ಕುಮಾರಸ್ವಾಮಿ ರಾಧಿಕಾ ಆಸ್ತಿ ಬಹಿರಂಗಪಡಿಸಲಿ: ಕೆಪಿಸಿಸಿ
ಚಿಕ್ಕಬಳ್ಳಾಪುರ, ಏ.9: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ರಾಮನಗರ ಶಾಸಕ, ಜೆಡಿಎಸ್ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಮಾರಸ್ವಾಮಿ ಅವರ ಎರಡನೆಯ ಪತ್ನಿಯ ವಿಷಯ ಪ್ರಸ್ತಾಪಿಸಿರುವ ರಾಜ್ಯ ಕಾಂಗ್ರೆಸ್, ಕುಮಾರಸ್ವಾಮಿ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿದೆ.
ಜೆಡಿಎಸ್ ಅಭ್ಯರ್ಥಿ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಸುವಾಗ ಚುನಾವಣಾ ಆಯೋಗಕ್ಕೆ ನೀಡಿರುವ ಅಫಿಡವಿಟ್ ನಲ್ಲಿ ತಮ್ಮ ಎರಡನೆಯ ಪತ್ನಿ ರಾಧಿಕಾ ಕುಮಾರಸ್ವಾಮಿ ಅವರ ವಿಷಯವನ್ನು ಮರೆಮಾಚಿದ್ದಾರೆ. ಕುಮಾರಸ್ವಾಮಿ ಅವರು ತಮ್ಮ ಎರಡನೆಯ ಪತ್ನಿ ರಾಧಿಕಾ ಅವರ ಆಸ್ತಿಪಾಸ್ತಿಯ ವಿವರವನ್ನು ಬಹಿರಂಗಪಡಿಸಿಲ್ಲ ಎಂದು ಕೆಪಿಸಿಸಿ ಕಾನೂನು ಘಟಕದ ಮುಖ್ಯಸ್ಥ ಧನಂಜಯ್ ಸುದ್ದಿಗೋಷ್ಠಿಯಲ್ಲಿ ಆಯೋಗದ ಗಮನ ಸೆಳೆದಿದ್ದಾರೆ.
ರಾಧಿಕಾ ಬಗ್ಗೆ ಕಿಂಚಿತ್ತು ಮಾಹಿತಿಯನ್ನೂ ನೀಡಿಲ್ಲ:
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಎರಡನೆಯ ಪತ್ನಿ ರಾಧಿಕಾ ಅವರ ಹೆಸರಿನಲ್ಲಿ ಮನೆ, ಬಂಗಲೆಗಳು ಸೇರಿದಂತೆ ಅಪಾರ ಆಸ್ತಿ ಮಾಡಿದ್ದಾರೆ. ಆದರೆ ಅದರ ಬಗ್ಗೆ ಕುಮಾರಸ್ವಾಮಿ ಕಿಂಚಿತ್ತು ಮಾಹಿತಿಯನ್ನೂ ನೀಡಿಲ್ಲ ಎಂದು ಕೆಪಿಸಿಸಿಯ ಧನಂಜಯ್ ಅವರು ಆಯೋಗದ ಗಮನ ಸೆಳೆದಿದ್ದಾರೆ.
ಕುಮಾರಸ್ವಾಮಿ ತಮ್ಮ ಪತ್ನಿ ರಾಧಿಕಾ ಹೆಸರಿನಲ್ಲಿ ಅಪಾರ ಆಸ್ತಿ ಮಾಡಿದ್ದು, ಅದು ಕಪ್ಪು ಹಣಕ್ಕೆ ಹೇರತುವಾಗಿದೆ. ಆ ಕಪ್ಪು ಹಣವನ್ನು ಈಗ ಕುಮಾರಸ್ವಾಮಿ ಚುನಾವಣಾ ಪ್ರಚಾರದಲ್ಲಿ ಬಳಸುವ ಮೂಲಕ ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಹಾಗಾಗಿ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಬೇಕು ಎಂದು ಚುನಾವಣಾ ಆಯೋಗವನ್ನು ಧನಂಜಯ್ ಕೋರಿದ್ದಾರೆ.