂದಿರುಗದ್ದನ್ನು ನೋಡಿ ಪಾಲಕರು ಕೆ.ಆರ್.ಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸೋಮವಾರ ಸೇಲಂ ರೈಲು ನಿಲ್ದಾಣದಲ್ಲಿ ತಿರುಗಾಡುತ್ತಿದ್ದ ಮಕ್ಕಳನ್ನು ಕಂಡ ಅಲ್ಲಿಯ ರೈಲ್ವೆ ಪೊಲೀಸರು ವಿಚಾರಣೆ ಮಾಡಿದ್ದಾರೆ. ಸೇಲಂ ಪೊಲೀಸರು ಬಂಗಾರಪೇಟೆ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದಾರೆ. ಬಂಗಾರಪೇಟೆ ಪೊಲೀಸರು ಕೆ.ಆರ್.ಪುರಂ ಠಾಣೆ ಸಂಪರ್ಕಿಸಿದಾಗ ಮಕ್ಕಳ ವಿವರ ತಿಳಿದು ಬಂದಿದೆ.
ಪೊಲೀಸರೊಂದಿಗೆ ತೆರಳಿದ ಪಾಲಕರು ಸೋಮವಾರ ಸಂಜೆ ಮಕ್ಕಳನ್ನು ವಾಪಸ್ ಕರೆ ತಂದಿದ್ದಾರೆ.