ಬೆಂಗಳೂರು ಪೊಲೀಸ್ ಕೈಗೆ ಸಿಕ್ಕಿಬಿದ್ದ ಖತರ್ನಾಕ್ ಕಳ್ಳರು
ಬೆಂಗಳೂರು, ಜು.25: ಕೆ.ಆರ್.ಪುರಂ ಠಾಣಾ ಪೊಲೀಸರು ಇಬ್ಬರು ಕುಖ್ಯಾತ ಸರಗಳ್ಳರು ಮತ್ತು ಅವರ ಆಭರಣಗಳನ್ನು ಖರೀದಿಸುತ್ತಿದ್ದ ಇಬ್ಬರನ್ನು ಬಂಧಿಸಿ 10 ಲಕ್ಷ ರೂ. ಮೌಲ್ಯದ ಮಾಲು ವಶಪಡಿಸಿಕೊಂಡಿದ್ದಾರೆ.
ಅಶೋಕ ನಗರದ ಸೈಯದ್ ಮೋಯಿನ್(29), ಶಿವಾಜಿನಗರದ ಅಕ್ರಂಪಾಷ(29), ಯಲಹಂಕದವರಾದ ಓಂ. ಪ್ರಕಾಶ್(30), ಜಸ್ರಾಮ್ (27) ಬಂಧಿತ ಆರೋಪಿಗಳು. ಬಂಧಿತರಿಂದ 10 ಲಕ್ಷ ರೂ. ಮೌಲ್ಯದ 242 ಗ್ರಾಂ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಪಲ್ಸಾರ್ ಬೈಕನ್ನು ವಶಪಡಿಸಿಕೊಂಡಿದ್ದಾರೆ.[ಪೊಲೀಸರ ಮೇಲೆ ಹಲ್ಲೆ ಮಾಡಿದ ಮಹಿಳೆ ಬಂಧನ]
ಮೋಯಿನ್ ಮತ್ತು ಅಕ್ರಂಪಾಶ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಎಂಟು ಕಳ್ಳತನ ಪ್ರಕರಣಗಳು ದಾಖಲಾಗಿತ್ತು. ಕಳ್ಳತನ ಮಾಡಿದ ಬಳಿಕ ಒಡವೆಗಳನ್ನು ಇವರು ಓಂ. ಪ್ರಕಾಶ್, ಜಸ್ರಾಮ್ಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.[ಒಂಟಿ ಮಹಿಳಾ ಟೆಕ್ಕಿ ಮನೆಗೆ ನುಗ್ಗಿ ಕಳ್ಳತನ]
ಇತ್ತೀಚೆಗೆ ಸರಗಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸರಗಳ್ಳರ ಬಗ್ಗೆ ಮಾಹಿತಿ ಕಲೆಹಾಕಿ ಪತ್ತೆ ಮಾಡಲು ಕೃಷ್ಣರಾಜಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಟಿ. ಸಂಜೀವರಾಯಪ್ಪ ನೇತೃತ್ವದ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡ ಸರಗಳ್ಳರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.