ಸಿದ್ದರಾಮಯ್ಯ ಗೋಕರ್ಣದ ಆತ್ಮಲಿಂಗಕ್ಕೆ ಸಮ
ಬೆಂಗಳೂರು, ಏ 8: ಹಿರಿಯ ಕಾಂಗ್ರೆಸ್ ಮುಖಂಡ ಸಿ ಎಂ ಇಬ್ರಾಹಿಂ, ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಗೋಕರ್ಣದ ಆತ್ಮಲಿಂಗಕ್ಕೆ ಹೋಲಿಸಿದ್ದಾರೆ. ಸಿದ್ದರಾಮಯ್ಯನವರನ್ನು ಸಿಎಂ ಹುದ್ದೆಯಿಂದ ಅಲುಗಾಡಿಸಲು ಯಾರಿಗೂ ಸಾಧ್ಯವಿಲ್ಲ ಎಂದಿದ್ದಾರೆ.
ಸೋಮವಾರ (ಏ 7) ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚಿಸುತ್ತಾ ಮಾತನಾಡುತ್ತಿದ್ದ ಇಬ್ರಾಹಿಂ, ಗೋಕರ್ಣದ ಆತ್ಮಲಿಂಗವನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ. ಹಾಗೇ, ಇನ್ನೈದು ವರ್ಷ ನಮ್ಮ ಸಿದ್ರಾಮಣ್ಣನವರನ್ನು ಸಿಎಂ ಹುದ್ದೆಯಿಂದ ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಯಾವತ್ತೂ ಶೋಷಿತರ ಮತ್ತು ಬಡವರ ಪರವಾಗಿ ನಿಲ್ಲುವ ಪಕ್ಷ. ನಮ್ಮ ಸಿದ್ದಾಂತವೇ ಬಡವರ ಏಳಿಗೆ. ಸಮಾಜದಲ್ಲಿ ಕೋಮುವಾದದ ವಿಷಬೀಜ ಬಿತ್ತಿ ರಾಜಕೀಯ ಮಾಡುವವರು ನಾವಲ್ಲ ಎಂದು ಇಬ್ರಾಹಿಂ ಹೇಳಿದ್ದಾರೆ. (ಗೋಕರ್ಣದ ಮಹಾಬಲೇಶ್ವರನಿಗೆ ಭಕ್ತಕೋಟಿಯ ನಮನ)
ಲೋಕಸಭೆಯ ಚುನಾವಣೆಯ ನಂತರ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಪದಚ್ಯುತಿಗೊಳ್ಳಲಿದ್ದಾರೆ ಎನ್ನುವುದು ಬಿಜೆಪಿ ಮತ್ತು ಜೆಡಿಎಸ್ ಹಬ್ಬಿಸುತ್ತಿರುವ ಗಾಳಿಸುದ್ದಿ. ಸಮರ್ಥವಾಗಿ ರಾಜ್ಯದ ಮತದಾರರನ್ನು ಎದುರಿಸಲಾಗದೇ ಈ ರೀತಿಯ ವಾಮಮಾರ್ಗವನ್ನು ಬಿಜೆಪಿ ಮತ್ತು ಜೆಡಿಎಸ್ ಅನುಸರಿಸುತ್ತಿದೆ ಎಂದು ಇಬ್ರಾಹಿಂ ಲೇವಡಿ ಮಾಡಿದ್ದಾರೆ.
ಕಳೆದ ಐದು ವರ್ಷದಲ್ಲಿ ಬಿಜೆಪಿ ಸರಕಾರದ ಸಾಧನೆ ಏನಂದರೆ ಮುಖ್ಯಮಂತ್ರಿಯಿಂದ ಹಿಡಿದು ಸಚಿವರುಗಳು ಜೈಲಿಗೆ ಹೋಗಿದ್ದು, ಅಸೆಂಬ್ಲಿಯಲ್ಲಿ ನೀಲಿ ಚಿತ್ರ ನೋಡಿದ್ದು. ಕರ್ನಾಟಕದಲ್ಲಿ ಬಿಜೆಪಿಯೆಂದರೆ ಭ್ರಷ್ಟಾಚಾರಕ್ಕೆ ಇರುವ ಇನ್ನೊಂದು ಹೆಸರು ಎಂದು ಇಬ್ರಾಹಿಂ, ಬಿಜೆಪಿ ನಾಯಕರುಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. (ಜ್ಯೋತಿರ್ಲಿಂಗಗಳ ಪುರಾಣ ಹಿನ್ನಲೆ)
ರಾಜ್ಯ ಬಿಜೆಪಿ ನಾಯಕರಿಗೆ ನೈತಿಕತೆ ಇಲ್ಲದೇ, ನರೇಂದ್ರ ಮೋದಿ ಹೆಸರಿನಲ್ಲಿ ಮತಯಾಚಿಸುತ್ತಿದ್ದಾರೆ. ಇದರಿಂದಲೇ ತಿಳಿಯುತ್ತದೆ ರಾಜ್ಯದಲ್ಲಿ ಬಿಜೆಪಿ ಯಾವ ಮಟ್ಟಕ್ಕೆ ಇಳಿದಿದೆ ಎಂದು. ದೇಶಕ್ಕೆ ಕಾಂಗ್ರೆಸ್ ಪಕ್ಷವೇ ಪರ್ಯಾಯ. ಸುಭದ್ರ ಮತ್ತು ಸುದೃಢ ಭಾರತ ನಿರ್ಮಾಣಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಬೇಕೆಂದು ಇಬ್ರಾಹಿಂ ಮತದಾರರಲ್ಲಿ ಮನವಿ ಮಾಡಿದ್ದಾರೆ.