ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಮಳೆ
ಬೆಂಗಳೂರು, ಸೆ. 26 : ಸೆಪ್ಟೆಂಬರ್ ಕೊನೆಯವಾರದಲ್ಲಿ ಬೆಂಗಳೂರಿನಲ್ಲಿ ಭಾರೀ ಮಳೆಯಾಗಲಿದೆ ಎಂಬ ಹವಾಮಾನ ಇಲಾಖೆಯ ಮುನ್ಸೂಚನೆ ನಿಜವಾಗಿದೆ. ಗುರುವಾರ ರಾತ್ರಿ ನಾಲ್ಕು ಗಂಟೆ ಅವಧಿಯಲ್ಲಿ ಬೆಂಗಳೂರಿನಲ್ಲಿ ಸುರಿದ ಮಳೆಯಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶುಕ್ರವಾರ ಬೆಳಗ್ಗೆಯೂ ಕೆಲವು ಪ್ರದೇಶಗಳಲ್ಲಿ ನೀರು ನಿಂತಿದೆ. ಇನ್ನು ಎರಡು ದಿನ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಗುರುವಾರ ರಾತ್ರಿ 11.30ರವರೆಗೆ ಒಟ್ಟು 130 ಮಿ.ಮೀ. ಮಳೆಯಾಗಿದೆ. ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ 16.9 ಮಿ.ಮೀ. ಮಳೆ ಬಂದಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನಿರ್ದೇಶಕರಾದ ಬಿ.ಪುಟ್ಟಣ್ಣ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಮಳೆ ಹಾನಿ ಬಗ್ಗೆ ಚರ್ಚಿಸಲು ಬಿಬಿಎಂಪಿ ಕಚೇರಿಯಲ್ಲಿ ಮೇಯರ್ ಎನ್.ಶಾಂತ ಕುಮಾರಿ ಸಭೆ ನಡೆಸುತ್ತಿದ್ದಾರೆ. [ಬೆಂಗಳೂರಲ್ಲಿ ಬಂದಿತು ಭಾರೀ ಮಳೆ]
ಮಳೆಗೆ ಕಾರಣವೇನು : ಕನ್ಯಾಕುಮಾರಿಯ ದಕ್ಷಿಣ ಭಾಗದ ಕೊಮರಿನ್ ಎಂಬ ಪ್ರದೇಶದಲ್ಲಿ ಸೃಷ್ಟಿಯಾಗಿರುವ ಸುಳಿಗಾಳಿ ಒಂದೇ ಕಡೆ ಕೇಂದ್ರೀಕೃತವಾಗಿದ್ದು, ಸಮುದ್ರ ಮಟ್ಟದಿಂದ 3.6 ಕಿ.ಮೀ. ಎತ್ತರದಲ್ಲಿದೆ. ಗಾಳಿಯ ತೇವಾಂಶದಿಂದ ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ ಎಂದು ಪುಟ್ಟಣ್ಣ ಅವರು ಹೇಳಿದ್ದಾರೆ. [ನಿಜವಾಯಿತು ಹವಾಮಾನ ಇಲಾಖೆ ಭವಿಷ್ಯ]
ಮಳೆಯ ಅವಾಂತರಗಳು : ಗುರುವಾರ ಸುರಿದ ಮಳೆಯಿಂದಾಗಿ ಓಕಳಿಪುರಂ, ಉಪ್ಪಾರಪೇಟೆ, ಮಲ್ಲೇಶ್ವರಂ, ರಿಚ್ಮಂಡ್ ಸರ್ಕಲ್, ನಾಯಂಡನಹಳ್ಳಿ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬೈಕ್ ಸವಾರರು ರಸ್ತೆಯಲ್ಲಿ ಮುಂದೆ ಚಲಿಸಲಾಗದೆ ಪರದಾಡಿದರು.
ಕೆ.ಪಿ. ಅಗ್ರಹಾರದಲ್ಲಿ ಮನಗೆಳಿಗೆ ನೀರು ನುಗ್ಗಿತ್ತು, ಮಲ್ಲೇಶ್ವರಂ, ಜಯನಗರ, ಕುಮಾರಸ್ವಾಮಿ ಲೇಔಟ್, ಜಯನಗರ ಮುಂತಾದ ಕಡೆ ಮರಗಳು ಧರೆಗುರುಳಿ ವಾಹನ ಸಂಚಾರಕ್ಕೆ ತೊಂದರೆ ಉಂಟುಮಾಡಿತು.