ಸಾಯುತ್ತಿರುವ ಕೆರೆಗೆ ಬಣ್ಣದ ಜೀವ ತುಂಬಿದ ಮಕ್ಕಳು
ಬೆಂಗಳೂರು, ಫೆ. 12 : ಬೆಂಗಳೂರಿನಲ್ಲಿ ಒತ್ತುವರಿಯಿಂದಾಗಿ ಕೆರೆಗಳು ಕಣ್ಮರೆಯಾಗುತ್ತಿರುವುದು ಒಂದೆಡೆಯಾದರೆ, ಇರುವ ಕೆರೆಗಳನ್ನು ಆರೋಗ್ಯಕರ ಸ್ಥಿತಿಯಲ್ಲಿ ಉಳಿಸಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ. ಹಲವಾರು ಕೆರೆಗಳಲ್ಲಿ ಹೂಳು, ಕೊಳೆ ತುಂಬಿ ನಮ್ಮ ಕೊಳೆತು ಹೋಗಿರುವ ವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತವೆ.
ಸಾಯುವ ಸ್ಥಿತಿಯಲ್ಲಿರುವ ಕೆರೆಗಳಿಗೆ ಮತ್ತು ಜೀವ ತುಂಬುವ ಉದ್ದೇಶದಿಂದ, ಕೆರೆಗಳನ್ನು ಉಳಿಸಿರೆಂದು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಸಂಸ್ಥೆಯಾದ ಯುನೈಡೆಡ್ ವೇ ಆಪ್ ಬೆಂಗಳೂರು (United Way of Bengaluru) 'ವೇಕ್ ದಿ ಲೇಕ್' ಎಂಬ ಅಭಿಯಾನವನ್ನು ಉತ್ತರಹಳ್ಳಿ ಕೆರೆಯ ಬಳಿ ಭಾನುವಾರ ಹಮ್ಮಿಕೊಂಡಿತ್ತು. [ಮಕ್ಕಳೆ, ಕುಂಚ ಕೈಗೆತ್ತಿಕೊಳ್ಳಿ, ಕಲ್ಪನೆಗೆ ಬಣ್ಣ ತುಂಬಿ]
ಕಲ್ಮಶಗೊಂಡಿರುವ ಕೆರೆಗಳನ್ನು ಸ್ವಚ್ಛಗೊಳಿಸಲು ಜನರಲ್ಲಿ ಜಾಗೃತಿ ಮಾಡಿಸುವ ಕಾರ್ಯವನ್ನು ನಿಷ್ಕಲ್ಮಶ ಮನಸ್ಸು ಹೊಂದಿರುವ ಮಕ್ಕಳಿಗಿಂತ ಪರಿಣಾಮಕಾರಿಯಾಗಿ ಮಾಡಲು ಯಾರಿಂದ ಸಾಧ್ಯ? ಆದ್ದರಿಂದ ಉತ್ತರಹಳ್ಳಿ ಮಾಗೆಕೆರೆ ವಾಕರ್ಸ್ ಅಸೋಸಿಯೇಶನ್ ಜೊತೆಗೂಡಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮಕ್ಕೆ ಹಲವಾರು ಶಾಲೆಯ ಎಲ್ಲ ವಯೋಮಾನದ 500ಕ್ಕೂ ಹೆಚ್ಚು ಮಕ್ಕಳು ಬಂದಿದ್ದರು. [ಚಿತ್ರಪಟ]
ಅವರಿಗಾಗಿ ವಿಶೇಷ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಮಕ್ಕಳೆಲ್ಲ ಉತ್ಸಾಹದಿಂದ ಕೆರೆಗಳನ್ನು ಉಳಿಸುವ ತಮ್ಮ ಕಲ್ಪನೆಗೆ ಬಣ್ಣವನ್ನು ತುಂಬಿದರು. ಅವರಿಗಾಗಿ ಅನೇಕ ಮನರಂಜನಾತ್ಮಕ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿತ್ತು. ಕೆರೆಗಳ ದುಃಸ್ಥಿತಿ ಮತ್ತು ಅವುಗಳ ಉಳಿಕೆಯ ಕುರಿತು ತಿಳಿಸಿಕೊಡುವ ಪ್ರಯತ್ನವನ್ನೂ ಮಾಡಲಾಯಿತು. ಕೆರೆಗಳ ಕುರಿತು ರಸಪ್ರಶ್ನೆ ಕೂಡ ಆಯೋಜಿಸಲಾಗಿತ್ತು. [ಅಂದಿನ ಚೆಂದದ ಕೆರೆಗೆ ಇಂದೇನಾಗಿದೆ?]
ಯುನೈಟೆಡ್ ವೇ ಆಫ್ ಬೆಂಗಳೂರು ಸಂಸ್ಥೆಯ ಸಂಗಾತಿ ಎನ್ಜಿಓ ಸಮರ್ಥನಮ್ ಸಂಸ್ಥೆಯ ಅಂಜನಿ ಎಂಬ ವಿಕಲಚೇತನ ಕಲಾವಿದ ಕ್ಯಾನ್ವಾಸ್ ಮೇಲೆ ಸೃಷ್ಟಿಸಿದ ಉತ್ತರಹಳ್ಳಿ ಕೆರೆಯ ಚಿತ್ರ ಎಲ್ಲರ ಗಮನ ಸೆಳೆಯಿತು. ಅವರು ವಿದ್ಯಾರ್ಥಿಗಳನ್ನೇ ಉತ್ತೇಜಿಸಿ ಚಿತ್ರದಲ್ಲಿದ್ದ ಕೆರೆ ಹೊರ ಆವರಣಕ್ಕೆ ಬಣ್ಣ ತುಂಬಿಸಿ ಚಿತ್ರಕ್ಕೆ ಹೊಸರೂಪ ಕೊಡಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿಗಳೆಲ್ಲ ಈ ಚಿತ್ರದ ಮೇಲೆ ತಮ್ಮ ಹಸ್ತಾಕ್ಷರವನ್ನು ಬರೆದು ಈ ಅಭಿಯಾನವನ್ನು ಅನುಮೋದಿಸಿದರು.
ಕೊನೆಯಲ್ಲಿ 10 ಅತ್ಯುತ್ತಮ ಚಿತ್ರಗಳಿಗೆ ಮತ್ತು ರಸಪ್ರಶ್ನೆಯಲ್ಲಿ ವಿಜೇತರಾದ ಐವರಿಗೆ ಬಹುಮಾನ ವಿತರಿಸಲಾಯಿತು. ಬಹುಮಾನ ವಿಜೇತ ಮಕ್ಕಳು ಬೆಂಗಳೂರಿನ ಕೆರೆಗಳ ಉಳಿಕೆ ಮತ್ತು ಕಾಪಾಡುವ ಕುರಿತು ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಂಡರು.