ನಮ್ಮ ಮೆಟ್ರೋದಲ್ಲಿ ಯುವತಿಗೆ ಲೈಂಗಿಕ ಕಿರುಕುಳ
ಬೆಂಗಳೂರು, ಅ. 26 : ನಿರಂತರವಾಗಿ ಲೈಂಗಿಕವಾಗಿ ಹಿಂಸಿಸುತ್ತಿದ್ದ ಆ ಯುವತಿಯ ಸಹಾಯದ ಮೊರೆಗೆ ಆ ಸೆಕ್ಯೂರಿಟಿ ಗಾರ್ಡ್ ಓಗೊಡಲಿಲ್ಲ. ಸಾಲದ್ದಕ್ಕೆ ಆ ಲೈಂಗಿಕ ಹಿಂಸೆಯನ್ನು ಸೆರೆಹಿಡಿದ ಸಿಸಿಟಿವಿ ಫುಟೇಜನ್ನು ತರಿಸಿಕೊಳ್ಳಲು ಬೆಂಗಳೂರಿನ ಪೊಲೀಸರ್ ಅನಾಮತ್ ಹನ್ನೆರಡು ದಿನಗಳನ್ನು ತೆಗೆದುಕೊಂಡಿದ್ದಾರೆ!
ಲೈಂಗಿಕ ಹಿಂಸೆಗೊಳದಾಗ ಯುವತಿಯನ್ನು ರಕ್ಷಿಸಬೇಕಾದವರು ನಡೆದುಕೊಂಡಿರುವ ಪರಿಯಿದು. ಇಂಥ ನಾಚಿಕೆಗೇಡಿನ ಘಟನೆ ನಡೆದಿರುವುದು ನವದೆಹಲಿಯಲ್ಲಲ್ಲ, ಬೆಂಗಳೂರಿನಲ್ಲಿ, ಅದೂ ಬೆಂಗಳೂರಿಗರ ಕನಸಿನ ಕೂಸಾದ ನಮ್ಮ ಮೆಟ್ರೋದಲ್ಲಿ. ಸಾಲದೆಂಬಂತೆ, ಆ ನಾಲ್ವರು ದುರುಳರು ಭದ್ರತಾ ಸಿಬ್ಬಂದಿ ಎದುರಿಗೇ ಯುವತಿಗೆ ಬೆದರಿಕೆ ಒಡ್ಡಿದ್ದಾರೆ.
ಅಕ್ಟೋಬರ್ 20ರಂದು ಎರಡನೇ ಹುಟ್ಟುಹಬ್ಬ ಆಚರಿಸಿಕೊಳ್ಳುವ ಕೆಲವೇ ದಿನಗಳ ಮುನ್ನ ಅ.12ರಂದು ಸಂಜೆ 8 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಪ್ರಕೃತಿ ವರ್ಮಾ ಎಂಬ ಕಾಲೇಜು ವಿದ್ಯಾರ್ಥಿನಿ ಬೈಯಪ್ಪನಹಳ್ಳಿಗೆ ಹೋಗಲು ಎಂಜಿ ರಸ್ತೆಯಲ್ಲಿ ನಮ್ಮ ಮೆಟ್ರೋ ಹತ್ತಿದ್ದಾಳೆ. ಆಕೆ ಕುಳಿತಿದ್ದ ಜಾಗದಲ್ಲಿದ್ದ ನಾಲ್ವರು ಯುವಕರು ಅಶ್ಲೀಲ ಸಂಜ್ಞೆ ಮಾಡಲು ಶುರು ಮಾಡಿದ್ದಾರೆ.
ಪ್ರಕೃತಿ ತನ್ನ ಸ್ಥಳವನ್ನು ಬದಲಾಯಿಸಿದರೂ ಬಿಡದ ಯುವಕರು ಆಕೆಯನ್ನು ಹಿಂಬಾಲಿಸಿದ್ದಲ್ಲದೆ, ಆಕೆಯ ಮೇಲೆ ಒರಗಿಕೊಳ್ಳುವುದು, ಅಶ್ಲೀಲ ಕಾಮೆಂಟ್ ಪಾಸ್ ಮಾಡುವುದು ಮುಂತಾದ ಕಪಿಚೇಷ್ಟೆಯನ್ನು ಮತ್ತೆ ಮುಂದುವರಿಸಿದ್ದಾರೆ. ವಿವೇಕಾನಂದ ರಸ್ತೆ ನಿಲ್ದಾಣದಲ್ಲಿ ಆಕೆ ಅಲ್ಲಿದ್ದ ಭದ್ರತಾ ಸಿಬ್ಬಂದಿಗೆ ಸಹಾಯಕ್ಕಾಗಿ ವಿನಂತಿಸಿಕೊಂಡರೂ ಪ್ರಯೋಜನವಾಗಿಲ್ಲ. ಆತ ಸಹಾಯ ಮಾಡಲು ನಿರಾಕರಿಸಿದ್ದಾನೆ.
