ವರದಕ್ಷಿಣೆ ಕಿರುಕುಳ: ಪತಿಗೆ 10 ವರ್ಷ ಜೈಲು
ಬೆಂಗಳೂರು, ಜು.15: ವರದಕ್ಷಿಣೆ ಕಿರುಕುಳ ನೀಡಿ ಪತ್ನಿ ಆತ್ಮಹತ್ಯೆಗೆ ಕಾರಣನಾದ ಆಕೆಯ ಪತಿಗೆ 10 ವರ್ಷ ಶಿಕ್ಷೆ, ಅತ್ತೆಗೆ 7 ವರ್ಷ ಶಿಕ್ಷೆ ವಿಧಿಸಿ 15ನೇ ತ್ವರಿತ ವಿಲೇವಾರಿ ನ್ಯಾಯಾಲಯ ತೀರ್ಪು ನೀಡಿದೆ.
ಚನ್ನಮ್ಮನ ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದ ಹರೀಶ್, ಆತನ ತಾಯಿ ಲಕ್ಷ್ಮೀ ಶಿಕ್ಷೆಗೊಳಗಾದವರು. ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಪುಟ್ಟಮ್ಮರವರು ತನಿಖೆ ನಡೆಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾ.ಶುಕ್ಲಾಕ್ಷ ಪಾಲನ್ ಅವರು ಶುಕ್ರವಾರ ಈ ತೀರ್ಪು ನೀಡಿದ್ದಾರೆ. ಸರ್ಕಾರದದ ಪರವಾಗಿ ಅಭಿಯೋಜಕ ಎಸ್.ಎನ್.ಹಿರೇಮನಿ ವಾದಮಂಡಿಸಿದ್ದರು.
ಘಟನೆ ಹಿನ್ನಲೆ: ಇಟ್ಟಮಡು ಟಿ.ಜಿ.ಲೇಔಟ್ ನಿವಾಸಿ ಹರೀಶ್ ಜೊತೆ 2008ರಲ್ಲಿ ಇಂದುಮತಿಯವರ ವಿವಾಹ ನಡೆದಿತ್ತು. ವಿವಾಹದ ಸಂದರ್ಭದಲ್ಲಿ 20 ಸಾವಿರ ರೂ.ನಗದು, ಒಂದು ಚಿನ್ನದ ಉಂಗುರವನ್ನು ವರದಕ್ಷಿಣೆಯಾಗಿ ಇಂದುಮತಿಯವರ ಪೋಷಕರು ಹರೀಶ್ಗೆ ನೀಡಿದ್ದರು.
ಮದುವೆಯಾದ ಕೆಲ ದಿನಗಳಲ್ಲೇ ತವರು ಮನೆಯಿಂದ ಮತ್ತಷ್ಟು ಚಿನ್ನ ಮತ್ತು ಹಣವನ್ನು ತರುವಂತೆ ಪತಿ ಮತ್ತು ಅತ್ತೆ ಇಂದುಮತಿಯವರಿಗೆ ಹೊಡೆದು ಕಿರುಕುಳ ನೀಡುತ್ತಿದ್ದರು. ಏಳು ತಿಂಗಳ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಮಗು ಬೇಡ, ಗರ್ಭಪಾತ ಮಾಡಿಸು ಎಂದು ಒತ್ತಾಯಿಸಿ ಬಲವಂತವಾಗಿ ಸೆಂಟ್ ಕುಡಿಸಿ ಕಿರುಕುಳ ನೀಡಿದ್ದರು. ಕಿರುಕುಳ ತಾಳಲಾರದೇ 2007 ಸೆಪ್ಟೆಂಬರ್ನಲ್ಲಿ ಇಂದುಮತಿಯವರು ಮನೆಯಲ್ಲಿ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಇಂದುಮತಿ ತಾಯಿ ಕಮಲಮ್ಮ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಪ್ರಕರಣವನ್ನು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆದು ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಶುಕ್ರವಾರ 15ನೇ ತ್ವರಿತ ನ್ಯಾಯಾಲಯದ ನ್ಯಾಯಾಧೀಶ ಶುಕ್ಲಾಕ್ಷ ಪಾಲನ್ ಶಿಕ್ಷೆ ಪ್ರಕಟಿಸಿದರು. ಐಪಿಸಿ ಕಾಯ್ದೆ 304(ಬಿ) ಹಾಗೂ 398ಎ ಅನ್ವಯ ಹರೀಶ್ಗೆ 10 ವರ್ಷಗಳ ಶಿಕ್ಷೆ, 10ಸಾವಿರ ರೂ. ದಂಡ, ಹಾಗೂ ಲಕ್ಷ್ಮಮ್ಮಗೆ 7 ವರ್ಷಗಳ ಶಿಕ್ಷೆ10 ಸಾವಿರ ರೂ ದಂಡ ವಿಧಿಸಿದೆ. ಅಲ್ಲದೇ ನೊಂದ ತಾಯಿ ಕಮಲಮ್ಮ ಅವರಿಗೆ ಪರಿಹಾರವಾಗಿ 10 ಸಾವಿರ ನೀಡುವಂತೆ ಆರೋಪಿಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.