ಸಲಿಂಗಕಾಮದ ಬಗ್ಗೆ ರವಿಶಂಕರ ಗುರೂಜಿ ಹೀಗಂತಾರೆ
ಬೆಂಗಳೂರು, ಡಿ. 12 : ಸಲಿಂಗಕಾಮ ಕಾನೂನು ಬಾಹಿರ ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದ್ದನ್ನು ಹಿಂದೂವಾದಿ ಯೋಗಗುರು ಬಾಬಾ ರಾಮದೇವ್ ಅವರು ಮುಕ್ತಕಂಠದಿಂದ ಸ್ವಾಗತಿಸಿದ್ದರೆ, ಬೆಂಗಳೂರಿನ ಧಾರ್ಮಿಕ ಗುರು ಶ್ರೀಶ್ರೀ ರವಿಶಂಕರ ಗುರೂಜಿ ಅವರು ಸಲಿಂಗಕಾಮ ಕ್ರೈಂ ಅಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಸಲಿಂಗಕಾಮ ಅಪರಾಧವಲ್ಲ. ಲೈಂಗಿಕ ಆಯ್ಕೆಗೆ ಸಂಬಂಧಿಸಿದಂತೆ ಯಾರೂ ಭೇದಭಾವಕ್ಕೆ ಒಳಗಾಗಬಾರದು" ಎಂದು ಆರ್ಟ್ ಆಫ್ ಲಿವಿಂಗ್ ಫೌಂಡೇಷನ್ ಸ್ಥಾಪಕ ರವಿಶಂಕರ ಗುರೂಜಿ ಅವರು ಸಾಲುಸಾಲು ಟ್ವೀಟ್ ಮಾಡಿದ್ದು, ಸುಪ್ರೀಂ ಕೋರ್ಟ್ ತೀರ್ಪನ್ನು ತೀವ್ರವಾಗಿ ವಿರೋಧಿಸಿದ್ದಾರೆ.
ಹಿಂದೂ ಧರ್ಮದಲ್ಲಿ ಸಲಿಂಗಕಾಮವನ್ನು ಎಂದೂ ಅಪರಾಧವೆಂದು ಪರಿಗಣಿಸಿಯೇ ಇಲ್ಲ. ನಿಜ ಹೇಳಬೇಕೆಂದರೆ ಅಯ್ಯಪ್ಪ ದೇವರು ಹರಿ-ಹರನಿಂದಲೇ ಹುಟ್ಟಿದ್ದು. ಲೈಂಗಿಕ ಆಯ್ಕೆಯ ಆಧಾರದ ಮೇಲೆ ಒಬ್ಬ ವ್ಯಕ್ತಿಯನ್ನು ಅಪರಾಧಿ ಎಂದು ಪರಿಗಣಿಸುವುದು ಅಸಂಬದ್ಧ ಎಂದು ಗುರೂಜಿ ಅವರು, ಬಾಬಾ ರಾಮದೇವ್ ಅವರಿಗೆ ವ್ಯತಿರಿಕ್ತವಾದ ಹೇಳಿಕೆಯನ್ನು ನೀಡಿದ್ದಾರೆ. [ಸಿಡಿಮಿಡಿಗೊಂಡ ಸಲಿಂಗಿಗಳು]
ಸ್ಮೃತಿಯಲ್ಲಿ ಸಲಿಂಗಕಾಮವನ್ನು ಕಾನೂನು ಬಾಹಿರ ಎಂದು ಹೇಳಿಲ್ಲ. ಪ್ರತಿಯೊಬ್ಬನಲ್ಲಿಯೂ ಪುರುಷ ಮತ್ತು ಸ್ತ್ರೀ ಅಂಶಗಳು ಇದ್ದೇ ಇರುತ್ತವೆ. ಅವರವರ ಪ್ರಾಬಲ್ಯಕ್ಕೆ ತಕ್ಕಂತೆ ಅವರವರ ಪ್ರವೃತ್ತಿಗಳು ಬದಲಾಗುತ್ತಿರುತ್ತವೆ ಎಂದು ಜಾಗತಿಕ ಧಾರ್ಮಿಕ ಗುರು ಎಂದೇ ಖ್ಯಾತರಾಗಿರುವ ರವಿಶಂಕರ ಗುರೂಜಿ ಅವರು ವ್ಯಾಖ್ಯಾನಿಸಿದ್ದಾರೆ.
ಸಲಿಂಗಕಾಮ ಅಪರಾಧವಲ್ಲ ಎಂದು ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸಂಘಟನೆಗಳು ತೀವ್ರವಾಗಿ ವಿರೋಧಿಸಿದ್ದವು. ಬಿಜೆಪಿ ನಾಯಕ ಬಿ.ಪಿ. ಸಿಂಘಾಲ್, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಉತ್ಕಲ್ ಕ್ರಿಶ್ಚಿಯನ್ ಕೌನ್ಸಿಲ್ ಮತ್ತು ಅಪೊಸ್ಟೋಲಿಕ್ ಚರ್ಚಸ್ ಅಲೈಯನ್ಸ್ ಸಂಸ್ಥೆಗಳು ಜಂಟಿಯಾಗಿ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದವು. [ಸಲಿಂಗಕಾಮ ಅಪರಾಧ : ಸುಪ್ರೀಂ ಕೋರ್ಟ್]
ಸಲಿಂಗರತಿ ಅಪರಾಧವಲ್ಲ ಎಂದು 2009ರಲ್ಲಿ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಡಿ.11ರಂದು ತಳ್ಳಿಹಾಕಿದೆ. ಈ ಮೂಲಕ ಗುದ ಸಂಭೋಗ ದಂಡಾರ್ಹ ಎಂದು ಹೇಳುವ ಭಾರತೀಯ ದಂಡ ಸಂಹಿತೆಯ ನಿಯಮ 377ರ ಸಾಂವಿಧಾನಿಕ ಸಿಂಧುತ್ವವನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿಹಿಡಿದಿದೆ. ಈ ತೀರ್ಪನ್ನು ವಿರೋಧಿಸಿ ದೇಶಾದ್ಯಂತ ಲೈಂಗಿಕ ಅಲ್ಪಸಂಖ್ಯಾತರಿಂದ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ.
ಈ ನಡುವೆ, ಸೋನಿಯಾ ಗಾಂಧಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಸಂಸತ್ತಿನಲ್ಲಿ ದೇಶದ ಎಲ್ಲ ನಾಗರಿಕರ ಸ್ವಾತಂತ್ರ್ಯ ಹಕ್ಕನ್ನು ಉಳಿಸಲು ಎಲ್ಲ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ. ಬುಧವಾರ ನೀಡಿದ ತೀರ್ಪಿನಲ್ಲಿ ಕೂಡ, ಬೇಕಿದ್ದರೆ ಭಾರತೀಯ ದಂಡ ಸಂಹಿತೆಯನ್ನೇ ತಿದ್ದುಪಡಿ ಮಾಡಿ 377 ಸೆಕ್ಷನ್ ಕಿತ್ತಹಾಕಿ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಸವಾಲು ಎಸೆದಿದ್ದರು. [ಸಲಿಂಗಕಾಮಕ್ಕೆ ಜೈ ಎಂದ ಸೋನಿಯಾ]
Homosexuality
has
never
been
considered
a
crime
in
Hindu
culture.
In
fact,
Lord
Ayyappa
was
born
of
Hari-Hara
(Vishnu
&
Shiva).
#Sec377
—
Sri
Sri
Ravi
Shankar
(@SriSriSpeaks)
December
11,
2013