ನಂತರ ಮತ್ತೊಬ್ಬ ಅಧಿಕಾರಿಯ ಸಹಾಯ ಕೋರಿದಾಗ ಅವರು ಬೈಯಪ್ಪನಹಳ್ಳಿ ಕಂಟ್ರೋಲ್ ರೂಂಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ. ಇಷ್ಟಾದರೂ ನಮ್ಮ ಮೆಟ್ರೋ ಅಧಿಕಾರಿಗಳು ಪೊಲೀಸರಿಗೆ ಈ ವಿಷಯವನ್ನು ತಿಳಿಸಿಲ್ಲ. ಆದರೆ, ಪೊಲೀಸ್ ಠಾಣೆಗೆ ದೂರು ನೀಡಬೇಕೆಂದು ಯುವತಿಗೆ ಹೇಳಿದ್ದಾರೆ.
ಯುವಕರನ್ನು ಬೆಂಡೆತ್ತಲೇಬೇಕೆಂದು ತೀರ್ಮಾನಿಸಿದ್ದ ಯುವತಿ ಬಿಡದೆ ಹಲಸೂರು ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾಳೆ. ಆದರೆ, ಅಲ್ಲಿ ಕೂಡ ತ್ವರಿತಗತಿಯಲ್ಲಿ ಪೊಲೀಸರು ಕಾರ್ಯಾಚರಣೆಗಿಳಿದಿಲ್ಲ. ನಮ್ಮ ಮೆಟ್ರೋದಿಂದ ಸಿಸಿಟಿವಿ ವಿಡಿಯೋ ತರಿಸಿಕೊಳ್ಳಲು ಕನಿಷ್ಠ ಹತ್ತು ದಿನಗಳನ್ನು ತೆಗೆದುಕೊಂಡಿದ್ದಾರೆ.
ಈ ಘಟನೆ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದಕರ್ ಅವರ ಗಮನಕ್ಕೆ ಬಂದ ನಂತರವಷ್ಟೇ ಪೊಲೀಸರು ಕಾರ್ಯಾಚರಣೆಗಿಳಿದಿದ್ದಾರೆ. ಸಿಸಿಟಿವಿ ವಿಡಿಯೋ ನೋಡಿದ ಪೊಲೀಸರು ಈಗ ಯುವಕರ ಪೋಟೋಗಳನ್ನು ನಮ್ಮ ಮೆಟ್ರೋದ ಎಲ್ಲ ನಿಲ್ದಾಣದ ಸಿಬ್ಬಂದಿಗಳಿಗೆ ಮತ್ತು ಅಧಿಕಾರಿಗಳಿಗೆ ರವಾನಿಸಿದ್ದಾರೆ ಮತ್ತು ಎಲ್ಲ ಪೊಲೀಸ್ ಠಾಣೆಗಳಿಗೆ ಕಳಿಸಿದ್ದಾರೆ.
ಸಿಸಿಟಿವಿಯಲ್ಲಿ ಎಲ್ಲ ಯುವಕರು ಮಾಡಿದ ಹುಚ್ಚಾಟಗಳು ದಾಖಲಾಗಿವೆ. ಓರ್ವ ಜೀನ್ಸ್ ಮತ್ತು ಟಿಶರ್ಟ್ ಧರಿಸಿದ್ದ ಯುವಕ, ಯುವತಿಯ ಫೋಟೋ ತೆಗೆಯಲು ಕೂಡ ಯತ್ನಿಸಿದ್ದು ದಾಖಲಾಗಿದೆ. ಈ ಯುವಕರ ಎಲ್ಲೇ ಕಂಡುಬಂದರೂ ಅವರ ಬಗ್ಗೆ ತಕ್ಷಣ ಸುಳಿವು ನೀಡಬೇಕೆಂದು ಸೂಚಿಸಲಾಗಿದೆ.