ಕೆಟಿ ಗುರುಮೂರ್ತಿ ಕಾಮಾಕ್ಷಿಪಾಳ್ಯ ಪೊಲೀಸರ ವಶಕ್ಕೆ
ಬೆಂಗಳೂರು, ಜ.20 : ಮಹಿಳೆಯರಲ್ಲಿನ ಬಂಜೆತನ ಶೇ100ರಷ್ಟು ನಿವಾರಿಸುವೆ ಎಂದು ಹೇಳಿ ಹಲವು ಮಹಿಳೆಯರಿಗೆ ವಂಚಿಸಿದ ಆರೋಪದ ಮೇಲೆ ನಗರದ ಸೃಷ್ಟಿ ಗ್ಲೋಬಲ್ ಮೆಡಿಕೇರ್ ಹಾಗೂ ರಿಸರ್ಚ್ ಫೌಂಡೇಶನ್ ನ ವೈದ್ಯ ಕೆ.ಟಿ.ಗುರುಮೂರ್ತಿ ಅವರನ್ನು ಕಾಮಾಕ್ಷಿ ಪಾಳ್ಯ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
30ಕ್ಕೂ ಹೆಚ್ಚು ಅಧಿಕ ಮಹಿಳೆಯರು ನೀಡಿದ ದೂರಿನ ಅನ್ವಯ ಕಾಮಾಕ್ಷಿಪಾಳ್ಯ ಪೊಲೀಸರು ಸೋಮವಾರ ಸಂಜೆ ಕೆಟಿ ಗುರುಮೂರ್ತಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಆರೋಪಿ ಗುರುಮೂರ್ತಿ ನಗರದ ವಿವಿಧ ಬಡಾವಣೆಗಳಲ್ಲಿ ಮೆಡಿಕೆರ್ ಸೆಂಟರ್ ತೆರೆದಿದ್ದು, ನಕಲಿ ದಾಖಲೆಗಳನ್ನು ಇಟ್ಟುಕೊಂಡು ಮಹಿಳೆಯರಲ್ಲಿನ ಬಂಜೆತನ ನಿವಾರಿಸುವ ನೆಪದಲ್ಲಿ 2 ರಿಂದ 12 ಲಕ್ಷ ರೂ.ಗಳ ವರೆಗೆ ವಸೂಲಿ ಮಾಡುತ್ತಿದ್ದ ಎಂಬ ಆರೋಪಗಳಿವೆ. [ಗುರುಮೂರ್ತಿಗೆ ಬಂಧನ ಭೀತಿ]
ಡಾಕ್ಟರ್ ಪದವಿ ಪಡೆಯದೆ ನಕಲಿ ದಾಖಲಾತಿಗಳನ್ನು ಇಟ್ಟುಕೊಂಡು ಸ್ತ್ರೀ ರೋಗ ತಜ್ಞ ಎಂದು ಮಹಿಳೆಯರಿಗೆ ಚಿಕಿತ್ಸೆ ನೀಡುತ್ತಿದ್ದರು ಎಂಬ ಆರೋಪ ಗುರುಮೂರ್ತಿ ಅವರ ಮೇಲಿದೆ. ಈ ಸಂಬಂಧ ಕಾಮಾಕ್ಷಿಪಾಳ್ಯ, ನಂದಿನಿ ಲೇಔಟ್, ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಆದ್ದರಿಂದ ಸೋಮವಾರ ಅವರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಮುಂದುವರೆದಿದೆ.
ಟಿವಿ 9 ಕನ್ನಡ ವಾಹಿನಿಯಲ್ಲಿ ಗುರುಮೂರ್ತಿ ನಕಲಿ ವೈದ್ಯ ಎಂಬುದನ್ನು ನಿರೂಪಿಸಿದ 'ಬೇಟೆ' ಕಾರ್ಯಕ್ರಮ ಪ್ರಸಾರವಾದ ಮೇಲೆ ಈ ಗುರುಮೂರ್ತಿಗೆ ಕಟಂಕ ಆರಂಭವಾಗಿತ್ತು, ಕಾರ್ಯಕ್ರಮ ಪ್ರಸಾರವಾದ ನಂತರ ಗುರುಮೂರ್ತಿ ಅವರಿಂದ ವಂಚನೆಗೆ ಒಳಗಾದ ಮಹಿಳೆಯರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸೋಮವಾರ ಬೆಳಗ್ಗಿನಿಂದ ಗುರುಮೂರ್ತಿ ವಿವರ ಕಲೆಹಾಕಿದ್ದ ಪೊಲೀಸರು ಸಂಜೆ ಆತನನ್ನು ವಶಕ್ಕೆ ಪಡೆದಿದ್ದಾರೆ.
ಅಕ್ರಮ ಬಂಧನದಲ್ಲಿಟ್ಟ ಆರೋಪ : ಕೆಟಿ ಗುರುಮೂರ್ತಿ ಅವರ ವಿರುದ್ಧ ವಂಚನೆ ಪ್ರಕರಣದ ಜೊತೆಗೆ ಪತ್ನಿಯನ್ನು ಅಕ್ರಮವಾಗಿ ಬಂಧನದಲ್ಲಿಟ್ಟಿರುವ ಆರೋಪಗಳು ಇವೆ. ಪಶ್ಚಿಮ ವಲಯ ಡಿಸಿಪಿ ಲಬೂ ರಾಮ್ ನೇತೃತ್ವದಲ್ಲಿ ಗುರುಮೂರ್ತಿ ಅವರ ವಿಚಾರಣೆ ಆರಂಭವಾಗಿದೆ.